ಶಿವಮೊಗ್ಗ: ಜಿಲ್ಲೆಯಲ್ಲಿಮಳೆ ಆರ್ಭಟ ಮುಂದುವರಿದಿದ್ದು ಶುಕ್ರವಾರ ಮಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲಾಡಳಿತವು ರೆಡ್ ಅಲರ್ಟ್ ಘೋಷಿಸಿದೆ.
ಮಲೆನಾಡು ಪ್ರದೇಶವಾದ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದಲ್ಲಿಬಿಟ್ಟು ಬಿಟ್ಟು ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜೋರು ಮಳೆ ಹಿನ್ನೆಲೆಯಲ್ಲಿಮಕ್ಕಳ ಹಿತದೃಷ್ಟಿಯಿಂದ ಸಾಗರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹೊಸನಗರ ತಾಲೂಕಲ್ಲಿಪರಿಸ್ಥಿತಿಗೆ ಅನುಗುಣವಾಗಿ ರಜೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿಪ್ರವಾಹದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಎಲ್ಲಅಧಿಕಾರಿ ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಕಾರ್ಯಪ್ರವೃತ್ತವಾಗುವಂತೆ ಹಾಗೂ ಪರಿಸ್ಥಿತಿ ಬಗ್ಗೆ ಸಂದರ್ಭಕ್ಕೆ ಅನುಗುಣವಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಎಲ್ಲಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಾರದಿಂದ ಜಿಲ್ಲೆಯಲ್ಲಿಪ್ರತಿದಿನವೂ ಚದುರಿದಂತೆ ಅಲ್ಲಲ್ಲಿಧಾರಾಕಾರವಾಗಿ ಮಳೆಯಾಗುತ್ತಿದೆ. ಮೂರು ದಿನಗಳಿಂದ ಮೋಡ ಕವಿದು ಆಗಾಗ್ಗೆ ಮಳೆ ಸುರಿಯುತ್ತಿತ್ತು. ಶುಕ್ರವಾರ ಮಧ್ಯಾಹ್ನದಿಂದ ಜಡಿ ಮಳೆ ಹಿಡಿದಿದೆ. ನಿರಂತರ ಮಳೆಯಿಂದಾಗಿ ಥಂಡಿ ವಾತಾವರಣ ಮೂಡಿದೆ.
ನಿರಂತರ ಮಳೆಯಿಂದಾಗಿ ನದಿಗಳ ಹರಿವು ಮತ್ತಷ್ಟು ಏರಿಕೆಯಾಗಿದ್ದು ಜಲಾಶಯಗಳ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. 25ಸಾವಿರ ಕ್ಯೂಸೆಕ್ ಇದ್ದ ಲಿಂಗನಮಕ್ಕಿ ಜಲಾಶಯದ ಒಳಹರಿವು ಸಂಜೆ 7ಗಂಟೆ ಹೊತ್ತಿಗೆ 50ಸಾವಿರ ಕ್ಯೂಸೆಕ್ಗೆ ಏರಿಕೆಯಾಗಿತ್ತು. ಹೀಗಾಗಿ ಕ್ರಸ್ಟ್ಗೇಟ್ಗಳ ಮೂಲಕ 55ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 11,325 ಕ್ಯೂಸೆಕ್ ನೀರು ಬಂದಿದ್ದು 10,200 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿಶುಕ್ರವಾರ ಬೆಳಗ್ಗೆ 8ಗಂಟೆಗೆ ಮಾಹಿತಿಯಂತೆ ಸರಾಸರಿ 38 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಸರಾಸರಿ ಭದ್ರಾವತಿಯಲ್ಲಿ83 ಮಿ.ಮೀ., ಹೊಸನಗರದಲ್ಲಿ26, ಸಾಗರದಲ್ಲಿ22, ಶಿಕಾರಿಪುರದಲ್ಲಿ61, ಶಿವಮೊಗ್ಗದಲ್ಲಿ44, ಸೊರಬದಲ್ಲಿ42 ಮತ್ತು ತೀರ್ಥಹಳ್ಳಿಯಲ್ಲಿ29 ಮಿ.ಮೀ. ಮಳೆಯಾಗಿದೆ.