ಆ್ಯಪ್ನಗರ

ಅರಣ್ಯಹಕ್ಕು ಸಮಿತಿ ನಿಷ್ಕ್ರಿಯಕ್ಕೆ ಕಾಗೋಡು ವಿಷಾದ

ರಾಜ್ಯದಲ್ಲಿ ಬಗರ್‌ಹುಕುಂ, ಅರಣ್ಯಹಕ್ಕು ಸಮಿತಿಗಳು ನಿಷ್ಕ್ರಿಯವಾಗಿವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 3 Aug 2019, 5:00 am
ಸಾಗರ : ರಾಜ್ಯದಲ್ಲಿ ಬಗರ್‌ಹುಕುಂ, ಅರಣ್ಯಹಕ್ಕು ಸಮಿತಿಗಳು ನಿಷ್ಕ್ರಿಯವಾಗಿವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Vijaya Karnataka Web SMR-02sgr2


ಇಲ್ಲಿನ ಗಾಂಧಿಮಂದಿರದಲ್ಲಿ ಶುಕ್ರವಾರ ಬ್ಲಾಕ್‌ ಕಾಂಗ್ರೆಸ್‌ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಹಿಂದಿನ ಸರಕಾರದ ಅವಧಿಯಲ್ಲಿ ನಾನೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಸಂಬಂಧ ಹೊಸ ಸಮಿತಿಗಳನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದರೂ ಅದು ಈಡೇರಿಲ್ಲ. ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಬಡಜನರಿಗೆ ಭೂಮಿ ಹಕ್ಕು ಕೊಡಲು ಸಾಧ್ಯವಾಗುತ್ತಿಲ್ಲ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸಹ ಬಗರ್‌ಹುಕುಂ, ಅರಣ್ಯಹಕ್ಕು, 94ಸಿ, 94ಸಿಸಿ ಅನ್ವಯ ಭೂಮಿ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಿದೆ ಎಂದು ಹೇಳಿದರು.

ಮೈತ್ರಿ ಸರಕಾರ ಜಾರಿಗೆ ತಂದ ಋುಣಪರಿಹಾರ ಕಾಯಿದೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದುವರಿಸಿಕೊಂಡು ಹೋಗುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಮುಂದಿನ ಎರಡು ತಿಂಗಳಿನೊಳಗೆ ಋುಣಪರಿಹಾರ ಕಾಯಿದೆಯ ಪ್ರಯೋಜನ ಫಲಾನುಭವಿಗಳಿಗೆ ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅರ್ಹರಿಗೆ ಮಾಹಿತಿ ತಲುಪಿಸುವ ಜತೆಗೆ ಅವರಿಂದ ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಕಾಯಿದೆಯನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್‌ ಕಾರ‍್ಯಕರ್ತರು ಮಾಡಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌ , ನಗರ ಬ್ಲಾಕ್‌ ಅಧ್ಯಕ್ಷ ತಶ್ರಿಫ್‌ ,ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್‌, ಜಿ.ಪಂ. ಸದಸ್ಯರಾದ ಭೀಮನೇರಿ ಶಿವಪ್ಪ, ಕಲಗೋಡು ರತ್ನಾಕರ್‌, ತಾ.ಪಂ. ಸದಸ್ಯರಾದ ಸುವರ್ಣ ಟೀಕಪ್ಪ, ಕಲಸೆ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹಾಬಲ ಕೌತಿ, ವಿ.ಶಂಕರ್‌, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ ಮತ್ತಿತರರು ಹಾಜರಿದ್ದರು.

ಸಭೆಯಿಂದ ಹೊರಗುಳಿದ ಪ್ರಮುಖರು
ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿ.ಆರ್‌.ಜಯಂತ್‌ ಮತ್ತು ತಶ್ರಿಫ್‌ ಬಳಗದ ಸುಮಾರು 80 ಜನ ಭಾಗವಹಿಸಿದ್ದು, ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರನ್ನು ಸಮಿತಿಯಿಂದ ಹೊರಗಿಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಗಣಪತಿ ಹೆನಗೆರೆ, ಮಹಮ್ಮದ್‌ ಖಾಸಿಂ, ತಾರಮೂರ್ತಿ, ದಿನೇಶ್‌ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಿಲ್ಲ. ಈ ಹಿಂದೆ ಪದಾಧಿಧಿಕಾರಿಗಳಾಗಿದ್ದವರೂ ಕಾರ‍್ಯಕಾರಿಯಲ್ಲಿ ಇಲ್ಲ . ಸಭೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ ಎಂದು ಹಲವು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ