ಆ್ಯಪ್ನಗರ

ಪ್ರತಿ ತಲೆಮಾರಿಗೂ ‘ಹಿಂದ್‌ ಸ್ವರಾಜ್‌’ ವ್ಯಾಖ್ಯಾನವಾಗಲಿ

ಮಹಾತ್ಮ ಗಾಂಧೀಜಿಯವರ ಹಿಂದ್‌ ಸ್ವರಾಜ್‌ ಪುಸ್ತಕವು 20ನೇ ಶತಮಾನದ ಅತ್ಯಂತ ಮಹತ್ವದ ಕೃತಿಯಾಗಿದೆ. ಪ್ರತಿ ತಲೆಮಾರಿಗೂ ಇದನ್ನು ವಿಶ್ಲೇಷಿಸುವ ಹೊಸ ವ್ಯಾಖ್ಯಾನಕಾರರು ಅಗತ್ಯ ಎಂದು ನೀನಸಾಮ್‌ ರಂಗ ನಿರ್ದೇಶಕ ಕೆ.ವಿ.ಅಕ್ಷ ರ ಹೇಳಿದರು.

Vijaya Karnataka 20 Feb 2019, 5:00 am
ಸಾಗರ: ಮಹಾತ್ಮ ಗಾಂಧೀಜಿಯವರ ಹಿಂದ್‌ ಸ್ವರಾಜ್‌ ಪುಸ್ತಕವು 20ನೇ ಶತಮಾನದ ಅತ್ಯಂತ ಮಹತ್ವದ ಕೃತಿಯಾಗಿದೆ. ಪ್ರತಿ ತಲೆಮಾರಿಗೂ ಇದನ್ನು ವಿಶ್ಲೇಷಿಸುವ ಹೊಸ ವ್ಯಾಖ್ಯಾನಕಾರರು ಅಗತ್ಯ ಎಂದು ನೀನಸಾಮ್‌ ರಂಗ ನಿರ್ದೇಶಕ ಕೆ.ವಿ.ಅಕ್ಷ ರ ಹೇಳಿದರು.
Vijaya Karnataka Web SMR-19sgr8


ಇಲ್ಲಿನ ಪವಿತ್ರ ಸಭಾಂಗಣದಲ್ಲಿ ಶಿವಮೊಗ್ಗದ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ, ಸಾಗರದ ಸ್ಪಂದನ ಹಾಗೂ ಪರಸ್ಪರ ಸಾಹಿತ್ಯ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿಗಾಗಿ ಡಿ.ಎಸ್‌.ನಾಗಭೂಷಣ ಸಂಪಾದಿಸಿದ 'ಮಹಾತ್ಮ ಗಾಂಧಿಯವರ ಹಿಂದ್‌ ಸ್ವರಾಜ್‌, ಒಂದು ಪ್ರವೇಶಿಕೆ' ಕೃತಿ ಕುರಿತು ಅವರು ಮಾತನಾಡಿದರು.

ಗಾಂಧಿ ರಚಿಸಿದ ಹಿಂದ್‌ ಸ್ವರಾಜ್‌ ಕೃತಿಯು ಮೇಲ್ನೋಟಕ್ಕೆ ಸರಳವಾದ, ಸುಲಭವಾಗಿ ಸಂವಹನವಾಗಬಲ್ಲ ಕೃತಿ. ಅದರೆ, ಅಪ್ರಯೋಗಿಕವಾದ, ಅನ್ವಯಿಸಲು ಸಾಧ್ಯವಲ್ಲದ ಪುಸ್ತಕ ಎಂಬ ಆರೋಪದ ಮಾತುಗಳು ಸಹ ಹಿಂದ್‌ ಸ್ವರಾಜ್‌ ಕುರಿತು ಕೇಳಿಬರುತ್ತವೆ. ವಾಸ್ತವದಲ್ಲಿ ಅದು ಯಾವ ಬಗೆಯ ಪುಸ್ತಕ ಎಂಬುದನ್ನು ಸುಲಭ, ಸರಳವಾಗಿ ನಿರ್ದಿಷ್ಟ ಪಡಿಸುವುದು ಸವಾಲಿನ ಕೆಲಸ. ಅರ್ಥಕ್ಕಿಂತಲೂ ಅಪಾರ್ಥಗಳನ್ನು ಸೃಷ್ಟಿಸುವ ಅಪಾಯಗಳೂ ಇವೆ. ಆದ್ದರಿಂದ ಹಿಂದ್‌ ಸ್ವರಾಜ್‌ ಕೃತಿಯ ವ್ಯಾಖ್ಯಾನವನ್ನು ನಿರಂತರವಾಗಿ ಮಾಡುವುದು ಅವಶ್ಯಕ ಎಂದರು.

ಹಳೆಯ ಪುಸ್ತಕಗಳನ್ನು ಸುಡುವುದು ಭಾರತೀಯ ಮನೋಧರ್ಮವಲ್ಲ. ಒಪ್ಪಿಕೊಳ್ಳದ ವಿಚಾರವಿರುವ ಪುಸ್ತಕದ, ಸಿದ್ಧಾಂತದ ಬಗ್ಗೆ ಹೊಸ ವ್ಯಾಖ್ಯಾನ ಬರೆದು ಅದನ್ನು ನಿರಾಕರಿಸುವುದು ಭಾರತೀಯ ಪರಂಪರೆಯಾಗಿದೆ. ಪ್ರತಿ ತಲೆಮಾರು ಮರು ವ್ಯಾಖ್ಯಾನ ಮಾಡುವ ಮೂಲಕ ಕೃತಿಯ ಸಿದ್ಧಾಂತದ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇವತ್ತಿನ ಸಮಾಜ ಉತ್ತಮವಾಗಿರಬೇಕು ಎಂಬ ಅಂತಃಕರಣ ಇರುವವರು ಹಿಂದ್‌ ಸ್ವರಾಜ್‌ ಕೃತಿಯ ವ್ಯಾಖ್ಯಾನ ಮಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಡಿ.ಎಸ್‌.ನಾಗಭೂಷಣ ಅವರ ಈ ಕೃತಿಯು ಮೊಟ್ಟ ಮೊದಲ ಸೃಜನಶೀಲ ಅವತರಣಿಕೆಯಾಗಿದೆ ಎಂದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಸಾಹಿತಿ, ಡಾ.ನಾ.ಡಿಸೋಜ ಮಾತನಾಡಿ, ಸಮಾಜವಾದದ ಬಗ್ಗೆ ತೀವ್ರ ಆಸಕ್ತಿ ಇರುವ ಡಿ.ಎಸ್‌.ನಾಗಭೂಷಣ ಅವರು ಕನ್ನಡದಲ್ಲಿನ ಭಿನ್ನವಾದ ಬರಹಗಾರರು. ಮಹತ್ವದ ವಿಚಾರಧಾರೆಗಳನ್ನು ವಿಶ್ಲೇಷಣಾತ್ಮಕವಾಗಿ ನೋಡುವ ಲೇಖಕರಾಗಿದ್ದಾರೆ. 1909ರ ಕಾಲದ ಹಿಂದ್‌ ಸ್ವರಾಜ್‌ ಈ ಕಾಲಕ್ಕೂ ಅನ್ವಯವಾಗುವ ಬಗೆಯನ್ನು ಈ ಪುಸ್ತಕದಲ್ಲಿ ತೋರಿಸಿದ್ದಾರೆ. ವೇಗ, ಭೋಗ ಮತ್ತು ರೋಗ ಎಂಬ 3 ಶಬ್ದಗಳ ಮೂಲಕ ಹಿಂದ್‌ ಸ್ವರಾಜ್‌ ಕೃತಿಯ ವ್ಯಾಖ್ಯಾನವನ್ನು ನಾಗಭೂಷಣ ಸಾಧಿಸಿದ್ದಾರೆ. ಇಂದು ಇಂಥ ಅವಲೋಕನ, ವಿಶ್ಲೇಷಣೆ ಹೆಚ್ಚು ಅನಿವಾರ‍್ಯವಾಗಿದೆ. ಕೃತಿಯ ಪ್ರವೇಶಿಕೆಯಲ್ಲಿ ನಾಗಭೂಷಣ ಅವರು ನೀಡಿದ ಮಾಹಿತಿ ಅಪೂರ್ವವಾಗಿದೆ ಎಂದರು.

ಡಾ.ಸಣ್ಣಹನುಮಂತಪ್ಪ, ಕೆ.ಎನ್‌.ವೆಂಕಟಗಿರಿ ಮಾತನಾಡಿದರು. ಡಿ.ಎಸ್‌.ನಾಗಭೂಷಣ ಹಾಜರಿದ್ದರು. ಎಂ.ವಿ.ಪ್ರತಿಭಾ ಪ್ರಾರ್ಥಿಸಿದರು. ಡಾ.ಸಫ್ರ್ರಾಜ್‌ ಚಂದ್ರಗುತ್ತಿ ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು. ಎನ್‌.ಎಂ.ಕುಲಕರ್ಣಿ ನಿರೂಪಿಸಿದರು.

ಭಾರತದ ಸೂತ್ರಗ್ರಂಥ ಪರಂಪರೆಯ ಕೊನೆಯ ಉದಾಹರಣೆಯಾಗಿ ಗಾಂಧಿಯವರ ಹಿಂದ್‌ ಸ್ವರಾಜ್‌ ಕೃತಿಯನ್ನು ಪರಿಗಣಿಸಬಹುದು. ಈ ಕೃತಿ ರಚನೆಯ ಸಂದರ್ಭದಲ್ಲಿ ಗಾಂಧಿಯವರು ಬೌದ್ಧಿಕ ಪ್ರಭಾವದ ಹಿನ್ನೆಲೆ, ಸಾಮಾಜಿಕ, ರಾಜಕೀಯ ಸಂದರ್ಭವನ್ನು ನಾಗಭೂಷಣ ಸವಿವರವಾಗಿ ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಹಿಂದ್‌ ಸ್ವರಾಜ್‌ ಕೃತಿಯನ್ನು ಓದುವಾಗ ಇಂದಿನ ರಾಜಕೀಯ ಸಿದ್ಧಾಂತಗಳನ್ನು ಬದಿಗಿಡಬೇಕು. ಈ ಕೃತಿಯನ್ನು ಓದಲು ವಿಶೇಷ ತಜ್ಞತೆ ಅಗತ್ಯವಿಲ್ಲ, ಆದರೆ, ಚಿತ್ತಶುದ್ಧಿ ಅಗತ್ಯ. ಗಾಂಧಿ ಪ್ರಸ್ತಾಪಿಸುವ ವಿಚಾರಗಳೇನು ಎಂಬುದನ್ನು ಗ್ರಹಿಸುವ ತೆರೆದ ಮನಸ್ಸು ಅಗತ್ಯ. -ಕೆ.ವಿ.ಅಕ್ಷ ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ