ಆ್ಯಪ್ನಗರ

ಏರುವುದು, ಜಾರುವುದು ತಪ್ಪದ ಬ್ಯಾಡರಕೊಪ್ಪ ರಸ್ತೆ

ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದಿಂದ ಬ್ಯಾಡರಕೊಪ್ಪ ಗ್ರಾಮ ಸಂಪರ್ಕದ ಬೈ ಪಾಸ್‌ ರಸ್ತೆ ಮಳೆಗಾಲದಲ್ಲಿ ಜಾರು ಬಂಡಿಯ ರಸ್ತೆಯಾಗಿ ಪರಿಣಮಿಸಿದೆ.

Vijaya Karnataka 27 Jun 2018, 5:00 am
ಆನಂದಪುರಂ : ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಗ್ರಾಮದಿಂದ ಬ್ಯಾಡರಕೊಪ್ಪ ಗ್ರಾಮ ಸಂಪರ್ಕದ ಬೈ ಪಾಸ್‌ ರಸ್ತೆ ಮಳೆಗಾಲದಲ್ಲಿ ಜಾರು ಬಂಡಿಯ ರಸ್ತೆಯಾಗಿ ಪರಿಣಮಿಸಿದೆ.
Vijaya Karnataka Web badarakoppa road to rise not to slip
ಏರುವುದು, ಜಾರುವುದು ತಪ್ಪದ ಬ್ಯಾಡರಕೊಪ್ಪ ರಸ್ತೆ


ಚೆನ್ನಶೆಟ್ಟಿಕೊಪ್ಪದಿಂದ ಬ್ಯಾಡರಕೊಪ್ಪ ಗ್ರಾಮ ತಲುಪಲು ಜಂಬೂರಮನೆ ಮೂಲಕ ಮುಖ್ಯ ರಸ್ತೆ ಇದೆಯಾದರೂ ಸುಮಾರು 25-30 ಕುಟುಂಬಗಳಿಗೆ ಈ ರಸ್ತೆ ಅತಿ ಸಮೀಪದ ಬೈ ಪಾಸ್‌ ರಸ್ತೆಯಾಗಿದೆ. ಚೆನ್ನಶೆಟ್ಟಿಕೊಪ್ಪ ಗ್ರಾಮದ ಹುರುಳಿ ನಾರಾಯಣಪ್ಪ ಅವರ ಮನೆ ಸಮೀಪದಿಂದ ಸಾಗುವ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಒಂದು ಏರು ಏರುತ್ತಿದ್ದಂತೆ ಇಳಿಜಾರು ಆರಂಭವಾಗತ್ತದೆ. 2 ಕಿ.ಮೀ. ದೂರದ ಈ ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗುವಾಗ ಜತೆಗೆ ಇನ್ನೊಬ್ಬ ಸಹಾಯಕ ಬೇಕೇಬೇಕು. ಸಹಾಯಕ ಬೈಕ್‌ನ ಹಿಂಬದಿಯನ್ನು ಗಟ್ಟಿಯಾಗಿ ಹಿಡಿದು ಬೈಕ್‌ ಜಾರದಂತೆ ಸಮತೋಲನ ಕಾಪಾಡಬೇಕು. ಈ ರಸ್ತೆಯ ಕೆಸರಿನ ವಿಪರೀತತೆ ಬಗ್ಗೆ ಅರಿವಿಲ್ಲದೆ ಹೊಸಬರು ಆಗಮಿಸಿದರೆ ಒಮ್ಮೆಲೆ ಜಾರುತ್ತಾ ಗದ್ದೆಯ ಮೂಲೆಗೆ ಹೋಗಿ ಬೀಳಬೇಕಾಗುತ್ತದೆ. ಈ ರಸ್ತೆಯ ಕಡಿದಾದ ಇಳಿಜಾರು ಸಮತಟ್ಟುಗೊಳಿಸಿ ಜಲ್ಲೀಕರಣಗೊಳಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ ಸದಸ್ಯರ ವರೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಕೃಷಿ ಕಾರ್ಯ, ಬೆಳೆ ಕಟಾವಿನ ನಂತರ ಫಸಲನ್ನು ಸಾಗಿಸಿ ತರುವುದು, ಜಾನುವಾರುಗಳನ್ನು ಮೇಯಲು ತರುವುದು ಇತ್ಯಾದಿಗಳಿಗಾಗಿ ಈ ರಸ್ತೆ ಬಳಕೆ ಅನಿವಾರ್ಯವಾಗಿದೆ.

ಸ್ವಲ್ಪ ಮಳೆ ಬಿಡುವು ಕೊಟ್ಟು ಬಿಸಿಲು ಬಿದ್ದ ದಿನಗಳಲ್ಲಿ ರಸ್ತೆ ಜಾರಿಕೆಯಾಗದು ಎಂದು ಧೈರ್ಯ ಮಾಡಿ ಬೈಕ್‌ ಚಲಾಯಿಸಿದ ಹಲವರು ಉರುಳಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಈ ರಸ್ತೆಯನ್ನು ಜಲ್ಲೀಕರಣಗೊಳಿಸಿ ಚೆನ್ನಶೆಟ್ಟಿಕೊಪ್ಪದ ಗ್ರಾಮೀಣ ರೈತರು ತಮ್ಮ ಹೊಲ ಮತ್ತು ಸಮೀಪದ ಬ್ಯಾಡರಕೊಪ್ಪ ಗ್ರಾಮ ತಲುಪಲು ಉತ್ತಮಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

-----------
ಚೆನ್ನಶೆಟ್ಟಿಕೊಪ್ಪ-ಬ್ಯಾಡರಕೊಪ್ಪ ಸಂಪರ್ಕದ ಬೈ ಪಾಸ್‌ ರಸ್ತೆ ದುರಸ್ತಿಗೆ ಅನುದಾನ ನೀಡಲು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಬರುವ ಬೇಸಿಗೆಯಲ್ಲಿ ಈ ರಸ್ತೆ ಬಗ್ಗೆ ಕಾಮಗಾರಿ ಕೈಗೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಮೀಸಲಿಡಲು ನಿರ್ಧರಿಸಲಾಗಿದೆ.

- ಕೃಷ್ಣವೇಣಿ ನಾಗಪ್ಪ, ಹೊಸೂರು ಗ್ರಾ.ಪಂ.ಅಧ್ಯಕ್ಷ ರು

--------------
ಚೆನ್ನಶೆಟ್ಟಿಕೊಪ್ಪ-ಬ್ಯಾಡರಕೊಪ್ಪ ಗ್ರಾಮ ಸಂಪರ್ಕದ ರಸ್ತೆ ಅತೀ ಸಮೀಪದ ರಸ್ತೆಯಾಗಿದೆ. ರೈತರಿಗೆ ಹೊಲಗದ್ದೆಗೆ ಸಾಗಲು, ತಮ್ಮ ಬಂಧುಗಳ ಮನೆ ತಲುಪಲು ಈ ರಸ್ತೆ ಅನಿವಾರ್ಯವಾಗಿದೆ. ರಸ್ತೆಯಲ್ಲಿ ನಿತ್ಯ ಅತ್ಯಂತ ಸಂಕಷ್ಟದಲ್ಲಿ ಜನರು ಓಡಾಡುತ್ತಿದ್ದು, ತ್ವರಿತವಾಗಿ ರಸ್ತೆ ಅಭಿವೃದ್ಧಿಗೊಳ್ಳಬೇಕಿದೆ.

- ಹರುಳಿ ನಾರಾಯಣಪ್ಪ, ಹಿರಿಯ ನಾಗರಿಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ