ಸೊರಬ: ಅಸಂಘಟಿತ ವಲಯದ ರೈತ ಕೂಲಿ ಕಾರ್ಮಿಕರಿಗೆ ಅವಘಡ ಸಂಭವಿಸಿದಾಗ ಸರಕಾರ ನೇರ ಪರಿಹಾರ ಘೋಷಿಸಬೇಕು ಹಾಗೂ ಕೃಷಿ ಕಾರ್ಮಿಕರ ಸಾರಿಗೆ ವಾಹನ ಮೇಲೆ ಅತಿಯಾದ ಕಾನೂನು ಹೇರಿಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷ ಣಾ ಹೋರಾಟ ಸಮಿತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎಲ್.ಬಿ. ಚಂದ್ರಶೇಖರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಜೇಡಗೇರಿ ಮಾತನಾಡಿ, ರೈತ ಕೂಲಿ ಕಾರ್ಮಿಕರು ಯಾವುದೇ ಭದ್ರತೆ ಇಲ್ಲದೇ ಜೀವನ ಸಾಗಿಸುವಂತಾಗಿದೆ. ಇತ್ತೀಚೆಗೆ ಸೊರಬ ತಾಲೂಕಲ್ಲಿ ಅವಘಡವೊಂದು ಸಂಭವಿಸಿದ್ದು, ಕೃಷಿ ಚಟುವಟಿಕೆಗೆ ತೆರಳಿ ವಾಪಸಾಗುವ ಸಂದರ್ಭ ನಾಲ್ವರು ರೈತ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು. ಅಲ್ಲದೇ ಹಲವರಿಗೆ ಗಂಭೀರ ಗಾಯವಾಗಿದೆ. ಕೃಷಿ ಕೂಲಿಯನ್ನೇ ನಂಬಿದ ಅವರ ಜೀವನ ಮತ್ತು ಅವಲಂಬಿತ ಕುಟುಂಬಗಳು ಸಂಕಷ್ಟದಲ್ಲಿವೆ. ಕೂಡಲೇ ಸರಕಾರ ಮೃತ ಕೃಷಿ ಕಾರ್ಮಿಕರ ಕುಟುಂಬಕ್ಕೆ ಕನಿಷ್ಟ ಐದು ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಬೇಕೆಂದು ಆಗ್ರಹಿಸಿದರು.
ಕೂಲಿ ಕಾರ್ಮಿಕರನ್ನು ಕರೆತರುವ ವಾಹನಗಳ ಮೇಲೆ ಅತಿಯಾದ ಕಾನೂನು ಹೇರಿಕೆ ಮಾಡಬಾರದು. ಕೃಷಿ ಕೂಲಿ ಕಾರ್ಮಿಕರಿಗೆ ಶೀಘ್ರ ಪರಿಹಾರ ವಿತರಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಗೂಡ್ಸ್ ಆಟೋ ಸಂಘದ ಟಿ.ನಿಂಗರಾಜ, ದೇವರಾಜ, ಆರ್.ಟಿ.ಮಹೇಶ, ಅರುಣಕುಮಾರ್, ಎ.ಎಚ್.ಸುರೇಂದ್ರ, ಮೃತ್ಯುಂಜಯ, ಪ್ರಮುಖರಾದ ಎಸ್.ಡಿ.ದೇವೇಂದ್ರಪ್ಪ ಚನ್ನಾಪುರ, ಕೆ.ಪಿ. ಷಣ್ಮುಖಪ್ಪ ಅಂಡಗಿ ಮತ್ತಿತರರು ಇದ್ದರು.