ಆ್ಯಪ್ನಗರ

‘ಸಾಮಾನ್ಯರ ಬದುಕು, ಸ್ಥಿತಿ ಗತಿ ಚರ್ಚೆ ಆಗಲಿ’

ಸಾಹಿತ್ಯ ಸಮ್ಮೇಳನದಲ್ಲಿ ಜನಸಾಮಾನ್ಯರ ಬದುಕಿನ ಏಳು, ಬೀಳುಗಳ ಬಗ್ಗೆಯೂ ಚಿಂತನೆ ನಡೆಸುವುದು ಇಂದಿನ ಅಗತ್ಯ ಎಂದು ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಶೇಖರಪ್ಪ ಹೇಳಿದರು.

Vijaya Karnataka 25 Dec 2018, 5:00 am
ಶಿಕಾರಿಪುರ: ಸಾಹಿತ್ಯ ಸಮ್ಮೇಳನದಲ್ಲಿ ಜನಸಾಮಾನ್ಯರ ಬದುಕಿನ ಏಳು, ಬೀಳುಗಳ ಬಗ್ಗೆಯೂ ಚಿಂತನೆ ನಡೆಸುವುದು ಇಂದಿನ ಅಗತ್ಯ ಎಂದು ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಶೇಖರಪ್ಪ ಹೇಳಿದರು.
Vijaya Karnataka Web SMR-24skp1


ಪಟ್ಟಣದಲ್ಲಿ ಸೋಮವಾರ ಕಸಾಪ ಆಯೋಜಿಸಿದ್ದ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ತೆವಹಿಸಿ ಅವರು ಮಾತನಾಡಿದರು. ಅನ್ನದಾನ, ಭೂದಾನ, ಗೋದಾನದ ಮೂಲಕ ಮಹಾದಾನಪುರ ಆಗಿದ್ದ ಈ ತಾಲೂಕಿನಲ್ಲಿ ಇಂದು ರೈತೋದ್ಯಮ ನಲುಗುತ್ತಿದೆ, ಭತ್ತದ ಕಣಜ ಕರಗುತ್ತಿದೆ. ಕಾಡಿನ ನಾಶದಿಂದಾಗಿ ಗುಡಿ ಕೈಗಾರಿಕೆ ವಿನಾಶದ ಹಾದಿ ಹಿಡಿದಿದೆ. ಇಲ್ಲಿನ ಗರಡಿಮನೆ, ವಾಲಿಬಾಲ್‌, ಡೊಳ್ಳು, ವೀರಗಾಸೆ, ಕೋಲಾಟ ಕಲೆ ಆಧುನಿಕತೆ ಬಿರುಗಾಳಿಗೆ ಸಿಕ್ಕಿ ತತ್ತರಿಸಿವೆ. ಇವುಗಳ ಪುನರುಜ್ಜೀವನ ಕೆಲಸಕ್ಕೆ ಜನರ ಮನಸ್ಸು ಸಿದ್ಧಗೊಳಿಸುವ ಆಶಯ ಸಮ್ಮೇಳನದ್ದಾಗಬೇಕೆಂದರು.

ಹಲಗೆ-ಬಳಪ, ಹಾಳೆ-ಲೇಖನಿಗಿಂತ ಇಂದು ಕಣ್ಣು, ಕಿವಿ, ಮೂಗು, ಬಾಯಿಯಿಂದ ಗ್ರಹಿಸುವ ಸಂಗತಿ ಯುವಜನತೆಯನ್ನು ಆಕರ್ಷಿಸುತ್ತಿದೆ. ಇವುಗಳ ಕಪಿಮುಷ್ಠಿಯಿಂದ ಭವಿಷ್ಯ ರಕ್ಷಿಸುವುದು ಹೇಗೆ ಎನ್ನುವ ಯಕ್ಷ ಪ್ರಶ್ನೆ ಪೋಷಕರದ್ದಾಗಿದೆ. ಕಣ್ಣು, ಕಿವಿ, ಮೂಗು ಇವು ಮೂರು ತನ್ನದೆಂದೆನಬೇಡ, ಇವು ನಿನ್ನನೇ ಕೊಂದಾವು ಎಂದು ಸರ್ವಜ್ಞ ಎಚ್ಚರಿಸಿದರೂ ಅವುಗಳ ಸಕಾಲಿಕ ಸದ್ಬಳಕೆಯಲ್ಲಿ ಸೋತಿದ್ದೇವೆ ಎಂದರು.

ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆಯುವುದು ಎನ್ನುವ ಸರ್ವಜ್ಞ ವಚನ ಇದಕ್ಕೆ ಅನ್ವರ್ಥವಾಗಿದೆ. ಹಣ ಪ್ರಧಾನ ಜೀವನ ವ್ಯವಸ್ಥೆ ಇಂದು ಗುಣಪ್ರಧಾನ ಜೀವನ ಪದ್ಧತಿ ನುಂಗುತ್ತಿದೆ. ಧನಾತ್ಮಕ ಚಿಂತನೆಯಿಂದ ಉತ್ತಮ ಜೀವನ ಸಾಧ್ಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಸಾಹಿತ್ಯ ಪರಿಷತ್‌ ಹೊಸಬರಿಗೆ, ಗ್ರಾಮೀಣ ಪ್ರತಿಭೆಗಳಿಗೆ, ಅವಕಾಶ ವಂಚಿತರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕಾರ‍್ಯನಿರ್ವಹಿಸುತ್ತಿದೆ. ಈಗಾಗಲೆ ಐದು ಕವನ ಸಂಕಲನ ಮುದ್ರಿಸಿದ್ದು ಅದರಲ್ಲಿ 38 ಜನ ತಾಲೂಕಿನ ಯುವ ಬರಹಗಾರರೂ ಇದ್ದಾರೆ ಎಂದರು.

ತಾ.ಪಂ.ಅಧ್ಯಕ್ಷ ಸುಬ್ರಹ್ಮಣ್ಯ ಕೌಲಿ ಮಾತನಾಡಿ, ರಾಜ್ಯದ ರಾಜಧಾನಿಯಲ್ಲಿ ತಮಿಳು, ತೆಲುಗು ಭಾಷಿಕರ ಪ್ರಭಾವ ಹೆಚ್ಚಿದೆ. ಆಡಳಿತ ಭಾಷೆ ಕನ್ನಡ ಆಗಿದ್ದರೂ ಇನ್ನೂ ಇಂಗ್ಲೀಷ್‌ ಆದೇಶ, ಸುತ್ತೋಲೆ ಕಚೇರಿಗೆ ಬರುತ್ತಿದೆ. ಅದು ಅನ್ಯ ಭಾಷಾ ಜ್ಞಾನವಿಲ್ಲದ ಸ್ಥಳೀಯ ಜನಪ್ರತಿನಿಧಿಗಳಿಗೂ ತೊಂದರೆ ಆಗುತ್ತಿದೆ. ಸರಕಾರ ಕೂಡಲೇ ಎಲ್ಲವನ್ನೂ ಕನ್ನಡೀಕರಿಸುವ ಕಡ್ಡಾಯ ಆದೇಶ ಹೊರಡಿಸಬೇಕೆಂದರು. 8ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್‌.ಬಿ.ಮಠದ ನೂತನ ಅಧ್ಯಕ್ಷ ರಿಗೆ ಧ್ವಜ ಹಸ್ತಾಂತರಿಸಿ ಮಾತನಾಡಿ, ತಾಲೂಕಿನ ಸಮ್ಮೇಳನಕ್ಕೆ ಎಲ್ಲ ಶಿಕ್ಷ ಕರಿಗೆ ರಜೆ ಅವಕಾಶ ಕಲ್ಪಿಸಿದ್ದರೂ ಬೆರಳೆಣಿಕೆಯಷ್ಟು ಜನರು ಆಗಮಿಸಿರುವುದು ಕನ್ನಡದ ಇಂದಿನ ಸ್ಥಿತಿಗೆ ಸಾಕ್ಷಿ . ಎಲ್ಲರೂ ಕನ್ನಡ ಉಳಿಸಿ ಬೆಳೆಸುವ ಕುರಿತು ಚರ್ಚಿಸುವ ಕೆಲಸ ಮಾಡಬೇಕಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಸಮ್ಮೇಳನಾಧ್ಯಕ್ಷ ರ ಮೆರವಣಿಗೆಗೆ ಚಾಲನೆ ನೀಡಿದರು. ಅರಳೇಹಳ್ಳಿ ಅಣ್ಣಪ್ಪ ಬರೆದ ಗುಬ್ಬಚ್ಚಿ ಗೂಡು ಕೃತಿಯನ್ನು ಜಿಲ್ಲಾ ಕಸಾಪ ಗೌರವ ಕಾರ‍್ಯದರ್ಶಿ ಎಂ.ಎಸ್‌.ಸುಂದರರಾಜ್‌, ನಂದಾ ಪ್ರೇಮಕುಮಾರ್‌ ಬರೆದ ಅಭಿನಂದನಾ ಗ್ರಂಥವನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷೆ ಎಸ್‌.ವಿ.ಚಂದ್ರಕಲಾ ಅರಸ್‌ ಬಿಡುಗಡೆ ಮಾಡಿದರು. ಕಸಪಾ ಸ್ಥಳೀಯ ಘಟಕ ಅಧ್ಯಕ್ಷ ಅಂಗಡಿ ಜಗದೀಶ್‌ ಅಧ್ಯಕ್ಷ ತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಪದ್ಮಾಗಜೇಂದ್ರ, ಮುಖಂಡರಾದ ರುದ್ರಮುನಿ ಸಜ್ಜನ್‌, ಮಮತಾಸಾಲಿ, ಎ.ಚಿನ್ನಪ್ಪ, ಕಾಂಚನಾಕುಮಾರ್‌, ಕಾಶೀಬಾಬು, ಎಸ್‌.ಆರ್‌.ಕೃಷ್ಣಪ್ಪ, ಕೆ.ಎನ್‌.ಮಂಜಾಚಾರ್‌, ಬೇಗೂರು ಮಂಜಪ್ಪ, ಎಚ್‌.ಎಸ್‌.ರಘು, ಮಲ್ಲೇಶ್‌ ಹೆಗಡೆ, ಸುಧಾಕರ ಹಿರೇಕಸವಿ, ಕೆ.ಎಚ್‌.ಪುಟ್ಟಪ್ಪ ಮತ್ತಿತರರು ಇದ್ದರು.


ಕಥೆ, ಕವನ, ಕಾದಂಬರಿ, ವಿಮರ್ಶೆ, ಕಾವ್ಯ, ಚುಟುಕು, ಪ್ರಬಂಧ, ಸಂಗೀತ, ನಾಟ್ಯ, ಲಲಿತಕಲೆ ಮಾತ್ರವೇ ಸಾಹಿತ್ಯವಲ್ಲ. ನಮ್ಮ ನೆಲದ ಸಂಸ್ಕೃತಿಯಲ್ಲಿ ಅಡಗಿರುವ ಎಲ್ಲ ಬಗೆಯ ಆಚರಣೆಯೂ ಸಾಹಿತ್ಯ. ಮತ್ತೊಬ್ಬರಿಗೆ ತೊಂದರೆಯಾಗದಂತೆ, ಆದರ್ಶವಾಗಿ ಬದುಕುವುದು, ಬದುಕಲು ಬಿಡುವುದೂ ಸಾಹಿತ್ಯವೇ.

-ಕೆ.ಶೇಖರಪ್ಪ, ಸಮ್ಮೇಳನಾಧ್ಯಕ್ಷ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ