ಆ್ಯಪ್ನಗರ

ಗೊಬ್ಬರ ಪೂರೈಕೆ ಕೇಂದ್ರಕ್ಕೆ ಡಿಸಿ ದಿಢೀರ್‌ ಭೇಟಿ

ತಾಲೂಕಿನ ರೈತರು ಯೂರಿಯಾ ಗೊಬ್ಬರ ಪಡೆಯಲು ಪರದಾಡುತ್ತಿರುವ ವಿಕ ಸುದ್ದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಪಟ್ಟಣದ ಗೊಬ್ಬರ ಪೂರೈಕೆ ಕೇಂದ್ರಗಳಿಗೆ ಬೆಳ್ಳಂಬೆಳಗ್ಗೆ ದಿಢೀರ್‌ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.

Vijaya Karnataka 23 Aug 2019, 5:00 am
ಶಿಕಾರಿಪುರ: ತಾಲೂಕಿನ ರೈತರು ಯೂರಿಯಾ ಗೊಬ್ಬರ ಪಡೆಯಲು ಪರದಾಡುತ್ತಿರುವ ವಿಕ ಸುದ್ದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಪಟ್ಟಣದ ಗೊಬ್ಬರ ಪೂರೈಕೆ ಕೇಂದ್ರಗಳಿಗೆ ಬೆಳ್ಳಂಬೆಳಗ್ಗೆ ದಿಢೀರ್‌ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.
Vijaya Karnataka Web SMR-22SKP1


ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್‌ ಅವರೊಂದಿಗೆ ಖಾಸಗಿ ಅಂಗಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪಟ್ಟಣದ ವಿವಿಧೆಡೆಯಲ್ಲಿರುವ ದಾಸ್ತಾನು ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಟಿಎಪಿಸಿಎಂಎಸ್‌ ಕಚೇರಿಗೆ ಭೇಟಿ ನೀಡಿದ್ದಲ್ಲದೆ ಎಲ್ಲ ಮಾರಾಟಗಾರರಿಗೆ ಪೂರೈಕೆ ಆಗಿರುವ ದಾಸ್ತಾನು ಮಾರಾಟ ಮಾಡಿರುವ ಲೆಕ್ಕ ಪರಿಶೀಲನೆ ನಡೆಸಿದರು. ಖಾಸಗಿ ಅಂಗಡಿ ಮುಂದೆ ಗೊಬ್ಬರ ಪಡೆಯಲು ಸರತಿಯಲ್ಲಿ ನಿಂತಿದ್ದ ರೈತರೊಂದಿಗೆ ಮಾತನಾಡಿದ ಅವರು, ಗೊಬ್ಬರ ದಾಸ್ತಾನು ಇನ್ನೆರಡು ದಿನಗಳಲ್ಲಿ ಬರುತ್ತದೆ. ಯಾವುದೆ ಆತಂಕವಿಲ್ಲದೆ ಗೊಬ್ಬರ ಪಡೆಯಬಹುದು ಎನ್ನುವ ಭರವಸೆ ನೀಡಿದರು.

ರಾಜ್ಯದ ಎಲ್ಲೆಡೆ ಒಮ್ಮೆಲೆ ಮಳೆ ಬಂದಿರುವ ಕಾರಣಕ್ಕೆ ಯೂರಿಯಾ ಬಳಕೆ ಅಧಿಕವಾಗಿದೆ. ರೈತರಿಗೆ ಅಗತ್ಯವಾಗಿರುವ ಗೊಬ್ಬರ ನೀಡಲು ಸರಕಾರ ಸಿದ್ಧವಿದೆ. ರೈತರು ಸಮಾಧಾನದಿಂದ ಸಹಕಾರ ನೀಡಬೇಕು. ರೈತ ಸಹಕಾರಿ ಸಂಘಕ್ಕೆ ಮೊದಲು ವಿತರಣೆ ಮಾಡಲಾಗುವುದು. ನಂತರ ಖಾಸಗಿ ಅಂಗಡಿಗೆ ನೀಡುತ್ತೇವೆ. ನಿಮ್ಮ ಹಳ್ಳಿಯಲ್ಲೆ ಗೊಬ್ಬರ ಪಡೆಯಿರಿ. ತಾಲೂಕಿಗೆ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಗೊಬ್ಬರ ಈಗಾಗಲೆ ವಿತರಿಸಿದ್ದು ಇನ್ನಷ್ಟು ನೀಡುವುದಕ್ಕೆ ಸಿದ್ಧತೆ ಮಾಡಲಾಗಿದೆ. ಇನ್ನೊಂದು ದಿನದಲ್ಲಿ ದಾಸ್ತಾನು ಆಗಮಿಸಲಿದೆ ಎಂದು ಹೇಳಿದರು.

ಜಿಲ್ಲಾ ರಕ್ಷ ಣಾಧಿಕಾರಿ ಕೆ.ಎಂ.ಶಾಂತಕುಮಾರ್‌, ತಹಸೀಲ್ದಾರ್‌ ಕವಿರಾಜ್‌, ಕೃಷಿ ಇಲಾಖೆ ಸಹಾಯ ನಿರ್ದೇಶಕ ಕಿರಣ್‌ ಕುಮಾರ್‌, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.
---------------
ಗೊಬ್ಬರ ಪೂರೈಸಲು ಸಜ್ಜು :
ಶಿಕಾರಿಪುರ ತಾಲೂಕಿನಲ್ಲಿ ತೀವ್ರ ಮಳೆಯಿಂದಾಗಿ ಕೃಷಿ ಭೂಮಿಯಲ್ಲಿ ಪೋಷಕಾಂಶಗಳು ಕೊಚ್ಚಿ ಹೋಗಿರುವ ಕಾರಣ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಇನ್ನೆರಡು ದಿನದಲ್ಲಿ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ವಾರ್ಷಿಕ 18,630 ಟನ್‌ ಗೊಬ್ಬರ ಬೇಡಿಕೆ ಇದ್ದು ಈಗಾಗಲೆ 18240ಟನ್‌ ಪೂರೈಕೆ ಆಗಿದೆ. ತಾಲೂಕಿಗೆ 5450ಟನ್‌ ರಸಗೊಬ್ಬರ ಬೇಡಿಕೆಗೆ 7550ಟನ್‌ ಪೂರೈಸಲಾಗಿದೆ. ಮಳೆಯಿಂದಾಗಿ ಎಲ್ಲ ಬೆಳೆಗೆ ಮತ್ತೊಂದು ಸುತ್ತಿನ ಯೂರಿಯಾ ಬಳಕೆಗೆ ರೈತರು ನಿರ್ಧರಿಸಿರುವುದು ಅಭಾವಕ್ಕೆ ಕಾರಣವಾಗಿದೆ. ಈಗಾಗಲೆ ಆರ್‌ಸಿಎಫ್‌ ಕಂಪನಿಯ 700 ಮೆಟ್ರಿಕ್‌ ಟನ್‌ ಗೊಬ್ಬರ ಬರುತ್ತಿದ್ದು ನಾಳೆ ತಾಲೂಕಿಗೆ ತಲುಪಲಿದೆ. 2500 ಟನ್‌ನ ಮತ್ತೊಂದು ದಾಸ್ತಾನು ತಮಿಳುನಾಡಿನಿಂದ ಇನ್ನೆರಡು ದಿನದಲ್ಲಿ ಶಿವಮೊಗ್ಗಕ್ಕೆ ತಲುಪಲಿದೆ. ಅಲ್ಲದೆ ಅಕ್ಕಪಕ್ಕದ ಜಿಲ್ಲೆಯ 960ಟನ್‌ ದಾಸ್ತಾನು ಲಾರಿ ಮೂಲಕ ಜಿಲ್ಲೆ ತಲುಪಲಿದೆ ಎಂದರು.

ಬೇಡಿಕೆಗೆ ತಕ್ಕಷ್ಟು ರಸಗೊಬ್ಬರ ಪೂರೈಕೆಗೆ ಸರಕಾರ ಸಿದ್ಧವಿದೆ. ರೈತರು, ಅಂಗಡಿ ಮಾಲೀಕರೂ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಬೇಕು. ಜಿಲ್ಲೆ, ತಾಲೂಕಿಗೆ ಬರುವ ಗೊಬ್ಬರವನ್ನು ರೈತರು ತಮಗೆ ಮಾತ್ರ ಖರೀದಿಸಬೇಕು. ಹೆಚ್ಚಿನ ದರಕ್ಕೆ ಮಾರುವುದಕ್ಕೆ, ಅಕ್ಕಪಕ್ಕದ ತಾಲೂಕಿಗೆ ಕಳುಹಿಸುವುದಕ್ಕೆ ಪಡೆಯದೆ ಸಹಕಾರ ನೀಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಕೆ.ಎಸ್‌.ಗುರುಮೂರ್ತಿ, ಕೆ.ಜಿ.ರುದ್ರಪ್ಪಯ್ಯ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ