ಆ್ಯಪ್ನಗರ

ಬೆಂಬಲ ಬೆಲೆ ಭತ್ತ ಖರೀದಿ ನೋಂದಣಿಗೆ ಡಿ.15 ಕೊನೆ ದಿನ

ಗದ್ದೆ ಕೊಯಿಲು ಆರಂಭ ಹಂತದಲ್ಲಿರುವ ನಡುವೆ ಬೆಂಬಲ ಬೆಲೆ ಭತ್ತ ಖರೀದಿಗೆ ರೈತರ ಹೆಸರು ನೋಂದಣಿಗೆ ಜಿಲ್ಲಾಡಳಿತ ಡಿಸೆಂಬರ್‌ 15 ಕೊನೆ ದಿನ ಎಂದು ಘೋಷಿಸಿದೆ. ಗದ್ದೆಯಲ್ಲಿರುವ ಭತ್ತ ಮಾರಾಟಕ್ಕೆ ಹೆಸರು ನೋಂದಾಯಿಸಬೇಕಾದ ಗ್ರಹಚಾರ ರೈತರದ್ದು. ಭತ್ತದ ಕೊಯ್ಲು ಮುನ್ನವೇ ಹೆಸರು ನೋಂದಾಯಿಸಬೇಕು ಎನ್ನುವ ಆದೇಶ ರೈತರಿಗೆ ಹಾಸ್ಯಾಸ್ಪದ ಎನ್ನುವಂತಿದೆ.

Vijaya Karnataka 16 Dec 2018, 5:00 am
ತೀರ್ಥಹಳ್ಳಿ : ಗದ್ದೆ ಕೊಯಿಲು ಆರಂಭ ಹಂತದಲ್ಲಿರುವ ನಡುವೆ ಬೆಂಬಲ ಬೆಲೆ ಭತ್ತ ಖರೀದಿಗೆ ರೈತರ ಹೆಸರು ನೋಂದಣಿಗೆ ಜಿಲ್ಲಾಡಳಿತ ಡಿಸೆಂಬರ್‌ 15 ಕೊನೆ ದಿನ ಎಂದು ಘೋಷಿಸಿದೆ. ಗದ್ದೆಯಲ್ಲಿರುವ ಭತ್ತ ಮಾರಾಟಕ್ಕೆ ಹೆಸರು ನೋಂದಾಯಿಸಬೇಕಾದ ಗ್ರಹಚಾರ ರೈತರದ್ದು. ಭತ್ತದ ಕೊಯ್ಲು ಮುನ್ನವೇ ಹೆಸರು ನೋಂದಾಯಿಸಬೇಕು ಎನ್ನುವ ಆದೇಶ ರೈತರಿಗೆ ಹಾಸ್ಯಾಸ್ಪದ ಎನ್ನುವಂತಿದೆ.
Vijaya Karnataka Web d 15 end date to paddy purchase registration
ಬೆಂಬಲ ಬೆಲೆ ಭತ್ತ ಖರೀದಿ ನೋಂದಣಿಗೆ ಡಿ.15 ಕೊನೆ ದಿನ


ಬೆಳೆದ ಭತ್ತವನ್ನು ಬೆಂಬಲ ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅಷ್ಟು ಸುಲಭವಲ್ಲ. ರಾಜ್ಯ ಸರಕಾರ ಭತ್ತ ಮಾರಾಟಕ್ಕೆ ಹತ್ತಾರು ಷರತ್ತು ವಿಧಿಸಿದ್ದು ರೈತರಿಗೆ ಶಾಪವಾಗಿದೆ. ಎಪಿಎಂಸಿ ಕೇಂದ್ರಗಳಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಭತ್ತ ಖರೀದಿ ಆರಂಭಿಸಿದೆ. 2018 -19 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟದ ರೈತರಿಗೆ ಹೆಸರು ನೋಂದಾಯಿಸಲು 2018 ಡಿಸೆಂಬರ್‌ 15 ಕೊನೆ ದಿನ ಎಂದು ನಿಗಧಿಪಡಿಸಲಾಗಿತ್ತು.

ಹೆಸರು ನೋಂದಾಯಿಸಿರುವ ರೈತರಿಗೆ ಮಾತ್ರ 2018 ಡಿಸೆಂಬರ್‌ 16ರಿಂದ 2019 ಮಾರ್ಚ್‌ 31ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಹೆಸರು ನೋಂದಣಿಗೆ ಕಡಿಮೆ ಕಾಲಾವಧಿ ನೀಡಿ ಬೆಂಬಲ ಬೆಲೆ ಭತ್ತ ಖರೀದಿ ಆರಂಭಿಸುವುದಕ್ಕೆ ಸೂಚನೆ ನೀಡಿರುವ ಕ್ರಮ ಈಗ ಆಕ್ಷೇಪಕ್ಕೆ ಒಳಗಾಗಿದೆ. ಭತ್ತ ಕಟಾವು ಆರಂಭದ ಮುನ್ನ ಖರೀದಿಗೆ ಹೆಸರು ನೋಂದಾಯಿಸುವಂತೆ ಸೂಚಿಸಿರುವ ಕ್ರಮದ ಹಿಂದೆ ವ್ಯಾಪಾರಿಗಳ ಕೈವಾಡ ಇರುವ ಶಂಕೆ ರೈತರಲ್ಲಿ ಕಾಡುತ್ತಿದೆ. ರೈತರ ಹಿತ ಕಾಪಾಡಬೇಕಾದ ಸರಕಾರ ಖರೀದಿಯಲ್ಲಿ ವ್ಯಾಪಾರಿಗಳ ಹಿತ ರಕ್ಷಣೆಗೆ ಮುಂದಾಗಿದೆ ಎಂಬ ದೂರು ಕೇಳಿಬರುವಂತಾಗಿದೆ.

ಹತ್ತಾರು ಷರತ್ತು

ಸಾಮಾನ್ಯ ಭತ್ತಕ್ಕೆ 1750, ಗ್ರೇಡ್‌ (ಎ) ಭತ್ತಕ್ಕೆ 1770 ರೂ. ಬೆಂಬಲ ಬೆಲೆ ನಿಗಧಿಯಾಗಿದೆ. ಸಣ್ಣ, ಅತೀ ಸಣ್ಣ ರೈತರಿಂದ 40 ಕ್ವಿಂಟಾಲ್‌ ಭತ್ತ ಖರೀದಿಗೆ ಅವಕಾಶ ನೀಡಲಾಗಿದೆ. ಈ ವರ್ಗದ ರೈತರು ಭತ್ತ ಮಾರಾಟಕ್ಕೆ ಆಧಾರ್‌ ಕಾರ್ಡ್‌, ಹಿಡುವಳಿ ದಾಖಲೆ, ಆರ್‌ಟಿಸಿ, ಬ್ಯಾಂಕ್‌ ಖಾತೆಯ ಪಾಸ್‌ ಪುಸ್ತಕ ಜೆರಾಕ್ಸ್‌ ಪ್ರತಿಗಳನ್ನು ಹೆಸರು ನೋಂದಣಿ ಸಂದರ್ಭ ಸಲ್ಲಿಸುವುದು ಕಡ್ಡಾಯ. ಬೆಂಬಲ ಬೆಲೆ ಖರೀದಿ ಯೋಜನೆಯಡಿ ರೈತರು ಹೆಸರು ನೋಂದಣಿ ಅವಧಿಯೊಳಗೆ ಉತ್ತಮ ಗುಣಮಟ್ಟದ ಸಾಮಾನ್ಯ ಭತ್ತವನ್ನು 2 ಮಾದರಿ ( ಅರ್ಧ ಕೆಜಿ, ಒಂದು ಕೆಜಿ ) ಪೊಟ್ಟಣಗಳಲ್ಲಿ ನೀಡಬೇಕು. ಕೃಷಿ ಇಲಾಖೆ ಗ್ರೇಡರ್‌ಗಳಿಂದ ಗುಣಮಟ್ಟದ ಕುರಿತು ದೃಢೀಕರಿಸಬೇಕು. ಈ ಮಾದರಿ ಭತ್ತವನ್ನು ಖರೀದಿ ಅವಧಿಯಲ್ಲಿ ಸೂಚಿಸಿದ ಅಕ್ಕಿಗಿರಣಿಗಳಿಗೆ ಸಾಗಣೆ ಮಾಡಬೇಕಿದ್ದು ವೆಚ್ಚವನ್ನು ರೈತರು ಭರಿಸಬೇಕು. ಕಳಪೆ ಭತ್ತ ಸಾಗಣೆ ಮಾಡಿದರೆ ತಿರಸ್ಕರಿಸುವ ಅಧಿಕಾರ ಅಕ್ಕಿಗಿರಣಿಗೆ ನೀಡಲಾಗಿದೆ. ಗ್ರೇಡರ್‌ ಧೃಢೀಕೃತ ಭತ್ತ ಖರೀದಿಗೆ ಮಾತ್ರ ಅವಕಾಶವಿದೆ. ಅಕ್ಕಿಗಿರಣಿಗಳಿಗೆ ಸಾಗಣೆ ಮಾಡಿದ ಪ್ರತಿಕ್ವಿಂಟಾಲ್‌ ಭತ್ತ ಚೀಲಕ್ಕೆ 6 ರೂಪಾಯಿ ರೈತರಿಗೆ ನೀಡಲಾಗುತ್ತದೆ. ಭತ್ತ ಮಾರಾಟಕ್ಕೆ ರೈತರು ಒದಗಿಸಬೇಕಾದ ದಾಖಲೆಗಳಿಗೆ ಸಾವಿರಾರು ರೂ. ಖರ್ಚು ಮಾಡಬೇಕಿದ್ದು ಹೆಚ್ಚಿನ ಸಮಯ ಮೀಸಲಿಡ ಬೇಕಾಗಿದೆ. ಭತ್ತ ಬೆಂಬಲ ಬೆಲೆ ಖರೀದಿಗೆ ಹೊಸದಾಗಿ ಜಾರಿಗೊಂಡಿರುವ ಷರತ್ತಿನ ನಿಯಮ ರೈತರಿಗೆ ನೆರವು ನೀಡುವ ಬದಲು ಹೊರೆ ಆದಂತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ