ಆ್ಯಪ್ನಗರ

ಇಂದು ಡಿಸಿಸಿ ಬ್ಯಾಂಕ್‌ಗೆ ಮತದಾನ, ಸಂಜೆ ಫಲಿತಾಂಶ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಂದಿನ ಐದು ವರ್ಷದ ಆಡಳಿತ ಯಾರ ಪಾಲಾಗಲಿದೆ ಎಂಬುದು ಸೋಮವಾರ ಸಂಜೆ ಬಹಿರಂಗಗೊಳ್ಳಲಿದೆ.

Vijaya Karnataka 6 May 2019, 5:00 am
ಶಿವಮೊಗ್ಗ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಂದಿನ ಐದು ವರ್ಷದ ಆಡಳಿತ ಯಾರ ಪಾಲಾಗಲಿದೆ ಎಂಬುದು ಸೋಮವಾರ ಸಂಜೆ ಬಹಿರಂಗಗೊಳ್ಳಲಿದೆ.
Vijaya Karnataka Web dcc bank voting today evening result
ಇಂದು ಡಿಸಿಸಿ ಬ್ಯಾಂಕ್‌ಗೆ ಮತದಾನ, ಸಂಜೆ ಫಲಿತಾಂಶ


ಬ್ಯಾಂಕ್‌ನ 13 ನಿರ್ದೇಶಕರ ಸ್ಥಾನಗಳ ಪೈಕಿ 9 ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ಬೆಳಗ್ಗೆ ಮತದಾನ ನಡೆಯಲಿದೆ. ಮತದಾನದ ಬಳಿಕ ಸಂಜೆ ಮತ ಎಣಿಕೆ ಸಹ ನಡೆಯಲಿದ್ದು ಸಂಜೆ 6ಗಂಟೆ ಹೊತ್ತಿಗೆ ಫಲಿತಾಂಶ ಬಯಲಾಗಲಿದೆ.

ಹಾಲಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಸೇರಿದಂತೆ ಹಲವು ಹಾಲಿ ನಿರ್ದೇಶಕರು ಪುನರಾಯ್ಕೆ ಬಯಸಿದ್ದಾರೆ. ಅದಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈಗಾಗಲೆ ನಾಲ್ವರು ಹಾಲಿ ನಿರ್ದೇಶಕರಾದ ಕೆ.ಪಿ.ದುಗ್ಗಪ್ಪಗೌಡ, ಎಸ್‌.ಪಿ.ದಿನೇಶ್‌, ಅಗಡಿ ಅಶೋಕ್‌, ಎಂ.ಎನ್‌.ಪರಮೇಶ್‌ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 9 ನಿರ್ದೇಶಕರ ಸ್ಥಾನಗಳಿಗೆ 18 ಅಭ್ಯರ್ಥಿಗಳು ಕಣದಲ್ಲಿದ್ದು ನೇರ ಹಣಾಹಣಿ ನಡೆದಿದೆ.

ಆರ್‌.ಎಂ.ಮಂಜುನಾಥಗೌಡ ಅವರ ನೇತೃತ್ವದ ತಂಡವನ್ನು ಹಣಿಯಲು ಬಿಜೆಪಿಯ ಸಿಂಡಿಕೇಟ್‌ ಶತ ಪ್ರಯತ್ನ ನಡೆಸಿದೆ. ಆದರೆ, ಮಂಜುನಾಥಗೌಡ ಅವರ ಪಾಳಯದ ಮೂವರು ಈಗಾಗಲೇ ಅವಿರೋಧ ಆಯ್ಕೆಯಾಗಿರುವುದರಿಂದ ಇನ್ನು ನಾಲ್ವರು ಗೆಲ್ಲಿಸಿಕೊಳ್ಳುವ ಮೂಲಕ ಡಿಸಿಸಿಯಲ್ಲಿ ತಮ್ಮ ಅಧಿಕಾರವನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. ಆದರೆ, ಬಿಜೆಪಿ ಮುಖಂಡರು ಈ ಬಾರಿ ನಮ್ಮ ಸಿಂಡಿಕೇಟ್‌ ಗೆಲ್ಲುವುದು ಖಚಿತ. ಈ ಬಾರಿ ಮಂಜುನಾಥಗೌಡ ಅವರಿಗೆ ಅಧಿಕಾರ ಸಿಗದಂತೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಮತದಾರರಿಗೆ ಆಮಿಷ: ಚುನಾವಣೆಯಲ್ಲಿ ಕೇವಲ 333 ಮತದಾರರಿರುವುದರಿಂದ ಸೀಮಿತ ಸಂಖ್ಯೆಯ ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಮತದಾರರಿಗೆ ಅಭ್ಯರ್ಥಿಗಳು 25ಸಾವಿರ ರೂ. ಮತ್ತು ಮಂಜುನಾಥಸ್ವಾಮಿ ಫೋಟೊ ಕೊಟ್ಟರೆ ಅವರ ಎದುರಾಳಿಗಳು 25ಸಾವಿರ ರೂ.ನೊಂದಿಗೆ ಲಕ್ಷ್ಮಿಯ ಬೆಳ್ಳಿ ಮುಖವಾಡ, ಮತ್ತೆ ಕೆಲವೆಡೆ ಚಿನ್ನದ ಉಂಗುರ, 50ರಿಂದ 1 ಲಕ್ಷ ರೂ. ನಗದು ಕೊಡುಗೆಗಳನ್ನು ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಮಧ್ಯವರ್ತಿಗಳ ಎದುರಿನಲ್ಲಿ ದೇವರ ಫೋಟೊ ಮತ್ತು ಲಕ್ಷ್ಮಿಯ ಮುಖವಾಡದ ಮೇಲೆ ಕೈ ಇಟ್ಟು ಆಣೆ ಪ್ರಮಾಣ ಸಹ ಮಾಡಿಸಿ ಮತವನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷವನ್ನು ಮೀರಿಸುವಂತೆ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಆಮಿಷಗಳನ್ನು ಒಡ್ಡಲಾಗಿದೆ ಎಂದು ಗೊತ್ತಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಈ ಬಾರಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅದರ ಮೇಲೆ ಕಣ್ಣಿಟ್ಟಿರುವ ಸ್ಪರ್ಧಾಕಾಂಕ್ಷಿಗಳು ಶತಾಯಗತಾಯ ಗೆದ್ದೆ ಗೆಲ್ಲಬೇಕೆಂಬ ಉಮೇದಿನಲ್ಲಿ ಆಮಿಷಗಳ ಸ್ಪರ್ಧೆ ನಡೆದಿದೆ ಎಂದು ಹೇಳಲಾಗಿದೆ.

-------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ