ಶಿವಮೊಗ್ಗ: ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಶಾಲೆಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ಲೋಕೇಶ್ ಭರವಸೆ ನೀಡಿದರು.
ಮಸಗಲ್ಲಿ ಗ್ರಾಮದಲ್ಲಿ ಸೋಮವಾರ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ, ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ, ಬಿಸಿಯೂಟ ಮತ್ತು ಮೂಲ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಕಲ್ಲುಕೊಪ್ಪ, ಸಿಡಿಯಾಪುರ, ಭೀಮನಕೆರೆ ಗ್ರಾಮಸ್ಥರು ತಮ್ಮೂರು ಮತ್ತು ಶಾಲೆಗಳಲ್ಲಿ ಎದುರಾಗಿರುವ ಕುಡಿಯುವ ನೀರು ಸಮಸ್ಯೆ, ಶೌಚಾಲಯಗಳ ಅಸಮರ್ಪಕ ಬಳಕೆ ಬಗ್ಗೆ ಹೇಳಿಕೊಂಡರು.
ಸಿಡಿಯಾಪುರ ಗ್ರಾಮದಲ್ಲಿ 20ರಿಂದ 30 ಮನೆಗಳಿದ್ದು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸೌಲಭ್ಯಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು. ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿಸಿ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು.
ಮಾತೃಪೂರ್ಣ ಯೋಜನೆಗೆ ಈ ಭಾಗದಲ್ಲಿ ನಿರಾಸಕ್ತಿ ಬಗ್ಗೆ ವಿಚಾರಿಸಿದಾಗ, ಅಂಗನವಾಡಿಗಳು ದೂರದಲ್ಲಿರುವುದಲ್ಲದೆ ಮಧ್ಯಾಹ್ನದ ಹೊತ್ತಿನಲ್ಲಿ ಮಹಿಳೆಯರು ಒಂಟಿಯಾಗಿರುವುದರಿಂದ ಊಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಎಎನ್ಎಂ ಅವರು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ, ಪ್ರತಿ 15 ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿಲ್ಲ, ತಾಲೂಕು ಆಸ್ಪತ್ರೆಯಲ್ಲಿ ಪೆನ್ಸಿಲಿನ್ ಚುಚ್ಚುಮದ್ದು ದಾಸ್ತಾನು ಇಲ್ಲ ಎಂದು ವೈದ್ಯರು ಸಬೂಬು ಹೇಳುತ್ತಾರೆ. ಸಂಜೆ ವೇಳೆ ವೈದ್ಯರು ಆಸ್ಪತ್ರೆಯ ಆವರಣದ ವಸತಿ ಗೃಹದಲ್ಲಿದ್ದರೂ ಚಿಕಿತ್ಸೆ ನೀಡುವುದಿಲ್ಲ ಎಂದು ದೂರು ಸಲ್ಲಿಸಿದರು. ಈ ಸಂಬಂಧ ನ್ಯೂನತೆಗಳನ್ನು ಪರಿಶೀಲಿಸಿ ಕೂಡಲೆ ವರದಿ ಸಲ್ಲಿಸುವಂತೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚನೆ ನೀಡಿದರು.
ನ್ಯಾಯಬೆಲೆ ಅಂಗಡಿಯವರು ತಮಗೆ ಬೇಕಾದಾಗ ಪಡಿತರ ಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯುವುದಿಲ್ಲ, ದಾಸ್ತಾನಿನ ಬಗ್ಗೆ ನೋಟಿಸ್ ಬೋರ್ಡ್ನಲ್ಲೂ ಮಾಹಿತಿ ಹಾಕುವುದಿಲ್ಲ. ನ್ಯಾಯಬೆಲೆ ಅಂಗಡಿಯವರ ಮೇಲಿನ ಆರೋಪವನ್ನು ಪರಿಶೀಲಿಸಿ ತಪ್ಪು ಕಂಡುಬಂದಲ್ಲಿ ಮಾಲೀಕರ ವಿರುದ್ಧ ನೋಟಿಸಿ ನೀಡಿ ಅನುಪಾಲನಾ ವರದಿ ಸಲ್ಲಿಸುವಂತೆ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿದರು. 938 ಕುಟುಂಬಗಳಿರುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡುಗೆ ಅನಿಲವನ್ನು ಬಳಸದೆ ಇರುವ ಕುಟುಂಬಗಳನ್ನು ಗುರುತಿಸಿ ಅನಿಲಭಾಗ್ಯ ಯೋಜನೆ ಅಥವಾ ಉಜ್ವಲ ಯೋಜನೆಯಡಿ ಗ್ಯಾಸ್ ಸೌಲಭ್ಯ ಕಲ್ಪಿಸಬೇಕು. ರಾತ್ರಿವೇಳೆ ಬೆಳಕಿಗಾಗಿ 1ಲೀಟರ್ ಸೀಮೆ ಎಣ್ಣೆ ವಿತರಿಸಲು ಕುಟುಂಬಗಳ ವಿವರಗಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗೆ ಅರ್ಹರಾದವರನ್ನು ಗುರುತಿಸಲು ನ.24ರಂದು ಗ್ರಾಮ ಪಂಚಾಯಿತಿಯಲ್ಲಿ ಪಿಂಚಣಿ ಅದಾಲತ್ ನಡೆಸುವಂತೆ ತಹಸೀಲ್ದಾರ್ಗೆ ಸೂಚಿಸಿದರು. ಗ್ರಾಮಗಳಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ, ಮಸಗಲ್ಲಿ ಸುತ್ತಮುತ್ತಲು ಇರುವ ಜಲ್ಲಿ ಕ್ರಷರ್ಗಳು ಮಾರ್ಗಸೂಚಿಗಳನ್ನು ಪಾಲಿಸದಿರುವುದು, ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನ ಸೆಳೆದರು. ಇದಾದ ಬಳಿಕ ಮಸಗಲ್ಲಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಬಿಸಿಯೂಟ, ಎಸ್ಎಸ್ಎಲ್ಸಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗೆ ಮುಖ್ಯಶಿಕ್ಷಕರೊಂದಿಗೆ ಚರ್ಚಿಸಿದರು.