ಭದ್ರಾವತಿ: ಹಿಂದೂ ಧರ್ಮದ ನಂಬಿಕೆ ಆಧಾರದ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿ ಎಂದಿಗೂ ನಶಿಸುವುದಿಲ್ಲ. ಅಂತಹ ಸಂಸ್ಕೃತಿ ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿರುವುದು ಸಲ್ಲದು ಎಂದು ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ತಾಲೂಕಿನ ದೊಡ್ಡಗೊಪ್ಪೇನಹಳ್ಳಿಯ ಶ್ರೀಚೌಡೇಶ್ವರಿ ದೇವಿಯ ನೂತನ ದೇವಾಲಯ ಹಾಗೂ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಲ್ಲಿನ ಧರ್ಮದ ಸಂಸ್ಕೃತಿಗಾಗಿ ವಿಶ್ವದ ಎಲ್ಲ ರಾಷ್ಟ್ರಗಳು ನಮ್ಮ ದೇಶದತ್ತ ಮುಖ ಮಾಡಿವೆ. ಧರ್ಮ ಹಾಗೂ ದೇವರ ಮೇಲೆ ಭಾರತೀಯರು ಇಟ್ಟಿರುವ ನಂಬಿಕೆಗಳು ಎಂದಿಗೂ ಶಾಶ್ವತವಾಗಿ ಉಳಿಯುತ್ತದೆ ಹೊರತು ನಶಿಸುವುದಿಲ್ಲ. ದೇವಾಲಯ ನಿರ್ಮಿಸಿರುವ ಭಕ್ತರು ಶಾಲೆಗಳನ್ನು ನಿರ್ಮಿಸಿ ವಿದ್ಯಾದಾನಕ್ಕೆ ಮುಂದಾಗಬೇಕು. ದೇಗುಲದಲ್ಲಿ ನಿರಂತರ ಭÜಜನೆ ಆರಂಭಗೊಂಡು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಾಗ ಶ್ರದ್ಧಾಭಕ್ತಿ, ಪರಸ್ಪರ ನಂಬಿಕೆ, ವಿಶ್ವಾಸ ಹೆಚ್ಚಲಿದೆ ಎಂದರು.
ಚನ್ನಗಿರಿ ಪಾಂಡುಮಟ್ಟಿ ವಿರಕ್ತಮಠದ ಶ್ರೀಗುರುಬಸವ ಮಹಾಸ್ವಾಮಿ, ಸಂಸದ ಬಿ.ವೈ.ರಾಘವೇಂದ್ರ, ಜಿಪಂ ಸದಸ್ಯ ಮಣಿಶೇಖರ್, ಮಾಜಿ ಸದಸ್ಯ ಎಸ್.ಕುಮಾರ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಮಹಾದೇವಿ, ದೇವಾಲಯ ಸಮಿತಿಯ ರವಿ, ಕೆ.ಎಸ್.ನರಸಿಂಗಯ್ಯ, ಶಿವಣ್ಣ, ರಾಜಣ್ಣ, ಶಿವಲಿಂಗೇಗೌಡ, ವಿಶ್ವನಾಥ್ ಇತರರು ಇದ್ದರು.
ಪ್ರತಿಯೊಬ್ಬರ ಆತ್ಮದಲ್ಲಿ ದೇವರಿದ್ದಾನೆ. ಎಲ್ಲರು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳಬೇಕು. ದೇವಸ್ಥಾನ ನಿರ್ಮಾಣಗೊಂಡ ಮೇಲೆ ನಿತ್ಯ ಪೂಜೆ ನಡೆಯುತ್ತಿರಬೇಕು. ಈ ಗ್ರಾಮದಲ್ಲಿ ನೆಲೆಸಿರುವ ಶ್ರೀಚೌಡೇಶ್ವರಿ ದೇವಿ ಕೃಪಾಶೀರ್ವಾದದಿಂದ ತಾವು ಸೇರಿದಂತೆ ಇಬ್ಬರು ಸಂತರಾಗಿದ್ದೇವೆ. ಸಮಾಜ ಸೇವೆ ಮಾಡಲು ಅವಕಾಶವಾಗಿದೆ.
-ಶ್ರೀಬೋಧಸ್ವರೂಪಾನಂದಾ ಸ್ವಾಮೀಜಿ, ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮ.