ಶಿವಮೊಗ್ಗ: ಚಿಕ್ಕಮಗಳೂರಿನ ಶೃಂಗೇರಿಯ ಗೌರಿಗದ್ದೆ ಮಹಾತ್ಮ ಗಾಂಧಿಜೀ ಸೇವಾ ಟ್ರಸ್ಟ್ ಹಾಗೂ ಶಿವಮೊಗ್ಗದ ಸರ್ಜಿ ಫೌಂಡೇಶನ್ ಸಹಯೋಗದಲ್ಲಿ ಗುರುವಾರ ಸಕ್ರೆಬೈಲು, ಮಂಡಗದ್ದೆ ವ್ಯಾಪ್ತಿ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನ ವಿನಯ್ ಗುರೂಜೀ ಹಾಗೂ ಡಾ.ಧನಂಜಯ್ ಸರ್ಜಿ ವಹಿಸಿದ್ದರು. ನೂರಾರು ಜನ ಸ್ವಯಂಸೇವಕರು ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಗುರೂಜೀ ಅವರು, 'ಇಲ್ಲಿ ಇರುವವರೆಲ್ಲಾ ಕಸ ಹಾಕಿದವರೇ.., ಇದು ನನ್ನೊಬ್ಬನ ಕರ್ತವ್ಯ ಅಲ್ಲ. ಎಲ್ಲಾ ಆಶ್ರಮದ ಭಕ್ತರು ಆಗಾಗ ಈ ತರಹದ ಅಭಿಯಾನ ಇಟ್ಟುಕೊಂಡಿರುತ್ತೆವೆ. ಕಳೆದ ತಿಂಗಳು ದತ್ತಪೀಠದಲ್ಲಿ ಮಾಡಿದ್ದೆವು. ಈ ಸಲ ಸಕ್ರೆಬೈಲು ಬಿಡಾರದ ಸುತ್ತಲ ಹೆದ್ದಾರಿ ಸ್ವಚ್ಛ ಮಾಡಿದ್ದೇವೆ. ಹಲವು ಹಸುಗಳ ಕರುಳಿಗೆ ಪ್ಲಾಸ್ಟಿಕ್ ಸಿಲುಕಿಕೊಂಡು ಸಾಯುತ್ತವೆ. ಇಲ್ಲಿಗೆ ಬರುವ ಜನರು ಕುಡಿಯಲಿ ಬೇಡ ಅನ್ನೋದಿಲ್ಲ. ಆದರೆ ಅದಕ್ಕೊಂದು ವ್ಯವಸ್ಥೆ ಇದೆ. ಎಲ್ಲೆಂದರಲ್ಲಿ ಎಣ್ಣೆ ಬಾಟಲಿಗಳನ್ನ ಬಿಸಾಡಬಾರದು. ಪ್ರಧಾನಿ ಮೋದಿ ಎಲ್ಲೆಡೆ ಪ್ರವಾಸ ಮಾಡಿ ನಮ್ಮ ದೇಶಕ್ಕೆ ಜನರನ್ನ ಸೆಳೆಯುತ್ತಾರೆ. ರಸ್ತೆ ಮಧ್ಯೆ ಬಾಟಲಿಗಳಿದ್ದರೆ ಘನತೆ ಅನಿಸೋದಿಲ್ಲ. ಇಲ್ಲಿ ಹೊರದೇಶದವರು ಕಸ ಹಾಕುತ್ತಿಲ್ಲ. ಜೋಗ ಜಲಪಾತ ಹಾಗೂ ಆಗುಂಬೆಗಳಲ್ಲಿಯೂ ಕೂಡ ಅಭಿಯಾನ ಮುಂದುವರಿಸಬೇಕು' ಎಂದರು.
ಧನಂಜಯ್ ಸರ್ಜಿ ಮಾತನಾಡಿ, ಕಾರಲ್ಲಿ ಬಾರ್ ಆಗಿದೆ ದರ್ಬಾರ್ ಆಗಿದೆ ಎಂದರು. ವೀಕೆಂಡ್ ಮೋಜು ಮಸ್ತಿಗೆಂದು ಇಲ್ಲಿಗೆ ಬಂದು ಪರಿಸರ ಹಾಳು ಮಾಡುತ್ತಿದ್ದಾರೆ. ಕೋರೋನಾದಲ್ಲಿ ಆಕ್ಸಿಜನ್ ಇಲ್ಲದೇ ಪರಿತಪಿಸಿದ್ದೇವೆ. ನಮ್ಮ ಸುತ್ತಲ ಕಾಡನ್ನ ಉಳಿಸಿಕೊಳ್ಳಬೇಕು. ಆರು ಕಿಲೋಮೀಟರ್ ಹೆದ್ದಾರಿ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಆಯ್ದಿದ್ದೇವೆ. ಮಕ್ಕಳನ್ನೂ ಕರೆಸಿ ಅಭಿಯಾನದಲ್ಲಿ ಸೇರಿಸಿಕೊಂಡಿದ್ದೇವೆ. ಮಕ್ಕಳಲ್ಲೂ ಸಹ ಪರಿಸರ ಅರಿವು ಮೂಡಬೇಕು ಎಂಬುದು ನಮ್ಮ ಆಶಯ ಎಂದು ಸರ್ಜಿ ಹೇಳಿದರು.
ಧಾರ್ಮಿಕ ಕಾರ್ಯಗಳಿಂದ ದೇಶ, ಹಳ್ಳಿಗಳಿಂದ ಸಂಸ್ಕೃತಿ ಉಳಿಯುತ್ತದೆ: ವಿನಯ್ ಗುರೂಜಿ