ಆ್ಯಪ್ನಗರ

‘ಆರದಿರಲಿ ಪತ್ರಿಕಾರಂಗ ಮೌಲ್ಯದ ಬೆಳಕು’

ಸಮಾಜದ ಓರೆ, ಕೋರೆ ತಿದ್ದಲು ಪತ್ರಿಕಾರಂಗ ಮಾರ್ಗದರ್ಶವಾಗಿರಬೇಕೇ ಹೊರತು ಯಾರನ್ನೋ ಬ್ಲಾಕ್‌ಮೇಲ್‌ ಮಾಡುವ ಅಸ್ತ್ರ ವಾಗಬಾರದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.

Vijaya Karnataka 17 Mar 2019, 5:00 am
ಶಿವಮೊಗ್ಗ: ಸಮಾಜದ ಓರೆ, ಕೋರೆ ತಿದ್ದಲು ಪತ್ರಿಕಾರಂಗ ಮಾರ್ಗದರ್ಶವಾಗಿರಬೇಕೇ ಹೊರತು ಯಾರನ್ನೋ ಬ್ಲಾಕ್‌ಮೇಲ್‌ ಮಾಡುವ ಅಸ್ತ್ರ ವಾಗಬಾರದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.
Vijaya Karnataka Web SMR-16ganesh1


ನಗರದ ಸರಕಾರಿ ನೌಕರರ ಭವನದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕೋದ್ಯಮ, ಸಮೂಹ ಮಾಧ್ಯಮ ಒಂದು ಆತ್ಮಾವಲೋಕನ ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆಲ್ಲ ಪತ್ರಿಕೆ ಬರುವಿಕೆಗಾಗಿ ಕಾಯುತ್ತಿದ್ದ ಜನ, ಇಂದು ಪತ್ರಿಕೆ ಓದುವುದಕ್ಕೂ ಲೆಕ್ಕಹಾಕುತ್ತಿದ್ದಾರೆ. ಇದಕ್ಕೆ ಕಾರಣ ಪತ್ರಿಕಾರಂಗದಲ್ಲಿ ವಾಸ್ತವತೆ ಮರೆಯಾಗಿರುವುದು. ಸಮಾಜದ ಅಂಕುಡೊಂಕು ತಿದ್ದುವ, ಜನರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದ ಅಂದಿನ ಪತ್ರಿಕೋದ್ಯಮಕ್ಕೂ, ತನ್ನ ಮೌಲ್ಯವನ್ನು ಕಾರ್ಪೊರೇಟ್‌ ಕ್ಷೇತ್ರದಲ್ಲಿ ಮಾರಿಕೊಂಡಿರುವ ಇಂದಿನ ಪತ್ರಿಕೋದ್ಯಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಖಡ್ಗದಂತ ಸ್ಫೋಟಕ ವಸ್ತುಗಳು ವಿನಾಶದ ಪ್ರವೃತ್ತಿ ಹೊಂದಿ ರಕ್ತಕ್ರಾಂತಿ ನಡೆಸಿದರೆ, ಲೇಖನಿ ಮನಸ್ಸು ಬದಲಾವಣೆ ಮೂಲಕ ಸಮಾಜ ಪರಿವರ್ತಿಸುವ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೆಯ ವರದಿಗಳು ವಾಸ್ತವತೆಯಿಂದಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಯಾವುದೋ ವ್ಯಕ್ತಿಯನ್ನು ಬ್ಲಾಕ್‌ ಮಾಡುವುದಕ್ಕೆ ಪತ್ರಿಕೆಯ ತಂತ್ರಗಾರಿಕೆ ಉಪಯೋಗವಾಗುವ ಬದಲು ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ ಅಂಶಗಳನ್ನು ಜನರಿಗೆ ತೋರಿಸಿಕೊಡುವಲ್ಲಿ ಬಳಕೆಯಾಗಬೇಕಿದೆ ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಸಮಸ್ಯೆಗಳ ಬಗ್ಗೆ ಜನರ ಧ್ವನಿಯಾಗಿರುವ ಪತ್ರಿಕಾರಂಗ ಇಂದಿಗೂ ಮೌಲ್ಯದ ಬೆಳಕು ಚೆಲ್ಲುತ್ತಾ ಬಂದಿದೆ. ಆದರೆ, ಇಂದು ಸುದ್ದಿ ಬಿತ್ತರಿಸುವ ಅವಸರದಲ್ಲಿ ಸತ್ಯಾಸತ್ಯತೆ ಮರೆ ಮಾಚುತ್ತಿದ್ದು, ಅಂದಿನಿಂದಲೂ ಪತ್ರಿಕಾರಂಗ ಕಾಪಾಡಿಕೊಂಡು ಬಂದಿರುವ ಮೌಲ್ಯದ ಬೆಳಕು ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ ಎಂದರು.

ಯಾವುದೇ ಪತ್ರಿಕೆಯಾಗಲಿ ಮೌಲ್ಯಯುತ ಸುದ್ದಿಗೆ ಆದ್ಯತೆ ನೀಡಿದರೆ, ಆ ಪತ್ರಿಕೆಯ ಗೌರವ ಹೆಚ್ಚುತ್ತದೆ. ಜನರ ನಿರೀಕ್ಷೆಗೆ ತಕ್ಕಂತೆ ಸುದ್ದಿ ನೀಡಿ ಸಮಾಜ ಪರಿವರ್ತನೆ ಮಾಡಬೇಕು. ತಪ್ಪು ನಡೆದಿದ್ದರೆ ತಪ್ಪಾಗಿದೆ ಎಂದು ಬರೆಯುವುದು ತಪ್ಪಲ್ಲಾ ಆದರೆ, ತಪ್ಪೇ ಮಾಡದ ವ್ಯಕ್ತಿ ಕುರಿತು ಸುಳ್ಳು ಸುದ್ದಿ ನೀಡುವುದು ದೊಡ್ಡ ತಪ್ಪು. ಕೆಲವೊಮ್ಮೆ ಪತ್ರಿಕೆಗಳಲ್ಲಿನ ತಪ್ಪುಗಳು ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ಅದು ಪರೋಕ್ಷ ವಾಗಿ ಓದುಗರು, ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯದನ್ನು ಕೂಡ ಕೆಟ್ಟದೆಂದು ನಂಬುವ ಸಾಧ್ಯತೆ ಇರುತ್ತದೆ ಎಂದು ಪತ್ರಿಕೆ ಜವಾಬ್ದಾರಿ ಕುರಿತು ಸೂಕ್ಷವಾಗಿ ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಶಫಿ ಸಾದುದ್ದಿನ್‌ ಮಾತನಾಡಿದರು. ಕುವೆಂಪು ವಿವಿ ಪ್ರತಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಸತ್ಯಪ್ರಕಾಶ್‌, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷ ರಿ, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ನಿಂಗನಗೌಡ, ಗ್ರಾಮಾಂತರ ಕಾರ್ಯದರ್ಶಿ ಎಚ್‌.ಬಿ.ರಾಘವೇಂದ್ರ, ಡೆಕ್ಕನ್‌ ಹೆರಾಲ್ಡ್‌ ಮಾಜಿ ಪ್ರಧಾನ ವರದಿಗಾರರಾದ ಡಾ.ಆಶಾ ಕೃಷ್ಣಸ್ವಾಮಿ, ಟಿವಿ 5 ದೆಹಲಿಯ ಪ್ರತಿನಿಧಿ ಸ್ವಾತಿ ಚಂದ್ರಶೇಖರ್‌ ಮತ್ತಿತರರು ಇದ್ದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್‌ ಅಧ್ಯಕ್ಷ ತೆ ವಹಿಸಿದ್ದರು.

------------
ಆತ್ಮವಲೋಕನ ಇಂದಿನ ಅಗತ್ಯ:
ಪತ್ರಕರ್ತರು ಸಂಕುಚಿತ ಮನೋಭಾವದಿಂದ ಹೊರಬರಬೇಕು. ಯಾವುದೇ ಜಾತಿ, ಧರ್ಮದ ನೆಲಗಟ್ಟಿನಲ್ಲಿ ಸಮಾಜವನ್ನು ನೋಡದೇ ವೈಚಾರಿಕ ಚಿಂತನೆ ಮೂಲಕ ಪತ್ರಿಕೋದ್ಯಮದ ಘನತೆ ಉಳಿಸಿಕೊಳ್ಳಬೇಕಿದೆ. ಇತ್ತೀಚೆಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾರ್ಪೊರೇಟ್‌ ಹಸ್ತಕ್ಷೇಪವಾಗಿರುವುದರಿಂದ ಪತ್ರಿಕೆಯ ಮಾಲೀಕರು, ಪತ್ರಕರ್ತರ ಜತೆಗೆ ಓದುಗರು ಕೂಡ ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಇದೆ.
-ಪ್ರೊ.ಡಿ.ಎಸ್‌.ಪೂರ್ಣಾನಂದ, ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ