ಆ್ಯಪ್ನಗರ

ಮೊದಲ ಭೇಟಿಯಲ್ಲೇ ಸಿಎಂ ಮುಂದೆ ಹಾನಿಯ ಅನಾವರಣ

ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದಾರಿಯುದ್ದಕ್ಕೂ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಅನಾಹುತಗಳು ಎದುರಾದವು.

Vijaya Karnataka 14 Aug 2019, 5:00 am
ಶಿವಮೊಗ್ಗ : ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದಾರಿಯುದ್ದಕ್ಕೂ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಅನಾಹುತಗಳು ಎದುರಾದವು.
Vijaya Karnataka Web SMG-1308-2-15-13SMG1


ತುಂಗಾ, ಮಾಲತಿ, ಶರಾವತಿ, ಕುಮದ್ವತಿ, ವರದಾ ಮತ್ತು ದಂಡಾವತಿ ನದಿಗಳ ದಂಡೆಯುದ್ದಕ್ಕೂ ಪ್ರವಾಹ ಸೃಷ್ಟಿಸಿದ ಪರಿಯನ್ನು ಕಂಡು ಅವರು ಬೆಚ್ಚಿದರು. ಜನವಸತಿ ಪ್ರದೇಶಗಳಲ್ಲಿ ಪ್ರವಾಹದಿಂದ ಕುಸಿದ ಮನೆಗಳ ಮುಂದೆ ಬಂದಾಗ ಬೀದಿಗೆ ಬಿದ್ದ ಜನ ಅವರ ಕಾಲಿಗೆರಗಿದರು. ನಮಗೆ ಹೊಸ ಬದುಕು ಕಲ್ಪಿಸಿಕೊಡಿ ಎಂದು ಕೈಮುಗಿದು ಬೇಡಿಕೊಂಡರು. ಈ ಸಂದರ್ಭದಲ್ಲಿ ದುಃಖಿತರಾದ ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ನಿಮ್ಮ ಕೈಬಿಡುವುದಿಲ್ಲ. ಸರಕಾರದಿಂದ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಮಂಗಳವಾರ ಮುಂಜಾನೆ 5ಗಂಟೆಗೆ ರೈಲಿನಲ್ಲಿ ಬಂದ ಅವರು ನೇರವಾಗಿ ರಸ್ತೆ ಮಾರ್ಗದಲ್ಲಿ ತೀರ್ಥಹಳ್ಳಿ ತಾಲೂಕು ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದು ಗದ್ದೆ ಮತ್ತು ತೋಟಗಳ ಮೇಲೆ ಮಣ್ಣು ನಿಂತಿರುವುದನ್ನು ಕಂಡು ಅವಕ್ಕಾದರು. ಆನಂತರದಲ್ಲಿ ಶಿವಮೊಗ್ಗ ನಗರಕ್ಕೆ ಬಂದ ಅವರು ಮನೆಗಳು ಜಲಾವೃತಗೊಂಡು ಸಂತ್ರಸ್ತರಾದವರಿಗಾಗಿ ರಾಮಣ್ಣಶ್ರೇಷ್ಠಿ ಪಾರ್ಕ್‌ನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಲ್ಲದೆ ಸಂತ್ರಸ್ತರಿಗೆ ಧೈರ್ಯ ಹೇಳಿದರು. ಆನಂತರದಲ್ಲಿ ಬಾಪೂಜಿನಗರ, ರಾಜೀವ್‌ಗಾಂಧಿ ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದರು. ಅಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೂರ್ವ ನಿಗದಿತ ಪ್ರವಾಸ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ 9.30ಕ್ಕೆ ಶಿವಮೊಗ್ಗ ಸಕ್ರ್ಯೂಟ್‌ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಹೆಲಿಕಾಪ್ಟರ್‌ನಲ್ಲಿ ಶಿಕಾರಿಪುರಕ್ಕೆ ತೆರಳಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಹಾರಾಟ ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಸಭೆ ನಡೆಸದೆ ರಸ್ತೆ ಮಾರ್ಗವಾಗಿ ಶಿಕಾರಿಪುರಕ್ಕೆ ತೆರಳಿದರು. ಅಲ್ಲದೆ, ಸಾಗರದಿಂದ ಸಂಜೆ 4ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಹೊರಡುವುದನ್ನು ಬದಲಿಸಿದರು. ಸಂಜೆ ಶಿವಮೊಗ್ಗದಲ್ಲಿ ಅಧಿಕಾರಿಗಳ ಸಭೆ ನಡೆಸಿ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ತೆರಳಲು ತೀರ್ಮಾನಿಸಿದರು.

ಶಿಕಾರಿಪುರಕ್ಕೆ ಹೋಗುವ ಮಾರ್ಗ ಮಧ್ಯೆ ಅಂಜನಾಪುರ ಜಲಾಶಯಕ್ಕೆ ತೆರಳಿದ ಅವರು ಭರ್ತಿಯಾದ ಜಲಾಶಯಕ್ಕೆ ಬಾಗೀನ ಅರ್ಪಿಸಿದರು. ಬಳಿಕ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆ ಹೊತ್ತಿಗಾಗಲೆ ಹೆಲಿಕಾಪ್ಟರ್‌ ಶಿಕಾರಿಪುರಕ್ಕೆ ಬಂದಿದ್ದರಿಂದ ಸೊರಬಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ಅಲ್ಲಿಂದ ಸಾಗರ ಮತ್ತು ಶಿವಮೊಗ್ಗಕ್ಕೆ ಬರಲು ಹೆಲಿಕಾಪ್ಟರ್‌ ಬಳಸಿದರು.

-------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ