ಆ್ಯಪ್ನಗರ

ಸೊರಬದಲ್ಲಿ ಮುಂದುವರಿದ ನೆರೆ

ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ವರದಾ, ದಂಡಾವತಿ ನದಿ ಪ್ರವಾಹದಿಂದ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ.

Vijaya Karnataka 8 Aug 2019, 5:00 am
ಸೊರಬ: ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ವರದಾ, ದಂಡಾವತಿ ನದಿ ಪ್ರವಾಹದಿಂದ ಸಾವಿರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ.
Vijaya Karnataka Web SMR-07srbp1


ವರದಾ ನದಿ ಪಾತ್ರದಲ್ಲಿರುವ ಕಡಸೂರು, ಗುಂಜನೂರು, ಚಂದ್ರಗುತ್ತಿ, ಜೋಳದಗುಡ್ಡೆ, ನ್ಯಾರ್ಸಿ, ಚಿಕ್ಕಮಾಕೊಪ್ಪ, ಪುರ, ಅಂಕರವಳ್ಳಿ, ಕುಪ್ಪಗಡ್ಡೆ, ಬಂಕಸಾಣ ಸೇರಿದಂತೆ ಹಲವು ಗ್ರಾಮಗಳ 3548 ಹೆಕ್ಟೇರ್‌ ಭತ್ತದ ಜಮೀನು, ನೂರಾರು ಎಕರೆ ತೋಟ ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಂಡಿವೆ. ದಂಡಾವತಿ ಪಾತ್ರದಲ್ಲಿರುವ ಜಂಗಿನಕೊಪ್ಪ, ಹಳೇಸೊರಬ ಇತರೆ ಗ್ರಾಮಗಳ ನೂರಾರು ಹೆಕ್ಟೇರ್‌ ಜಮೀನು ಜಲಾವೃತವಾಗಿದೆ.

ಸೊರಬ-ಜಂಗಿನಕೊಪ್ಪ ರಸ್ತೆ ಮಧ್ಯೆ ಹರಿಯುವ ದಂಡಾವತಿ ನದಿ ಸೇತುವೆ ಮೇಲೆ ಹರಿಯುತ್ತಿದ್ದರಿಂದ ಸಂಪರ್ಕ ಕಡಿದುಹೋಗಿದೆ. ಸೊರಬ-ಸಿದ್ದಾಪುರ ಮುಖ್ಯ ರಸ್ತೆಯ ಕಡಸೂರು ಬಳಿಯ ವರದಾ ನದಿ ಸೇತುವೆ ಮೇಲೆ ಹರಿಯುತ್ತಿದ್ದರಿಂದ ಸಂಪರ್ಕ ಕಡಿದುಹೋಗಿದೆ.

ಕುಪ್ಪಗಡ್ಡೆ ಹೋಬಳಿ ಹಸವಿ, ನೆಗವಾಡಿ, ಗುಡ್ಡೇಕೊಪ್ಪ, ಉಳವಿ ಹೋಬಳಿ ಎನ್‌. ದೊಡ್ಡೇರಿ, ಆನವಟ್ಟಿ ಹೋಬಳಿ ತತ್ತೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಶಾಂತಗೇರಿ, ಹಾಲಗಳಲೆ, ನಿಸರಾಣಿ, ಕಲ್ಲಂಬಿ, ಗುಡವಿ, ಅವಲಗೋಡು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಮರ ಬಿದ್ದು, 45 ವಿದ್ಯುತ್‌ ಕಂಬಗಳು ಮುರಿದಿವೆ. ಕಡಸೂರು, ಹೆಚ್ಚೆ ಗ್ರಾಮಗಳಲ್ಲಿ ವಿದ್ಯುತ್‌ ತಂತಿಗಳು ನೆರೆಯಲ್ಲಿ ಮುಳುಗಿದ್ದು ವಿದ್ಯುತ್‌ ಸಂಪರ್ಕ ಕಡಿದುಹೋಗಿದೆ. ಬಹುಪಾಲು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿದುಹೋಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

ಕೆಲ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸಂಪರ್ಕ ನಿಂತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೆಸರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ನೀರು ನುಗ್ಗಿದ್ದು, ದ್ವೀಪದಂತಾಗಿದೆ. ತಾಲೂಕಿನ ಅನೇಕ ಕೆರೆ ಏರಿಗಳು ಒಡೆಯುವ ಸ್ಥಿತಿ ತಲುಪಿವೆ. ಶಾಸಕ ಕುಮಾರ್‌ ಬಂಗಾರಪ್ಪ ಹಾಗೂ ವಿವಿಧ ಇಲಾಖಾಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ