ಆ್ಯಪ್ನಗರ

‘ಜಿಎಸ್‌ಟಿಯಿಂದ ಗುಡಿ ಕೈಗಾರಿಕೆ ವಸ್ತು ಹೊರಗಿಡಿ’

ಕೇಂದ್ರ ಸರಕಾರ ಜಾರಿಗೊಳಿಸಿರುವ ಜಿಎಸ್‌ಟಿಯಿಂದ ಗುಡಿ ಕೈಗಾರಿಕಾ ವಸ್ತುಗಳನ್ನು ಹೊರಗಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ ಕೆ.ಟಿ. ಗಂಗಾಧರ್‌ ಒತ್ತಾಯಿಸಿದರು.

Vijaya Karnataka 3 Nov 2017, 5:00 am

ಶಿವಮೊಗ್ಗ: ಕೇಂದ್ರ ಸರಕಾರ ಜಾರಿಗೊಳಿಸಿರುವ ಜಿಎಸ್‌ಟಿಯಿಂದ ಗುಡಿ ಕೈಗಾರಿಕಾ ವಸ್ತುಗಳನ್ನು ಹೊರಗಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ ಕೆ.ಟಿ. ಗಂಗಾಧರ್‌ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಗುಡಿ ಕೈಗಾರಿಕೆ ಉತ್ಪನ್ನಗಳು ಬಡವರ ಬದುಕಿನ ಭಾಗವಾಗಿವೆ. ಜಿಎಸ್‌ಟಿಯಿಂದ ಕೈಮಗ್ಗ, ಅಡಕೆ ಹಾಳೆಗಳಿಂದ ತಯಾರಾಗುವ ವಸ್ತುಗಳು, ಕುಶಲ ಕರ್ಮಿಗಳ ಉತ್ಪಾದನೆ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ಹಳ್ಳಿಗಳಲ್ಲಿ ಪ್ರಾರಂಭಿಸುವ ಹಪ್ಪಳ, ಉಪ್ಪಿನಕಾಯಿ, ಆಹಾರ ಉತ್ಪನ್ನ ಮುಂತಾದ ಸಿದ್ಧ ವಸ್ತುಗಳ ತಯಾರಿಕೆ ಮುಚ್ಚುವ ಭೀತಿಯಲ್ಲಿವೆ. ಆದ್ದರಿಂದ ಈ ಎಲ್ಲ ವಸ್ತುಗಳ ಮೇಲೆ ಹಾಕಿರುವ ಜಿಎಸ್‌ಟಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ರೈತರ ಬದುಕಿಗೆ ಆಶಾದಾಯಕವಾಗಿರುವ ಸ್ವಾಮಿನಾಥನ್‌ ವರದಿ ಜಾರಿಗೆ ಸರಕಾರ ಕೂಡಲೇ ಮುಂದಾಗಬೇಕು. ಇದನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್‌ ವರದಿ ಜಾರಿಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಆದರೆ ಬಿಜೆಪಿ ಮೂರು ವರ್ಷ ಅಧಿಕಾರಾವಧಿ ಪೂರೈಸಿದರೂ ಸ್ವಾಮಿನಾಥನ್‌ ವರದಿ ಜಾರಿ ಬಗ್ಗೆ ಯಾವ ಸುಳಿವು ಇಲ್ಲ ಎಂದರು.

ಪ್ರಧಾನ ಮಂತ್ರಿಗಳು ಮೇಕಿಂಗ್‌ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ ಇದು ಇತರೆ ಎಂಎನ್‌ಸಿ ಕಂಪನಿ ದರಗಳ ಪೈಪೋಟಿಗೆ ಸ್ವದೇಶಿ ಕಂಪನಿಗಳು ಸ್ಪರ್ಧಿಸುವಂತೆ ಉತ್ತೇಜನ ನೀಡಲಾಗುತ್ತಿದೆ. ಇದು ಸರಿಯಲ್ಲ. ಇದರ ಬದಲು ಗ್ರಾಮೀಣ ಕರಕುಶಲ ಉತ್ಪನ್ನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕೇಂದ್ರವು ಸ್ವಾಮಿನಾಥನ್‌ ಆಯೋಗ ವರದಿ ಜಾರಿಗೊಳಿಸಬೇಕು ಹಾಗೂ ಇತರೆ ಬೇಡಿಕೆಗೆ ಒತ್ತಾಯಿಸಿ ನ.20 ಮತ್ತು 21ರಂದು ದೆಹಲಿಯಲ್ಲಿ ಪಾರ್ಲಿಮೆಂಟ್‌ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಯಲಿರುವ ದೆಹಲಿ ರೈತರ ಪ್ರತಿಭಟನೆಯಲ್ಲಿ ಸುಮಾರು 5ಸಾವಿರಕ್ಕೂ ಅಧಿಕ ರೈತರು ಸೇರುವ ನಿರೀಕ್ಷೆ ಇದೆ. ರಾಜ್ಯ ಸರಕಾರ ರೈತರಿಗೆ ಬಿಡುಗಡೆ ಮಾಡಬೇಕಿದ್ದ ಫÜಸಲ್‌ ಭೀಮಾ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಇದೇ ಸಂದರ್ಭ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯಶ್ವಂತ್‌ ರಾವ್‌ ಘೋರ್ಪಡೆ, ವೀರಣ್ಣಯ್ಯ, ಪರಮೇಶ್ವರ್‌, ರಂಗಪ್ಪ, ಹಾಲೇಶಪ್ಪ, ತಿರುಕಪ್ಪ ಇತರರು ಇದ್ದರು.

Vijaya Karnataka Web gangadar pressmeet
‘ಜಿಎಸ್‌ಟಿಯಿಂದ ಗುಡಿ ಕೈಗಾರಿಕೆ ವಸ್ತು ಹೊರಗಿಡಿ’


ಶಿವಮೊಗ್ಗದ ಅಂಬೇಡ್ಕರ್‌ ಭವನದಲ್ಲಿ ಡಿಸೆಂಬರ್‌ 21ರಂದು ರೈತರ ಕಣ್ಮಣಿ ಎನ್‌.ಡಿ. ಸುಂದರೇಶ್‌ ಅವರ 25ನೇ ನೆನಪಿನ ದಿನ ಆಚರಿಸಲಾಗುವುದು. ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಸಾಹಿತಿಗಳು, ಹೋರಾಟಗಾರರು, ಯುವಕರು ಭಾಗವಹಿಸುವರು.

-ಕೆ.ಟಿ. ಗಂಗಾಧರ್‌, ರೈತ ಸಂಘದ ರಾಜ್ಯಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ