ಆ್ಯಪ್ನಗರ

Road Works in Ghats: 'ಬಾಳೆಬರೆ'ಯಲ್ಲಿ ಬಸ್‌ಗಳಿಗೆ ಬರ: ಸಂಚಾರ ನಿಷೇಧ, ಪ್ರಯಾಣಿಕರ ಪರದಾಟ

Road Works in Ghats: ಉಡುಪಿ-ಶಿವಮೊಗ್ಗ ಸಂಪರ್ಕಿಸುವ ಬಾಳೆಬರೆ ಘಾಟಿಯಲ್ಲಿ ರಸ್ತೆಕಾಮಗಾರಿ ಹಿನ್ನೆಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮದ ಜನರಿಗೆ ಸಮಸ್ಯೆಯುಂಟಾಗಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 8 Mar 2023, 2:45 pm

ಹೈಲೈಟ್ಸ್‌:

  • ಒಂದೆಡೆ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದರೂ, ಬಸ್‌ ಸಂಚಾರಕ್ಕೆ ತೊಂದರೆ ಉಂಟಾಗಿರುವುದು ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
  • ಪ್ರಮುಖವಾಗಿ ಕುಂದಾಪುರದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಮಾಸ್ತಿಕಟ್ಟೆ, ಯಡೂರು ಮೂಲಕ ಶಿವಮೊಗ್ಗ ತಲುಪುತ್ತಿದ್ದವು. ಆದರೆ ಸದ್ಯ ಈ ರಸ್ತೆಯಲ್ಲಿ ಬಸ್‌ ಸಂಚಾರ ಬಹುತೇಕ ವಿರಳವಾಗಿದೆ.
  • ಹುಲಿಕಲ್‌ (ಬಾಳೆಬರೆ) ಘಾಟಿ ಪ್ರಮುಖ ಘಾಟಿಗಳಲ್ಲಿ ಒಂದಾಗಿದ್ದು, ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ಸಂಚಾರ ಅಡಚಣೆ ಉಂಟಾದಾಗ ಸರಕು ಸಾಗಣೆ ವಾಹನಗಳು ಹುಲಿಕಲ್‌ ಘಾಟಿಯನ್ನು ಬಳಸಿಯೇ ಸಂಚಾರ ನಡೆಸುತ್ತವೆ. ಇಷ್ಟು ಪ್ರಾಮುಖ್ಯತೆ ಇದ್ದರೂ, ಘಾಟಿ ರಸ್ತೆ ಕಾಮಗಾರಿ ಕುಂಟುತ್ತಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web road work
  • ರವಿರಾಜ ಎಂ.ಜಿ.ಭಟ್‌,
ಹೊಸನಗರ (ಶಿವಮೊಗ್ಗ): ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿಒಂದಾಗಿರುವ ಬಾಳೆಬರೆ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಘಾಟಿಯಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ತಾತ್ಕಾಲಿಕವಾಗಿ ಬದಲಿ ಸಂಚಾರ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಒಂದೆಡೆ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದರೂ, ಬಸ್‌ ಸಂಚಾರಕ್ಕೆ ತೊಂದರೆ ಉಂಟಾಗಿರುವುದು ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಸೀಮಿತ ಬಸ್‌
ಪ್ರಮುಖವಾಗಿ ಕುಂದಾಪುರದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಮಾಸ್ತಿಕಟ್ಟೆ, ಯಡೂರು ಮೂಲಕ ಶಿವಮೊಗ್ಗ ತಲುಪುತ್ತಿದ್ದವು. ಆದರೆ ಸದ್ಯ ಈ ರಸ್ತೆಯಲ್ಲಿ ಬಸ್‌ ಸಂಚಾರ ಬಹುತೇಕ ವಿರಳವಾಗಿದೆ. ಕೊಲ್ಲೂರು ಘಾಟಿಯ ಮಾರ್ಗವಾಗಿ ನಗರ ತಲುಪಿ ಬಳಿಕ ಮಾಸ್ತಿಕಟ್ಟೆಯಿಂದ ತೀರ್ಥಹಳ್ಳಿಯ ಕಡೆಗೆ ಮೂರ್ನಾಲ್ಕು ಬಸ್ಸುಗಳು ಶಾಲಾ ವೇಳೆಯಲ್ಲಿಸದ್ಯಕ್ಕೆ ಓಡಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಕೊಂಚ ಸಹಕಾರಿಯಾಗಿದೆ. ಆದರೆ, ಬೇರೆ ಸಮಯದಲ್ಲಿ ಬಹುತೇಕ ಬಸ್‌ ಸಂಚಾರವೇ ಇಲ್ಲದಂತಾಗಿದೆ. ಸದ್ಯ ಸಂಚರಿಸುತ್ತಿರುವ ನಾಲ್ಕು ಬಸ್‌ಗಳು ಸಹಾ ದಟ್ಟಣೆಯಿಂದ ಕೂಡಿದ್ದು, ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಅಲ್ಲದೇ ಈ ಪೈಕಿ ಕೆಲ ಖಾಸಗಿ ಬಸ್‌ಗಳು ಭಾನುವಾರ ರಜಾ ಮಾಡುವ ಕಾರಣಕ್ಕೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

Timber Illegal Sale : ಹಳೇ ನಾಟ ಸಾಗಣೆ, ಶಾಸಕ ಕುಮಾರ್‌ ಬಂಗಾರಪ್ಪ ವಿರುದ್ಧ ಪ್ರತಿಭಟನೆ

ತಾಲೂಕು ಕೇಂದ್ರಕ್ಕೆ ಬಸ್‌ ಸೇವೆ ಇಲ್ಲ
ಯಡೂರು, ಸುಳುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಪ್ರಸ್ತುತ ಯಾವುದೇ ಬಸ್ಸುಗಳು ಹೊಸನಗರ ಪಟ್ಟಣಕ್ಕೆ ಓಡಾಡುತ್ತಿಲ್ಲ. ತಾಲೂಕು ಕೇಂದ್ರಕ್ಕೆ ಆಗಮಿಸಬೇಕಾದವರು ಖಾಸಗಿ ವಾಹನದಲ್ಲಿಯೇ ತೆರಳುವಂತಾಗಿದೆ. ಮಾಸ್ತಿಕಟ್ಟೆಯಿಂದ ಹೊಸನಗರಕ್ಕೆ ಕೇವಲ ಎರಡು ಬಸ್ಸುಗಳು ಓಡಾಡುತ್ತಿವೆ. ಅದೂ ಸಹಾ ನಾಗರಿಕರಿಗೆ ಅಷ್ಟೇನೂ ಉಪಯೋಗವಾಗುವ ಸಮಯದಲ್ಲಿ ಸಂಚರಿಸುತ್ತಿಲ್ಲ. ಹೊಸನಗರಕ್ಕೆ ಬರುವ ಮಾಸ್ತಿಕಟ್ಟೆ ಸುತ್ತಮುತ್ತಲ ಭಾಗದ ಕಾಲೇಜು ವಿದ್ಯಾರ್ಥಿಗಳು ಸದ್ಯ ಖಾಸಗಿ ವಾಹನವನ್ನೇ ಅವಲಂಬಿಸುವುದು ಅನಿವಾರ‍್ಯವಾಗಿದೆ.

ಪ್ರತಿವರ್ಷ ಇದೇ ಕತೆ
ಹುಲಿಕಲ್‌ (ಬಾಳೆಬರೆ) ಘಾಟಿ ಪ್ರಮುಖ ಘಾಟಿಗಳಲ್ಲಿ ಒಂದಾಗಿದ್ದು, ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ಸಂಚಾರ ಅಡಚಣೆ ಉಂಟಾದಾಗ ಸರಕು ಸಾಗಣೆ ವಾಹನಗಳು ಹುಲಿಕಲ್‌ ಘಾಟಿಯನ್ನು ಬಳಸಿಯೇ ಸಂಚಾರ ನಡೆಸುತ್ತವೆ. ಇಷ್ಟು ಪ್ರಾಮುಖ್ಯತೆ ಇದ್ದರೂ, ಘಾಟಿ ರಸ್ತೆ ಕಾಮಗಾರಿ ಕುಂಟುತ್ತಿದೆ. ಕಳೆದ ನಾಲ್ಕೆತ್ರೖದು ವರ್ಷದಿಂದಲೂ ಪ್ರತಿ ಬೇಸಿಗೆಯಲ್ಲಿನೂತನ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಆಗದಿರುವುದು, ಅಗತ್ಯ ಅನುದಾನ ಒಮ್ಮೆಗೇ ಬಿಡುಗಡೆ ಆಗದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎನ್ನುವ ಆರೋಪವಿದೆ. ಹಂತಹಂತವಾಗಿ ನಡೆಯುತ್ತಿರುವ ಕಾರಣಕ್ಕೆ ಪ್ರತಿ ವರ್ಷವೂ ಇದೇ ಸಮಸ್ಯೆ ತಲೆದೋರುತ್ತಿದೆ.

ದಿನಪತ್ರಿಕೆ ಸಹಾ ಸಿಗುತ್ತಿಲ್ಲ!

ಯಡೂರು, ಸುಳಗೋಡು, ಮೇಕೇರಿ ಮೊದಲಾದ ಊರುಗಳ ಜನರು ಸದ್ಯ ದಿನಪತ್ರಿಕೆ ಓದುವುದರಿಂದಲೂ ವಂಚಿತರಾಗಿದ್ದಾರೆ. ಸೂಕ್ತ ಸಮಯದಲ್ಲಿ ಬಸ್‌ ಸಂಚಾರ ಇಲ್ಲದ ಕಾರಣಕ್ಕೆ ದಿನಪತ್ರಿಕೆ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಇದು ಓದುಗರಿಗೆ, ವಿದ್ಯಾರ್ಥಿಗಳಿಗೆ ನಿರಾಸೆ ತಂದಿದೆ.

Jog Falls In Summer: ಬೇಸಿಗೆಯಲ್ಲೂ ಜೋಗದ ಸಿರಿ..! ಪ್ರವಾಸಿಗರಿಗೆ ಸಂಭ್ರಮ
ರಸ್ತೆ ಕಾಮಗಾರಿ ಮುಗಿಯುವ ವರೆಗೆ ತೀರ್ಥಹಳ್ಳಿ, ಹೊಸನಗರ, ನಗರ, ಮಾಸ್ತಿಕಟ್ಟೆ, ಯಡೂರು ಈ ಊರುಗಳನ್ನು ಸಂಪರ್ಕಿಸುವ ರಸ್ತೆಯಲ್ಲಿಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡುವ ಅಗತ್ಯವಿದೆ. ಜನಸಾಮಾನ್ಯರಿಗೆ ಇದರಿಂದ ಉಪಯೋಗವಾಗಲಿದೆ ಎಂದು ಯಡೂರು
ಶಿವಕುಮಾರ ಜೋಯ್ಸ್ ಹೇಳಿದ್ದಾರೆ.

ತೀರ್ಥಹಳ್ಳಿಯ ಕಡೆಗೆ ಒಂದೆರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಸದ್ಯ ಶಾಲಾ ಕಾಲೇಜು ಸಮಯಕ್ಕೆ ಓಡಾಡುತ್ತಿವೆ. ಆದರೆ, ನಿತ್ಯವೂ ನೂಕುನುಗ್ಗಲು ಉಂಟಾಗುತ್ತಿದೆ. ಅಲ್ಲದೆ ಹಲವು ಬಾರಿ ಅರ್ಧಗಂಟೆಗೂ ಹೆಚ್ಚು ಕಾಲ ವಿಳಂಬವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ತಾತ್ಕಾಲಿಕವಾಗಿ ಹೆಚ್ಚಿನ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮಾಸ್ತಿಕಟ್ಟೆ ವಿದ್ಯಾರ್ಥಿನಿ, ಸುಷ್ಮಾ ಹೇಳಿದ್ದಾರೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ