ಆ್ಯಪ್ನಗರ

ಗುಡವಿ ಪಕ್ಷಿಧಾಮದಲ್ಲಿ ಪ್ರವಾಹ

ನಿರಂತರವಾಗಿ ಸುರಿಯುತ್ತಿರುವ ಮಳೆ, ಪ್ರವಾಹದಿಂದ ಗುಡವಿ ಪಕ್ಷಿಧಾಮ, ಸಂತಾನಾಭಿವೃದ್ಧಿಗೆಂದು ದೇಶ ವಿದೇಶಗಳಿಂದ ಬಂದ ಪಕ್ಷಿಗಳ ಪಾಲಿಗೆ ನೆಮ್ಮದಿಯ ತೊಟ್ಟಿಲಾಗುವ ಬದಲು ಸಾವಿನ ಮನೆಯಾಗಿದೆ.

Vijaya Karnataka 11 Aug 2019, 5:00 am
ನೀಲೇಶ್‌ ಸಮನೀ ಸೊರಬ : ನಿರಂತರವಾಗಿ ಸುರಿಯುತ್ತಿರುವ ಮಳೆ, ಪ್ರವಾಹದಿಂದ ಗುಡವಿ ಪಕ್ಷಿಧಾಮ, ಸಂತಾನಾಭಿವೃದ್ಧಿಗೆಂದು ದೇಶ ವಿದೇಶಗಳಿಂದ ಬಂದ ಪಕ್ಷಿಗಳ ಪಾಲಿಗೆ ನೆಮ್ಮದಿಯ ತೊಟ್ಟಿಲಾಗುವ ಬದಲು ಸಾವಿನ ಮನೆಯಾಗಿದೆ.
Vijaya Karnataka Web SMR-09SRBP5


ರಾಜ್ಯದ ಪ್ರಸಿದ್ಧ ಗುಡವಿ ಪಕ್ಷಿಧಾಮದಲ್ಲಿ ಸುಮಾರು 10 ಸಾವಿರ ಪಕ್ಷಿಗಳು ನೆಲೆಸಿದ್ದು, ಧಾರಾಕಾರ ಮಳೆಯಿಂದ ಅವುಗಳ ಬದುಕು ನೀರುಪಾಲಾಗುತ್ತಿದೆ.

ಮಳೆ ತಡವಾಗಿ ಆರಂಭವಾಗಿದ್ದರಿಂದ ಪಕ್ಷಿಧಾಮಕ್ಕೆ ಜೂನ್‌ ತಿಂಗಳ ಕೊನೆಯಲ್ಲಿ ಆಗಮಿಸಿದ ಪಕ್ಷಿಗಳು ಗೂಡುಕಟ್ಟಿ ಇತ್ತೀಚೆಗಷ್ಟೇ ಮೊಟ್ಟೆ ಇಟ್ಟಿದ್ದವು. ಆದರೆ, ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದ ಪಕ್ಷಿಗಳು ಕೂರುವ ಪೊದೆ, ಗಿಡಗಳು ನೀರಲ್ಲಿ ಮುಳುಗಿ ಮೊಟ್ಟೆಗಳು ನಾಶವಾಗಿವೆ.

ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಮಾಡಿ, ಪೋಷಿಸಿಕೊಂಡು ಮರಳುವ ಪಕ್ಷಿಗಳಿಗೆ ಮಳೆ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ. ಪ್ರತಿವರ್ಷ ಸುಮಾರು 40 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಆಗಮಿಸುತ್ತಿದ್ದವು. ಈ ವರ್ಷ ಮುಂಗಾರು ತಡವಾಗಿ ಆರಂಭವಾಗಿದ್ದರಿಂದ ಸುಮಾರು 10 ಸಾವಿರ ಪಕ್ಷಿಗಳು ಮಾತ್ರ ಆಗಮಿಸಿದ್ದು ಅವುಗಳ ವಾಸಕ್ಕೆ ಧಾರಾಕಾರ ಮಳೆ ಸಂಚಕಾರವಾಗಿದೆ. ಬಹಳಷ್ಟು ಪಕ್ಷಿಗಳು ಪಕ್ಷಿಧಾಮ ತೊರೆದು ತಾಲೂಕಿನ ಕೆಲವು ಕೆರೆಗಳನ್ನು ಆಶ್ರಯಿಸಿಕೊಂಡಿವೆ.

ಆಹಾರದ ಕೊರತೆ : ಸೈಬೀರಿಯಾದಿಂದ ಬ್ಲಾಕ್‌ ಹೆಡ್‌ ಐಬಿಸ್‌ ಪಕ್ಷಿಗಳು, ಆಸ್ಪ್ರೇಲಿಯಾದಿಂದ ಓಪಲ್‌ ಬಿಲ್‌ ಸ್ಟಾರ್ಕ್‌ ಪಕ್ಷಿಗಳು, ದೇಶದ ವಿವಿಧ ಕಡೆಯ ಇಗ್ರೆಟ್‌, ಕಾರ್ಮೋರೆಂಟ್‌, ಲಾರ್ಜ್‌ ಇಗ್ರೆಟ್‌, ಕ್ಯಾಟಲ್‌ ಇಗ್ರೆಟ್‌, ಸ್ಪಾಟ್‌ ಬಿಲ್‌ ಡೆಕ್‌, ಮುರೇನ್‌, ಕೂಟ್‌ ಸೇರಿದಂತೆ ಸ್ಥಳೀಯ ಹತ್ತಾರು ಜಾತಿಯ ಪಕ್ಷಿಗಳು ವಾಸವಾಗಿದ್ದು, ಇನ್ನೂ ಕೆಲವು ಜಾತಿಯ ಪಕ್ಷಿಗಳು ಬರುವ ನಿರೀಕ್ಷೆ ಇದೆ. ಆದರೆ, ಪಕ್ಷಿಧಾಮದ ಕೆರೆ ತುಂಬಿ ಗೇಟ್‌ ಮೇಲೆ ಸುಮಾರು 3 ಅಡಿ ನೀರು ಹರಿಯುತ್ತಿದೆ. ಇದರಿಂದ ಪಕ್ಷಿಗಳ ಆಹಾರಕ್ಕೆ ಬಿಟ್ಟ ಲಕ್ಷಾಂತರ ಮೀನು ಮರಿಗಳು ಕೊಚ್ಚಿಹೋಗಿವೆ. ಮಳೆ ಕಡಿಮೆಯಾದ ನಂತರ ಅಧಿಕಾರಿಗಳು ಮತ್ತೆ ಮೀನು ಮರಿಗಳನ್ನು ಬಿಡಬೇಕಿದೆ.

ಪ್ರವಾಸಿಗರ ಕೊರತೆ : ಪಕ್ಷಿಧಾಮದ ಒಳಗೆ 1 ವಿದ್ಯುತ್‌ ಕಂಬ ಮುರಿದುಬಿದ್ದು, ಇನ್ನೊಂದು ಕಂಬ ವಾಲಿದ್ದು, ವಿದ್ಯುತ್‌ ಸಮಸ್ಯೆಯಾಗಿದೆ. ಮರ ಬಿದ್ದು ಬೋರ್‌ವೆಲ್‌ ಮಿಶನ್‌ ಬಾಕ್ಸ್‌ ಜಖಂ ಆಗಿದೆ. ಪ್ರವಾಸಿಗರು ಓಡಾಗುವ ಸ್ಥಳದಲ್ಲಿ ಬಿದಿರಿನ ಪೊದೆ ಬಿದ್ದಿದ್ದು ತೆರವು ಮಾಡಲಾಗಿದೆ. ರೈಲ್ಸ್‌ಗಳು ಬೆಂಡಾಗಿವೆ. ಗುಡವಿಯ ಒಡ್ಡಿಕೆರೆ ತೂಬಿನ ಕೆಳಭಾಗದಲ್ಲಿ ರಂಧ್ರವಾಗಿ ನೀರು ಸೋರಿಕೆಯಾಗುತ್ತಿದೆ. ಧಾರಾಕಾರ ಮಳೆಯಿಂದ ನಾಲ್ಕೈದು ದಿನಗಳಿಂದ ಪ್ರವಾಸಿಗರು ಇಲ್ಲದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ