ಆ್ಯಪ್ನಗರ

ಹೊಸನಗರ ತಾಲೂಕಲ್ಲಿ ಭರ್ಜರಿ ಮಳೆ

ತಾಲೂಕಿನಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಸೋಮವಾರ ಬೆಳಗ್ಗಿನಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ.

Vijaya Karnataka 9 Jul 2019, 5:00 am
ಹೊಸನಗರ: ತಾಲೂಕಿನಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಸೋಮವಾರ ಬೆಳಗ್ಗಿನಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ.
Vijaya Karnataka Web SMR-8HOSP3


ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ಉಕ್ಕಿ ಹರಿಯಲು ಆರಂಭಿಸಿವೆ. ಕಳೆದ 24 ಗಂಟೆಗಳ ಮಾಹಿತಿಯಂತೆ ಹೊಸನಗರದಲ್ಲಿ 79.8 ಮೀ.ಮೀ. ಮಳೆಯಾಗಿದೆ. ಹುಲಿಕಲ್‌, ಮಾಸ್ತಿಕಟ್ಟೆ, ಯಡೂರು, ನಿಟ್ಟೂರು, ಸಂಪೆಕಟ್ಟೆ ಗ್ರಾಮಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕತ್ತಲುಗಟ್ಟಿದ ವಾತಾವರಣವಿದ್ದು, ಹಲವು ಕಡೆ ಗುಡುಗು ಸಹಿತ ಮಳೆ ಸುರಿದಿರುವುದು ವಿಶೇಷವೆನಿಸಿದೆ. ಕರಿಮನೆ ಗ್ರಾ.ಪಂ. ವ್ಯಾಪ್ತಿಯ ಮಳಲಿ ಗ್ರಾಮದಲ್ಲಿ ಸೇತುವೆ ಮೇಲೆ ನೀರು ಉಕ್ಕಿ ಹರಿದಿದೆ.

ಅಲ್ಲಲ್ಲಿ ಅವಘಡ: ತಾಲೂಕಿನ ಪುರಪ್ಪೆಮನೆ ಗ್ರಾ.ಪಂ. ವ್ಯಾಪ್ತಿಯ ನಂದ್ರೆ ಗ್ರಾಮದ ಈಶ್ವರ ಎಂಬುವವರ ಮನೆ ಮೇಲೆ ಮರ ಬಿದ್ದು, ಮನೆಯಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಬೈಂದೂರು-ರಾಣೆಬೆನ್ನೂರು ಹೆದ್ದಾರಿಯಲ್ಲಿ ಅಂಬೇಡ್ಕರ್‌ ಕಾಲೊನಿ ಸಮೀಪ ರಸ್ತೆಗೆ ಅಡ್ಡಲಾಗಿ ಮರದ ಕೊಂಬೆ ಬಿದ್ದು, ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಮಳೆ ನೀರು ಅಂಗಡಿ ಮುಂಗಟ್ಟುಗಳ ವರೆಗೂ ನಿಂತು ಸಮಸ್ಯೆ ಉಂಟಾಯಿತು. ಗ್ರಾಮೀಣ ಪ್ರದೇಶದ ಹಲವು ಕಡೆ ಸಹ ರಸ್ತೆ ಪಕ್ಕದ ಚರಂಡಿಗಳು ಉಕ್ಕಿ ಹರಿದು, ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿತ್ತು.

ಜಲಾಶಯಕ್ಕೆ ಹೆಚ್ಚಿದ ಒಳಹರಿವು: ತಾಲೂಕಿನ ಮಾನಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದೆ. ಮಾನಿ ಜಲಾಶಯದಲ್ಲಿ 573.38 (ಗರಿಷ್ಠ ಮಟ್ಟ 594.36 ಮೀ.) ಹಾಗೂ ವರಾಹಿ ಪಿಕ್‌ಅಪ್‌ ಡ್ಯಾಂನಲ್ಲಿ 562.30 ಮೀ.(ಗರಿಷ್ಠ ಮಟ್ಟ 563.88 ಮೀ.) ನೀರಿನ ಮಟ್ಟ ದಾಖಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ