* ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ
* ಭಕ್ತಿಯ ಕಾರ್ಯಕ್ಕೆ ಯಶಸ್ಸು
*ಮತ್ತೊಬ್ಬರ ಬದುಕು ಕಟ್ಟುವ ಕೆಲಸ ದೊಡ್ಡದು
ಸೊರಬ: ಐತಿಹಾಸಿಕ ಪರಂಪರೆ ಉಳಿಸಲು ಶ್ರೀ ಮಾರಿಕಾಂಬ ದೇವಸ್ಥಾನ ಕಟ್ಟಿದ ಗ್ರಾಮಸ್ಥರ ಕೆಲಸ ಮಹತ್ವದ್ದಾಗಿದೆ. ಗ್ರಾಮದೇವತೆ ಆಶೀರ್ವಾದದಿಂದ ಗ್ರಾಮದ ಪ್ರಗತಿ ಸಾಧ್ಯ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕಡಸೂರು ಗ್ರಾಮದಲ್ಲಿಬುಧವಾರ ಹಮ್ಮಿಕೊಂಡ ಶ್ರೀಮಾರಿಕಾಂಬ ದೇವಸ್ಥಾನದ ನೂತನ ಪ್ರವೇಶೋತ್ಸವ ಹಾಗೂ ಶ್ರೀದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ ಕೆಲಸ ಮಾಡುವುದೇ ಜೀವನದ ಸಾರ್ಥಕತೆಯಾಗಿದೆ. ಧಾರ್ಮಿಕತೆ ಹಾಗೂ ಅಧ್ಯಾತ್ಮಿಕತೆ ಎಲ್ಲಿಯವರೆಗೆ ಮನುಷ್ಯನಲ್ಲಿಗಟ್ಟಿಯಾಗಿರುತ್ತದೋ ಅಲ್ಲಿವರೆಗೆ ಆತನಿಗೆ ಕಷ್ಟ ಎದುರಾಗುವುದಿಲ್ಲ. ಪ್ರಕೃತಿ ಹಾಗೂ ಮನುಷ್ಯನಲ್ಲಿನ ವಿಶೇಷತೆÜ ಹಿಂದೆ ದೇವರಿದ್ದಾನೆ. ಪ್ರತಿಯೊಬ್ಬರು ದಾನ, ಧರ್ಮ ಮೈಗೂಡಿಸಿಕೊಳ್ಳುವ ಮೂಲಕ ಸಿಗುವ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತಿಯಾಗುತ್ತದೆ. ಮನುಷ್ಯ ಪಶುಗಳಿಗಿಂತ ಕಡೆಯಾಗಿ ಬದುಕದೆ, ತನ್ನ ಬದುಕಿನ ಜತೆಗೆ ಇನ್ನೊಬ್ಬರ ಬದುಕನ್ನು ಕಟ್ಟುವ ಕೆಲಸ ಮಾಡಬೇಕೆಂದರು.
ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಧಾರ್ಮಿಕ ಕೆಲಸಕ್ಕೆ ಯಾವುದೇ ಅಡ್ಡಿ ಬಂದರೂ ಆ ಕೆಲಸ ನಿಲ್ಲುವುದಿಲ್ಲ. ಸ್ವಚ್ಛ ಮನಸ್ಸು ಹಾಗೂ ಭಕ್ತಿಯಿಂದ ಧಾರ್ಮಿಕ ಕಾರ್ಯ ಮಾಡಿದರೆ ಯಶಸ್ಸು ಲಭಿಸುತ್ತದೆ. ಗ್ರಾಮದಲ್ಲಿಮಾರಿಕಾಂಬ ದೇವಸ್ಥಾನ ನಿರ್ಮಿಸಿರುವುದು ಮಹತ್ಕಾರ್ಯ ಎಂದರು. ವೇದಮೂರ್ತಿ ನಿರಂಜನ ಜೋಷಿ ಗೋಕರ್ಣ ಹಾಗೂ ಸುಬ್ರಹ್ಮಣ್ಯ ಭಟ್ ಶಿರಳಗಿ ಪೌರೋಹಿತ್ಯದಲ್ಲಿಧಾರ್ಮಿಕ ಕಾರ್ಯಕ್ರಮ ಜರುಗಿದವು. ಗೊಗ್ಗಿಹಳ್ಳಿ ಸಂಸ್ಥಾನ ಮಠದ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು. ಗ್ರಾಮ ಸಮಿತಿ ಅಧ್ಯಕ್ಷ ಸದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು. ಮುಟಗುಪ್ಪೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ್ ಪ್ರಾಸ್ತಾವಿಕ ಮಾತನಾಡಿದರು.
ಸುಜನಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಮುಟಗುಪ್ಪೆ ಗ್ರಾ.ಪಂ. ಉಪಾಧ್ಯಕ್ಷ ಶಿವಕುಮಾರ್ ಕಡಸೂರು ಸ್ವಾಗತಿಸಿ, ಲಿಂಗರಾಜಗೌಡ ಕೋಣನಮನೆ ನಿರೂಪಿಸಿದರು. ಗ್ರಾಮ ಸಮಿತಿ ಸದಸ್ಯರಾದ ಚಂದ್ರಶೇಖರಗೌಡ, ರಾಮಪ್ಪ, ಕಾಳಪ್ಪ, ಶಿವಕುಮಾರಗೌಡ, ಕರಿಬಸಪ್ಪಗೌಡ, ಕೆರಿಯಪ್ಪ, ಕನ್ನಪ್ಪ, ಕೆರಿಯಪ್ಪ ಮೇಲಿನಮನೆ, ಮಾಸ್ತ್ಯಪ್ಪ, ಈಶ್ವರಪ್ಪ ಇತರರು ಇದ್ದರು.