ಭದ್ರಾವತಿ: ನಗರದ ವಿಐಎಸ್ಎಲ್ ಕಾರ್ಖಾನೆಗೆ ಶುಕ್ರವಾರ ಆಗಮಿಸುವ ಕೇಂದ್ರ ಉಕ್ಕು ಸಚಿವರು ಅದಿರುಗಣಿ ಮತ್ತು ಬಂಡವಾಳ ತೊಡಗಿಸುವ ಆದೇಶ ಹೊರಡಿಸಲಿ ಎಂದು ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್ ಆಗ್ರಹಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಕಾರ್ಖಾನೆಗೆ ಅದಿರುಗಣಿ ನೀಡಿದರೆ ಕೇಂದ್ರ ಸರಕಾರ ಸಾವಿರ ಕೋಟಿ ರೂ. ಬಂಡವಾಳ ತೊಡಗಿಸುವುದಾಗಿ ಸಂಸದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗಕ್ಕೆ ಹಿಂದಿನ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್ ಭರವಸೆ ನೀಡಿದ್ದರು. ಅದೇ ಪ್ರಕಾರ ಸಿಎಂ ಸಿದ್ದರಾಮಯ್ಯ ಮತ್ತು ಗಣಿ ಸಚಿವ ವಿನಯ್ ಕುಲಕರ್ಣಿ ಕಾರ್ಖಾನೆಗೆ ಉತ್ಕೃಷ್ಟ ಗುಣಮಟ್ಟದ 30 ಮಿಲಿಯನ್, 40 ಸಾವಿರ ಕೋಟಿ ರೂ. ಮೌಲ್ಯದ ಅದಿರುಗಣಿ ಮಂಜೂರಿಗೆ ಕೇಂದ್ರದ ಗಣಿ ಇಲಾಖೆ ಮತ್ತು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಆದರೂ ಕೇಂದ್ರ ಸರಕಾರ ನುಡಿದಂತೆ ನಡೆದುಕೊಂಡಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಸಹ ಈ ಕಾರ್ಖಾನೆ ಉಳಿಸುವ ಭರವಸೆ ನೀಡಿ ಮೈ ಮರೆತ್ತಿದ್ದಾರೆಂದು ವಿಷಾದವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಈಗಾಗಲೇ ಗುತ್ತಿಗೆಗಳನ್ನು ನವೀಕರಿಸದೇ ಗುತ್ತಿಗೆ ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗಿದೆ. ಬ್ಲಾಸ್ಟ್ ಫರ್ನೇಸ್ ಘಟಕ ವರ್ಷಕ್ಕೂ ಅಧಿಕಕಾಲದಿಂದ ಚಾಲನೆಯಾಗದೆ ತುಕ್ಕು ಹಿಡಿಯುವಂತಾಗಿ ಕಾರ್ಮಿಕರು ಕಂಗಾಲಾಗಿದ್ದಾರೆ. ಅತ್ತ ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ನೀತಿ ಆಯೋಗ ಈ ಕಾರ್ಖಾನೆ ಮಾರಾಟಕ್ಕೆ ಮುಂದಾಗಿದೆ. ಈ ಬೆನ್ನ ಹಿಂದೆಯೆ ಸಂಸದ ಯಡಿಯೂರಪ್ಪ ಕೇಂದ್ರ ಉಕ್ಕು ಸಚಿವರ ಗಮನ ಸೆಳೆದು ನಗರಕ್ಕೆ ಆಗಮಿಸುವಂತೆ ಮಾಡಿದ್ದಾರೆ. ನಗರಕ್ಕಾಗಮಿಸುವ ಕೇಂದ್ರ ಸಚಿವ ಚೌದರಿ ಬೀರೇಂದರ ಸಿಂಗ್ ಪೊಳ್ಳು ಭರವಸೆ ನೀಡದೆ ಅದಿರುಗಣಿ ಮಂಜೂರು ಮತ್ತು ಸಾವಿರ ಕೋಟಿ ರೂ. ಬಂಡವಾಳ ತೊಡಗಿಸುವ ಹಾಗೂ ಬ್ಲಾಸ್ಟ್ ಫರ್ನೇಸ್ ಘಟಕ ಸೇರಿದಂತೆ ವಿವಿಧ ಸ್ಥಗಿತಗೊಂಡ ಇಲಾಖೆಗಳ ಚಾಲನೆಗೆ ಸ್ಥಳದಲ್ಲೆ ಆದೇಶ ನೀಡಬೇಕೆಂದು ಸಂಗಮೇಶ್ವರ್ ಒತ್ತಾಯಿಸಿದರು.
ಬಂಡವಾಳ ಘೋಷಿಸದಿದ್ದಲ್ಲಿ ಹೋರಾಟ:
ಕೇಂದ್ರ ಸಚಿವರು, ಸಂಸದರು ಕಾರ್ಮಿಕರ ಮುಂದೆ ಬಂಡವಾಳ ತೊಡಗಿಸುವ ಗ್ಯಾರಂಟಿ ಘೋಷಣೆ ಮಾಡದಿದ್ದಲ್ಲಿ ಕಾಂಗ್ರೆಸ್ನಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್ ಹೋರಾಟದ ಪ್ರತಿಫಲದಿಂದಾಗಿ ಸ್ವಯಂ ನಿವೃತ್ತಿ ಯೋಜನೆಯ ಹಣ ಕಾರ್ಮಿಕರಿಗೆ ಲಭಿಸಿರುವುದು ಸಾಧನೆಯಾಗಿದೆ ಎಂದು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್.ಷಡಾಕ್ಷ ರಿ, ನಗರಸಭಾ ಮಾಜಿ ಅಧ್ಯಕ್ಷ ಬಿ.ಟಿ.ನಾಗರಾಜ್, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಸಿ.ಎಂ.ಸಾಧಿಕ್, ಮುಖಂಡರಾದ ಅಣ್ಣೋಜಿರಾವ್, ರಾಘವೇಂದ್ರ, ಗೋಪಿ, ಬಸವರಾಜ್, ಗಿರಿ ಇತರರು ಇದ್ದರು.
ಸ್ಥಳೀಯ ಶಾಸಕರು ಬೃಹತ್ ಪ್ರಮಾಣದ ಫ್ಲೆಕ್ಸಿ ಹಾಕಿಸಿಕೊಂಡು ನಮ್ಮ ನಡೆ ಅಭಿವೃದ್ಧಿ ಕಡೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಎರಡು ಕಾರ್ಖಾನೆ ಮಾತ್ರ ಅಭಿವೃದ್ಧಿ ಆಗಿಲ್ಲ. ಸಿ.ಮಹೇಶ್ ಕುಮಾರ್ ಮತ್ತು ಶಾಸಕ ಎಂ.ಜೆ.ಅಪ್ಪಾಜಿ ಎಂಪಿಎಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಹಣಕ್ಕೂ ತೊಡರುಗಾಲು ಹಾಕಿದ್ದಾರೆ. ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಪಕ್ಷ ದ ವರಿಷ್ಠರು ಟಿಕೆಟ್ ನೀಡುವುದರಲ್ಲಿ ಅನುಮಾನವಿಲ್ಲ .
-ಟಿ.ಚಂದ್ರೇಗೌಡ, ಭದ್ರಾವತಿ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ .