ಆ್ಯಪ್ನಗರ

ಕುತಂತ್ರದಿಂದ ಅಭ್ಯರ್ಥಿ ಹೈಜಾಕ್‌: ಬಿಎಸ್‌ವೈ

ಸೋಲಿನ ಭೀತಿಯಿಂದ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ರಾಜಕೀಯ ಕುತಂತ್ರ ಮಾಡಿ ಹೈಜಾಕ್‌ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Vijaya Karnataka 2 Nov 2018, 5:00 am
ಸಾಗರ : ಸೋಲಿನ ಭೀತಿಯಿಂದ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ರಾಜಕೀಯ ಕುತಂತ್ರ ಮಾಡಿ ಹೈಜಾಕ್‌ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.
Vijaya Karnataka Web bsy


ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಕಳೆದ ಹತ್ತು ಹನ್ನೆರಡು ದಿನಗಳಿಂದ ಬಿಜೆಪಿ ಅಭ್ಯರ್ಥಿ ಯ ಬಗ್ಗೆ ನನಗೆ ಅನುಮಾನಗಳಿದ್ದವು. ಪ್ರಾರಂಭದಿಂದಲೂ ನನಗೆ ಅಭ್ಯರ್ಥಿಯ ಬಗ್ಗೆ ವಿಶ್ವಾಸ ಇರಲಿಲ್ಲ. ಕ್ಷೇತ್ರವ್ಯಾಪ್ತಿಯಲ್ಲಿ ಸರಿಯಾಗಿ ಅವರು ಕೆಲಸ ಮಾಡುತ್ತಿಲ್ಲ ಎನ್ನುವ ಮಾಹಿತಿ ನನಗೆ ಬಂದಿತ್ತು. ಹಾಗಾಗಿ ನಾನು ರಾಮನಗರ ಕ್ಷೇತ್ರದಲ್ಲಿ ಹೆಚ್ಚಿನ ಪ್ರವಾಸ ಮಾಡಿರಲಿಲ್ಲ , ಈಗ ಅಲ್ಲಿನ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.

ಉಪ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮುಂದುವರಿಯುವ ಬಗ್ಗೆ ಪ್ರಶ್ನೆಗಳಿವೆ. ಸೋತು ಸೊರಬದ ಕಡೆಯೆ ತಲೆಹಾಕಿ ಮಲಗದ ಮಧು ಬಂಗಾರಪ್ಪನನ್ನು ಹಿಡಿದುಕೊಂಡು ಬಂದು ದೇವೇಗೌಡರು ಚುನಾವಣೆಗೆ ನಿಲ್ಲಿಸಿದ್ದಾರೆ. ಕಾಂಗ್ರೆಸ್‌ ನಾಯಕತ್ವವೇ ಇಲ್ಲದ ಪಕ್ಷ ವಾಗಿದೆ ಎಂದು ಹೇಳಿದರು.

ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಮುಚ್ಚಿ ಬಿಡುತ್ತೇನೆ, ಕಾಂಗ್ರೆಸ್‌ ಅಧಿಕಾರಕ್ಕೆ ತಂದು ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡುತ್ತೇನೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಲೋಕಸಭೆಯಲ್ಲಿ ದೇವೇಗೌಡರು ಒಬ್ಬರೆ ಆ ಪಕ್ಷ ದ ಸಂಸದರು ಎನ್ನುವುದು ನೆನಪಿರಲಿ. ಸ್ಥಾನ ಕಡಿಮೆ ಬಂದಿದ್ದರಿಂದ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ದ ಸ್ಥಾನಮಾನದಿಂದ ಸಹ ವಂಚಿತವಾಗಿರುವ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರನ್ನು ದೇವೇಗೌಡರು ಪ್ರಧಾನಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಅಷ್ಟಕ್ಕೂ ಕಾಂಗ್ರೇಸ್‌ ಪಕ್ಷ ದಲ್ಲಿಯೆ ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಹೇಳಿದ್ದಾರೆ. ಸೂಕ್ತ ನಾಯಕತ್ವ ಇಲ್ಲದ ಕಾಂಗ್ರೇಸ್‌ ಪಕ್ಷ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಸ್ಥಾನ ಪಡೆಯುವುದು ಕನಸಿನ ಮಾತು. 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಹ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತ. ಈಗಾಗಲೆ ಲೋಕಸಭೆಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಪರವಾದ ಉತ್ತಮ ವಾತಾವರಣ ಇದೆ. ಈಡಿಗರು ತಮಗೆ ಮತ ನೀಡುತ್ತಾರೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ವಿದೆ. ಆದರೆ ಈಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದು ಬಿಜೆಪಿಯಲ್ಲಿ ಎನ್ನುವುದು ಈಡಿಗ ಜನಾಂಗದ ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ