ಆ್ಯಪ್ನಗರ

ಅಂಬ್ಲಿಗೊಳ ಜಲಾಶಯಕ್ಕೆ ಸಂಸದ ಬಿವೈಆರ್‌ ಬಾಗಿನ

ತಾಲೂಕಿನ ನೀರಾವರಿ ಯೋಜನೆಗಳಿಗೆ ರಾಜ್ಯ ಸರಕಾರ ಮೊದಲ ಹಂತವಾಗಿ 1300ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್‌ ಕರೆಯಲಾಗಿದ್ದು ತಾಲೂಕಿನ ರೈತರಲ್ಲಿ ಮಂದಹಾಸಮೂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Vijaya Karnataka 15 Aug 2019, 5:00 am
ಶಿಕಾರಿಪುರ: ತಾಲೂಕಿನ ನೀರಾವರಿ ಯೋಜನೆಗಳಿಗೆ ರಾಜ್ಯ ಸರಕಾರ ಮೊದಲ ಹಂತವಾಗಿ 1300ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್‌ ಕರೆಯಲಾಗಿದ್ದು ತಾಲೂಕಿನ ರೈತರಲ್ಲಿ ಮಂದಹಾಸಮೂಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
Vijaya Karnataka Web SMR-14SKP1


ತಾಲೂಕಿನ ಅಂಬ್ಲಿಗೊಳ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಪುರದಕೆರೆ ಗ್ರಾಮದಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ನೀರು ಮೇಲೆತ್ತಿ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಯ 182 ಕೆರೆಗಳಿಗೆ ನೀರು ತುಂಬಿಸಲಾಗುವುದು. ಶಿವಮೊಗ್ಗ ತಾಲೂಕು ಹೊಸಹಳ್ಳಿ ತುಂಗಾ ನದಿಯಿಂದ ಏತನೀರಾವರಿ ಮೂಲಕ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಸೇರಿ ಶಿವಮೊಗ್ಗ ತಾಲೂಕಿನ 75ಕೆರೆಗಳನ್ನು ತುಂಬಿಸುವುದಕ್ಕೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ತಾಲೂಕಿನ ಕಲ್ಲೊಡ್ಡು ನೀರಾವರಿ ಯೋಜನೆಗೆ 125ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿ ಟೆಂಡರ್‌ ಕರೆಯಲಾಗಿದೆ. ಸೊರಬ ತಾಲೂಕಿನ ಮೂಗೂರು ಏತ ನೀರಾವರಿಗೂ 105ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ನನಗೆ ಈ ಮೊದಲು ಅಧಿಕಾರ ಸಿಕ್ಕಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೆ. ಇದೀಗ ಜಿಲ್ಲೆಯ ನೀರಾವರಿ ಯೋಜನೆಗೆ ಹಣ ನೀಡುವ ಮೂಲಕ ಅಧಿಕಾರ ಸದ್ಬಳಕೆ ನಿಟ್ಟಿನಲ್ಲಿ ಕಾರ‍್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಬಿಎಸ್‌ವೈ ಅಧಿಕಾರಕ್ಕೆ ಬಂದರೆ ಬರಗಾಲ ದೂರವಾಗುತ್ತೆ ಎನ್ನುವ ಮಾತು ನಿಜ, ಆದರೆ ಹಾನಿಯಾಗಿರುವುದು ತುಂಬಲಾರದ ನಷ್ಟವಾಗಿದೆ. ನೆರೆಹಾನಿಯಿಂದ ಮನೆ ಕೊಚ್ಚಿ ಹೋಗಿದ್ದರೆ 5ಲಕ್ಷ ರೂ, ಭಾಗಶಃ ಹಾನಿಯಾಗಿದ್ದರೆ 1ಲಕ್ಷ ರೂ. ನಿರಾಶ್ರಿತ ಕುಟುಂಬ ಅಡುಗೆ ಸಾಮಗ್ರಿ ಖರೀದಿಗಾಗಿ ಪ್ರತಿ ಕುಟುಂಬಕ್ಕೆ 10ಸಾವಿರ ರೂ. ನೀಡಲಾಗುವುದು. ಅಂಜನಾಪುರ, ಅಂಬ್ಲಿಗೊಳ್ಳ ಜಲಾಶಯ ತುಂಬಿರುವುದು ಸಂತಸದ ವಿಷಯ. ತಾಲೂಕಲ್ಲೂ ಹಲವು ಮನೆಗಳು ಹಾನಿಗೊಳಗಾಗಿದ್ದು ಅವರೆಲ್ಲರಿಗೂ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ತಾ.ಪಂ. ಅಧ್ಯಕ್ಷ ಶಂಭು ಕಣೇದೇರ್‌, ತಾ.ಪಂ. ಸದಸ್ಯ ಮಲ್ಲಿಕಾರ್ಜುನ ರೆಡ್ಡಿ, ಗ್ರಾ.ಪಂ. ಅಧ್ಯಕ್ಷ ಕೇಶವ, ಮುಖಂಡರುಗಳಾದ ಮಧು ಹೋತನಕಟ್ಟೆ, ರುದ್ರಮೂರ್ತಿ, ಕೆ. ಶೇಖರಪ್ಪ, ಅರುಣ್‌, ಲಕ್ಷ ್ಮಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ