ಶಿವಮೊಗ್ಗ: ಆನೆ ಸೇರಿದಂತೆ ವನ್ಯ ಪ್ರಾಣಿಗಳ ದಾಳಿ ಎಲ್ಲೇ ಆದರೂ ಅಲ್ಲಿಗೆ ಜೀವದ ಹಂಗು ತೊರೆದು ದೌಡಾಯಿಸಿ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಯ ಗೋಳು ಕೇಳುವವರೇ ಇಲ್ಲ! ಕಳೆದ ಆರು ತಿಂಗಳುಗಳಿಂದ ತಾಲೂಕಿನ ಸಕ್ರೆಬೈಲು ವನ್ಯಜೀವಿ ವಲಯದ ಕಚೇರಿ ಸಿಬ್ಬಂದಿಯ ವಸತಿ ಗೃಹಗಳ ಸುತ್ತ ಕತ್ತಲು ಆವರಿಸಿದ್ದು, ಬೆಳಕಿನ ವ್ಯವಸ್ಥೆ ಮಾಡಲಾಗಿಲ್ಲ. ಹಲವು ಸಲ ಈ ಬಗ್ಗೆ ಪಿಡಿಒ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ.
ಡಿಪೋ ಗೇಟ್ನಲ್ಲಿ ಕತ್ತಲಿರುವುದರಿಂದ ಹಿಂಭಾಗದಲ್ಲಿಯಾವುದೇ ಚಟುವಟಿಕೆಗಳು ನಡೆದರೂ ಗಮನಕ್ಕೆ ಬರುವುದಿಲ್ಲ. ಇತ್ತೀಚೆಗಷ್ಟೇ ಇಡೀ ಗ್ರಾಮದ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳನ್ನು ಹಾಕಲಾಗಿದೆ. ಆದರೆ, ಗ್ರಾಮ ಪಂಚಾಯಿತಿಯವರು ವಸತಿ ಗೃಹದ ಮಾರ್ಗವನ್ನು ಮಾತ್ರ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ತೆರೆಕಂಡಿರುವ, ಪುನೀತ್ ರಾಜ್ ಕುಮಾರ್ ನಿರ್ಮಾಣದ ಗಂಧದ ಗುಡಿ ಚಿತ್ರದಲ್ಲಿ ಕಾವಾಡಿಗರ ಸ್ಥಿತಿಗತಿಗಳನ್ನು ಕೊಂಚವಾದರೂ ಅನಾವರಣಗೊಳಿಸಲಾಗಿದೆ. ಕಗ್ಗತ್ತಲಿನ ಕಾಡುಗಳಲ್ಲಿ ಒಂದು ಪುಟ್ಟ ಟೆಂಟ್ ಗಳಲ್ಲಿ ಜೀವನ ಮಾಡುವ ಇವರು, ಪ್ರತಿದಿನ ಸರಾಸರಿ 100 ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲೇ ಅರಣ್ಯದೊಳಗೆ ಗಸ್ತು ತಿರುಗಬೇಕಿರುತ್ತದೆ. ಆ ಮೂಲಕ, ಕಾಡುಗಳ್ಳರು, ಕಾಡುಪ್ರಾಣಿಗಳ ಅಪಹರಣಕಾರರಿಂದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ರಕ್ಷಿಸಬೇಕಿರುತ್ತದೆ. ಮಳೆ ಬರಲಿ, ಬಿಸಿಲಿರಲಿ ನಿತ್ಯವೂ ತಮ್ಮ ಕರ್ತವ್ಯಗಳನ್ನು ಅವರು ನೆರವೇರಿಸುತ್ತಲೇ ಇರುತ್ತಾರೆ.