ಆ್ಯಪ್ನಗರ

ಜಲಾವೃತಗೊಂಡ ಬಡಾವಣೆಗಳಲ್ಲಿ ಕಸದ ಪ್ರವಾಹ

ನಗರದಲ್ಲಿ ಜಲಾವೃತಗೊಂಡ ಬಡಾವಣೆಗಳಲ್ಲಿ ಈಗ ಕಸದ ಪ್ರವಾಹ ಹರಿಯುತ್ತಿದೆ. ರಸ್ತೆಗಳಲ್ಲಿ ಹಾಸಿಗೆ, ಹಳೇ ಬಟ್ಟೆ, ಪೇಪರ್‌ ಸೇರಿದಂತೆ ರಾಶಿ ರಾಶಿ ಕಸ ಬಿದ್ದಿದೆ.

Vijaya Karnataka 15 Aug 2019, 5:00 am
ಶಿವಮೊಗ್ಗ : ನಗರದಲ್ಲಿ ಜಲಾವೃತಗೊಂಡ ಬಡಾವಣೆಗಳಲ್ಲಿ ಈಗ ಕಸದ ಪ್ರವಾಹ ಹರಿಯುತ್ತಿದೆ. ರಸ್ತೆಗಳಲ್ಲಿ ಹಾಸಿಗೆ, ಹಳೇ ಬಟ್ಟೆ, ಪೇಪರ್‌ ಸೇರಿದಂತೆ ರಾಶಿ ರಾಶಿ ಕಸ ಬಿದ್ದಿದೆ.
Vijaya Karnataka Web SMG-1408-2-15-14SMG7


ಮಹಾನಗರ ಪಾಲಿಕೆಯು ಪ್ರತಿದಿನವೂ ಸರಕು ಸಾಗಣೆ ವಾಹನ ಮತ್ತು ಲಾರಿಗಳಲ್ಲಿ ಕಸ ಸಾಗಿಸಿದರೂ ಪ್ರತಿದಿನವೂ ಭಾರಿ ಪ್ರಮಾಣದ ಕಸ ಬೀಳುತ್ತಲೇ ಇದೆ.

ನಗರದೊಳಗೆ ಸುಮಾರು 30 ಬಡಾವಣೆಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿದ್ದವು. ಮನೆಯೊಳಗೆ ಎಲ್ಲ ಸಾಮಗ್ರಿಗಳು ನೀರಿನಲ್ಲಿ ಮುಳುಗಿದ್ದವು. ಅವುಗಳಲ್ಲಿ ದುಬಾರಿ ಬೆಲೆಯ ಹಾಸಿಗೆಗಳು, ಹತ್ತಿ ಹಾಸಿಗೆಗಳು, ಬಟ್ಟೆಗಳು, ಪುಸ್ತಕ, ಪೇಪರ್‌ ತೊಯ್ದು ತೊಪ್ಪೆಯಾಗಿವೆ. ಪ್ರವಾಹ ಇಳಿದ ಬಳಿಕ ಭಾನುವಾರ ಬೆಳಗ್ಗೆಯಿಂದ ನಿವಾಸಿಗಳು ಮನೆಯೊಳಗೆ ತೊಯ್ದ ಸಾಮಗ್ರಿಗಳನ್ನು ತಂದು ರಸ್ತೆಗೆ ಹಾಕುತ್ತಿದ್ದಾರೆ.

ಪ್ಲೇವುಡ್‌ನಿಂದ ಮಾಡಿದ ಪೀಠೋಪಕರಣಗಳೂ ತೊಯ್ದು ಶಿಥಿಲಗೊಂಡಿರುವುದರಿಂದ ಅವುಗಳು ಬಳಕೆಗೆ ಯೋಗ್ಯವಿಲ್ಲವಾಗಿವೆ. ಹೀಗಾಗಿ ಮುರಿದು ಒಲೆಗೆ ಹಾಕಲು ಸಹ ಅವಕಾಶ ಇಲ್ಲದಿರುವುದರಿಂದ ನಿರ್ವಾಹವಿಲ್ಲದೆ ಹೊರಗೆ ಹಾಕಿದ್ದಾರೆ. ಹೊರಗೆ ಬಿದ್ದಿರುವ ಕಸದ ರಾಶಿಯಲ್ಲಿ ಹಾಸಿಗೆಗಳೇ ಹೆಚ್ಚಾಗಿವೆ. ಕೆಲವೆಡೆಯಂತೂ ಒಂದು ಲಾರಿ ತುಂಬುವಷ್ಟಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ. ನಿತ್ಯ ಕಸಕ್ಕಿಂತ ಮೂರ್ನಾಲ್ಕುಪಟ್ಟು ಅಧಿಕ ಕಸ ಬೀಳುತ್ತಿದೆ. ಒಂದು ಮನೆಯವರು ಹಾಕಿದ ಕಸವನ್ನು ಸಾಗಿಸಿದ ಬಳಿಕ ಮತ್ಯಾವುದೋ ಸಮಯದಲ್ಲಿ ಮತ್ತೊಂದು ಮನೆಯವರು ರಸ್ತೆ ಬದಿಗೆ ತಂದು ತುಂಬುತ್ತಿರುವುದರಿಂದ ಅಲ್ಲಲ್ಲಿ ಕಸ ಉಳಿಯುವಂತಾಗಿದೆ.

ಮತ್ತೊಂದು ಕಡೆ ಕಸ ವಿಲೇವಾರಿಗೆ ಅಧಿಕ ಸಂಖ್ಯೆಯಲ್ಲಿ ವಾಹನಗಳನ್ನು ನಿಯೋಜಿಸಲು ಸಹ ಅವಕಾಶ ಇಲ್ಲದಂತಾಗಿದೆ. ನಗರದಲ್ಲಿ ಜಲಾವೃತಗೊಂಡ ಬಡಾವಣೆಗಳಲ್ಲಿ ಪೌರ ಕಾರ್ಮಿಕರ ಮನೆಗಳೂ ಇವೆ. ಹೀಗಾಗಿ ಅವರು ನಿತ್ಯ ಕಾಯಕದ ಜತೆಗೆ ತಮ್ಮ ಮನೆಯನ್ನೂ ಉಳಿಸಿಕೊಳ್ಳುವ ಧಾವಂತದಲ್ಲಿ ಇರುವುದರಿಂದ ಅವರನ್ನು ಹೆಚ್ಚುವರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಕಸ ವಿಲೇವಾರಿಗೆ ಹೊಸಬರು ಬರುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬೀಳುತ್ತಿದೆ.

ವಿದ್ಯಾನಗರದೊಳಗೆ ಜಲಾವೃತಗೊಂಡ ಬಡಾವಣೆಗಳ ರಸ್ತೆಗಳು, ಸಿದ್ದೇಶ್ವರನಗರ, ಶಾಂತಮ್ಮ ಬಡಾವಣೆ ಸೇರಿದಂತೆ ಹಲವೆಡೆ ಬುಧವಾರ ಬಹಳಷ್ಟು ಕಸ ಬಿದ್ದಿತ್ತು. ನಿತ್ಯ ಕಸದಂತೆ ಇವುಗಳನ್ನು ಗುದ್ದಲಿಯಲ್ಲಿ ತುಂಬಲು ಸಹ ಸಾಧ್ಯವಿಲ್ಲ. ಕೈಯಿಂದ ಎತ್ತಿ, ಇಲ್ಲವೆ ಜೆಸಿಬಿ ಬಳಸಿ ತುಂಬಬೇಕು. ಅಲ್ಲದೆ ಈ ಕಸ ಎತ್ತಲು ದೊಡ್ಡ ಲಾರಿಯೇ ಬೇಕು.

---------------------------
ನಿತ್ಯ ಕಸ ಅಲ್ಲದೆ ಪ್ರವಾಹದಿಂದ ಉಂಟಾದ ಕಸ ವಿಲೇವಾರಿಗೆ 10 ಲಾರಿಗಳನ್ನು ನಿಯೋಜಿಸಲಾಗಿದೆ. 3 ದಿನದಿಂದ ನಿರಂತರವಾಗಿ ಕಸ ತೆಗೆಯುತ್ತಿದ್ದರೂ ಮನೆಗಳಿಂದ ತಂದು ಹಾಕುತ್ತಲೇ ಇದ್ದಾರೆ. ಈಗಾಗಲೆ ಶೇ.75ರಷ್ಟು ಮನೆಗಳ ಕಸ ಎತ್ತಲಾಗಿದೆ. ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ತೆಗೆಯಲಾಗುವುದು.

-ಕೆ.ಟಿ.ರಾಘವೇಂದ್ರ, ಆರೋಗ್ಯ ಅಧಿಕಾರಿ, ಮಹಾನಗರ ಪಾಲಿಕೆ, ಶಿವಮೊಗ್ಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ