ಆ್ಯಪ್ನಗರ

ಗೋ ಮಾಂಸ ಮಾರಾಟಕ್ಕೆ ಕೊಡೊಲ್ಲ ಟ್ರೇಡ್‌ ಲೈಸೆನ್ಸ್‌

ನಗರ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟಗಾರರಿಗೆ ಟ್ರೇಡ್‌ ಲೈಸೆನ್ಸ್‌ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಾಲಿಕೆ ಉಪಮೇಯರ್‌ ಎಸ್‌.ಎನ್‌.ಚೆನ್ನಬಸಪ್ಪ ಹೇಳಿದರು.

Vijaya Karnataka 20 Jun 2019, 5:00 am
ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟಗಾರರಿಗೆ ಟ್ರೇಡ್‌ ಲೈಸೆನ್ಸ್‌ ನೀಡುವ ಪ್ರಶ್ನೆಯೇ ಇಲ್ಲ ಎಂದು ಪಾಲಿಕೆ ಉಪಮೇಯರ್‌ ಎಸ್‌.ಎನ್‌.ಚೆನ್ನಬಸಪ್ಪ ಹೇಳಿದರು.
Vijaya Karnataka Web SMR-19GANESH4


ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಂಸ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿ, ಗೋ ಸಂರಕ್ಷಣೆಗೆಂದೇ ಪಾಲಿಕೆ ಬಜೆಟ್‌ನಲ್ಲಿ 50 ಲಕ್ಷ ರೂ. ಮೀಸಲಿಡಲಾಗಿದ್ದು, ನಗರದಲ್ಲಿ ಗೋ ಸಂರಕ್ಷಣೆಗಾಗಿ ಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ ಎಂದರು.

ಇನ್ನು ಮುಂದೆ ಕಸಾಯಿಖಾನೆಯಲ್ಲಿ ಗೋವುಗಳ ವಧೆಗೂ ಮುನ್ನ ಪಶು ವೈದ್ಯಾಧಿಕಾರಿಗಳಿಂದ ಇದು ಅನುಪಯುಕ್ತ ಎಂದು ಪ್ರಮಾಣೀಕೃತಗೊಳಿಸಿದ ನಂತರವೇ ವಧೆ ಮಾಡಬೇಕು. ಗೋ ಹತ್ಯೆ ನಿಷೇಧ ಕಾಯಿದೆ ಪ್ರಕಾರವೇ ಈ ಪ್ರಕ್ರಿಯೆಗಳು ನಡೆಯಬೇಕೆಂದು ಸೂಚಿಸಿದರು. ನಗರದ ತುಂಗಾ ನದಿಯಲ್ಲಿ ಗೋವಿನ ದೇಹದ ಅನುಪಯುಕ್ತ ವಸ್ತುಗಳು ಪತ್ತೆಯಾಗಿವೆ. ಎಲ್ಲೆಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿದೆ ಎಂಬ ಬಗ್ಗೆ ನಮ್ಮಲ್ಲಿ ಸೂಕ್ತ ಸಾಕ್ಷ್ಯಗಳೂ ಇವೆ. ಇಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ಪಾಲಿಕೆ ನಿರ್ಧಾರಕ್ಕೆ ವಿರೋಧ: ಗೋ ಸಂರಕ್ಷಣೆಗಾಗಿ ನಗರ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟಗಾರರಿಗೆ ಪರವಾನಗಿ ನೀಡದಿರುವ ಪಾಲಿಕೆ ಕ್ರಮಕ್ಕೆ ಕೆಲ ಮಾಂಸ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದರು. ಅಕ್ರಮ ಗೋ ಹತ್ಯೆಗೆ ನಮ್ಮ ವಿರೋಧವಿದೆ. ಆದರೆ, ಅನುಪಯುಕ್ತ ಗೋವುಗಳನ್ನು ವಧೆ ಮಾಡಬಹುದೆಂದು ಕಾನೂನೇ ಇದೆ. ಹೀಗಾಗಿ ಅನುಪಯುಕ್ತ ಗೋವುಗಳ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ನಗರದ ಹಲವು ಕಡೆ ಚರಂಡಿಯಲ್ಲಿ ರಕ್ತ ಹರಿಯುತ್ತಿದೆ. ಕೋಳಿ, ಕುರಿ ಮಾಂಸದ ತ್ಯಾಜ್ಯಗಳು ಚರಂಡಿಯಲ್ಲಿ ಪತ್ತೆಯಾಗುತ್ತಿವೆ. ಇತ್ತೀಚೆಗೆ ರಾಜಕಾಲುವೆ ಹೂಳೆತ್ತುವಾಗ ಟನ್‌ಗಟ್ಟಲೆ ದನ ಮೂಳೆ ಪತ್ತೆಯಾಗಿದೆ. ಇದಕೆಲ್ಲ ಪಾಲಿಕೆಯೇ ಉತ್ತರ ನೀಡಬೇಕಾಗಿದೆ. ಮಾಂಸದಂಗಡಿಗಳ ಪರವನಾಗಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಪಾಲಿಕೆಯಿಂದ ಯಾರಿಗೂ ತೊಂದರೆ ನೀಡುವುದಿಲ್ಲ. ನಗರ ಸ್ವಚ್ಛ ಹಾಗೂ ಸುಂದರವಾಗಿರಲು ಎಲ್ಲರ ಸಹಕಾರವೂ ಬೇಕು ಎಂದು ಮನವಿ ಮಾಡಿದರು.

ರಜೆಯಲ್ಲೂ ಮಾರಾಟಕ್ಕೆ ಅನುಮತಿ ಕೊಡಿ:
ಹಿಂದೆಲ್ಲ ಗಾಂಧಿ ಜಯಂತಿ ಹಾಗೂ ಮಹಾವೀರ ಜಯಂತಿಗೆ ಮಾತ್ರ ಮಾಂಸದಗಂಡಿಗಳನ್ನು ಮುಚ್ಚುತ್ತಿದ್ದೆವು. ಈಗ ರಜೆಗಳ ದಿನಗಳು ಹೆಚ್ಚಾಗಿವೆ. ವರ್ಷದಲ್ಲಿ 13 ದಿನ ಮಾಂಸ ಮಾರಾಟ ಮಾಡದಂತೆ ನೋಟಿಸ್‌ ನೀಡಲಾಗುತ್ತಿದೆ. ಹೀಗಾದರೆ ನಾವು ವ್ಯವಹಾರ ಮಾಡುವುದಾದರೂ ಹೇಗೆ ಎಂದು ಮಾಂಸ ಮಾರಾಟಗಾರರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ.ಶಿವಯೋಗಿ ಎಲಿ ಅವರು ಇದು ಪಾಲಿಕೆ ನಿರ್ಧಾರವಲ್ಲ. ಸರಕಾರ ಸುತ್ತೋಲೆಯಂತೆ ನಾವು ಮಾಂಸದಂಗಡಿಗಳನ್ನು ಬಂದ್‌ ಮಾಡುವಂತೆ ಸೂಚನೆ ನೀಡುತ್ತಿದ್ದೇವೆ ಎಂದರು.

ನಗರದಲ್ಲಿ ಸುಮಾರು 180 ಮಾಂಸದಂಗಡಿಗಳಿವೆ. ಇವುಗಳಲ್ಲಿ ಕೆಲವೇ ಅಂಗಡಿ ಮಾಲೀಕರು ಪಾಲಿಕೆ ಕಸದ ವಾಹನದ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಉಳಿದವರು ಎಲ್ಲೆಂದರಲ್ಲಿ ಮಾಂಸದ ತ್ಯಾಜ್ಯ ಹಾಕುತ್ತಿದ್ದಾರೆ. ಅಲ್ಲದೇ ಬಹುತೇಕರು ಟ್ರೇಡ್‌ ಲೈಸೆನ್ಸ್‌ ನವೀಕರಣ ಮಾಡಿಕೊಂಡಿಲ್ಲ ಎಂದು ಡಾ.ಶಿವಯೋಗಿ ಎಲಿ ತಿಳಿಸಿದರು. ಸಭೆಯಲ್ಲಿ ಮೇಯರ್‌ ಲತಾ ಗಣೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಖಾ ಮುರಳೀಧರ್‌, ಸುವರ್ಣಾ ಶಂಕರ್‌, ಗನ್ನಿ ಶಂಕರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ