ಆ್ಯಪ್ನಗರ

ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲೇ ಹೆಚ್ಚು ಕ್ರೈಂ

ಬೆಂಗಳೂರು ಬಿಟ್ಟರೆ ಹೆಚ್ಚು ಕ್ರೈಂ ನಡೆಯುತ್ತಿರುವುದು ಶಿವಮೊಗ್ಗದಲ್ಲೇ. ಇಲ್ಲಿ ಕಳೆದ ಮೂರು ವರ್ಷದಲ್ಲಿ 38 ರೌಡಿಗಳ ಮೇಲೆ ಕೋಕಾ ಪ್ರಕರಣ, 1400ಕ್ಕೂ ಹೆಚ್ಚು ರೌಡಿಗಳ ಮೇಲೆ ಮೊಕದ್ದಮೆ ದಾಖಲಾಗಿದೆ. ಒಂದೇ ವಾರದಲ್ಲಿ ಸುಮಾರು 80 ರೌಡಿಗಳನ್ನು ಜೈಲಿಗಟ್ಟಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಅಭಿನವ್‌ ಖರೆ ಹೇಳಿದರು.

Vijaya Karnataka 10 Feb 2019, 5:00 am
ಶಿವಮೊಗ್ಗ: ಬೆಂಗಳೂರು ಬಿಟ್ಟರೆ ಹೆಚ್ಚು ಕ್ರೈಂ ನಡೆಯುತ್ತಿರುವುದು ಶಿವಮೊಗ್ಗದಲ್ಲೇ. ಇಲ್ಲಿ ಕಳೆದ ಮೂರು ವರ್ಷದಲ್ಲಿ 38 ರೌಡಿಗಳ ಮೇಲೆ ಕೋಕಾ ಪ್ರಕರಣ, 1400ಕ್ಕೂ ಹೆಚ್ಚು ರೌಡಿಗಳ ಮೇಲೆ ಮೊಕದ್ದಮೆ ದಾಖಲಾಗಿದೆ. ಒಂದೇ ವಾರದಲ್ಲಿ ಸುಮಾರು 80 ರೌಡಿಗಳನ್ನು ಜೈಲಿಗಟ್ಟಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಅಭಿನವ್‌ ಖರೆ ಹೇಳಿದರು.
Vijaya Karnataka Web Abinav kare.[sp ]


ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಶಕ್ತಿಮೀರಿ ಶ್ರಮಿಸುತ್ತಿದೆ. ನಾವು ಯಾವುದೇ ರೌಡಿಗಳ ಮನೆಗೆ ರಕ್ಷ ಣೆ ನೀಡಿಲ್ಲ. ಬದಲಿಗೆ ರೌಡಿಗಳ ಬಂಧನಕ್ಕೆ ಮುಂಜಾಗ್ರತೆ ವಹಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿ ರೌಡಿಸಂಗೆ 30 ವರ್ಷದ ಇತಿಹಾಸವಿದೆ. ರೌಡಿಗಳ ವೈಯಕ್ತಿಕ ದ್ವೇಷ ಮಾರ್ಕೆಟ್‌ ಗಿರಿ ಮತ್ತು ಗೋವಿಂದನ ಕೊಲೆಯ ತನಕ ಬಂದಿದೆ. ಒಂದು ರೀತಿಯ ಕುಟುಂಬ ಕಲಹ ರೀತಿ ರೌಡಿಸಂ ನಡೆಯುತ್ತಿದೆ. ಕೋಕಾ ಕಾಯ್ದೆ ಅಡಿ ಸುಮಾರು 38ಜನರನ್ನು ಬಂಧಿಸಲಾಗಿದೆ. ಹಲವರು ಜೈಲಿನಲ್ಲಿದ್ದಾರೆ. ಕೆಲವರು ಬಿಡುಗಡೆಯಾಗಿದ್ದಾರೆ. ಹಲವರ ಕೇಸ್‌ಗಳು ನ್ಯಾಯಾಲಯದಲ್ಲಿವೆ. ಒಟ್ಟಾರೆ ರೌಡಿಸಂ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಕಣ್ಣಿಟ್ಟಿದೆ ಎಂದರು.

ಸಿಬ್ಬಂದಿ ಕೊರತೆ ನಡುವೆಯೂ ಹೆಚ್ಚಿನ ಶ್ರಮ:

ರಾಜ್ಯದ ಎಲ್ಲ ಕಡೆ ಇರುವಂತೆ ಜಿಲ್ಲೆಯಲ್ಲೂ ಮರಳು ದಂಧೆ ಇದೆ. ಅನೇಕ ರೌಡಿಗಳು ಈ ದಂಧೆಯಲ್ಲಿ ಪಾಲುದಾರರಾಗಿದ್ದಾರೆ. ಜಿಲ್ಲೆಯಲ್ಲಿ ಮರುಳು ಕ್ವಾರೆಗಳ ಸಂಖ್ಯೆ ಹೆಚ್ಚಿದೆ. ಅಕ್ರಮ ಮರಳು ಸಾಗಣೆ ತಡೆಯಲು ತಕ್ಕ ಪೊಲೀಸ್‌ ಸಿಬ್ಬಂದಿಗಳಿಲ್ಲ. ಆದರೂ ಪೊಲೀಸ್‌ ಇಲಾಖೆ ಇದನ್ನು ತಡೆಯಲು ಹೆಚ್ಚಿನ ಶ್ರಮ ವಹಿಸಿದೆ. ಆದರೂ ಮರಳು ಮಾಫಿಯಾ ನಿಯಂತ್ರಣದಲ್ಲಿ ವೈಫಲ್ಯ ಎಂದು ಪೊಲೀಸ್‌ ಇಲಾಖೆಯನ್ನು ಮಾತ್ರ ಹೊಣೆಯಾಗಿ ಮಾಡುವುದು ಸರಿಯಲ್ಲ ಎಂದರು.

ಅಕ್ರಮ ಮರುಳು ಸಾಗಣೆ ವಿರುದ್ಧ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಗಸ್ತು ನಡೆಸಬೇಕೆಂದು ಕೋರಿದ್ದೇನೆ. ರಾಜ್ಯದಲ್ಲೇ ಅತಿಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮರಳು ವಶಪಡಿಸಿಕೊಂಡಿದ್ದೇವೆ. 2018ರಲ್ಲಿ 351 ಪ್ರಕರಣ ದಾಖಲಿಸಿ 6 ಕೋಟಿ ರೂ. ಮೌಲ್ಯದ ಮರಳು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅಕ್ರಮ ಮರಳು ಸಾಗಣೆ ವಿಷಯದಲ್ಲಿ ಮೂವರು ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿರುವ ಕುರಿತಂತೆ ಆರೋಪಿತರ ಮೇಲೆ ಕ್ರಮ ಜರುಗಿಸಿದ್ದು ಅವರು ವರ್ಗಾವಣೆಯಾಗಿದ್ದಾರೆ ಎಂದು ಎಸ್ಪಿ ಸ್ಪಷ್ಟಪಡಿಸಿದರು. ಸಂವಾದದಲ್ಲಿ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಇದ್ದರು.

12ಕ್ಕೂ ಹೆಚ್ಚು ಒಸಿ ಬಿಡ್ಡರ್‌ಗಳ ಗಡಿಪಾರು:

ಮಟ್ಕಾ, ಜೂಜಾಟ ತಡೆಗೆ ಇಲಾಖೆ ಹಲವು ಅಗತ್ಯ ಕ್ರಮ ಕೈಗೊಂಡಿದೆ. ಆದರೆ ಓಸಿ ಬರೆಯುವವರು ಸುಲಭವಾಗಿ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಾರೆ. ಕಾರಣ ಬಿಗಿಯಾದ ಕಾನೂನು ಈ ಸಂಬಂಧ ಇನ್ನೂ ಬಂದಿಲ್ಲ. ಈಗ ಕೋರ್ಟಿನಲ್ಲಿ 200 ರಿಂದ 300 ರೂ. ದಂಡ ಕಟ್ಟಿದರೆ ಸಾಕು, ಬಿಡುಗಡೆಯಾಗಬಹುದು. ಹಾಗಾಗಿ ಇದರ ನಿಯಂತ್ರಣ ಸುಲಭವಾಗಿಲ್ಲ. ಆದರೂ ಸುಮಾರು 12ಕ್ಕೂ ಹೆಚ್ಚು ಓಸಿ ಬಿಡ್ಡರ್‌ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಅಭಿನವ್‌ ಖರೆ ತಿಳಿಸಿದರು.

ಮಟ್ಕಾ-ಒಸಿಗೆ ಸಂಬಂಧಿಸಿ ಬಿಗಿ ಕ್ರಮ ಕೈಗೊಂಡಿದ್ದೇವೆ. ಕಾನೂನು ಮಿತಿಯೊಳಗೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಜನರು ನಮಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದೇವೆ. ಸಾರ್ವಜನಿಕರು ಕೂಡ ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಬೇಕು. ಪಿಡಬ್ಲ್ಯೂಡಿ, ಗಣಿ ಇಲಾಖೆ, ಅರಣ್ಯ ಇಲಾಖೆ ಹೀಗೆ ಎಲ್ಲರೂ ಕೈಜೋಡಿಸಿದಾಗ ಇದನ್ನು ತಡೆಯಬಹುದು ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ