ಆ್ಯಪ್ನಗರ

ರೈತರು, ಕಾರ್ಮಿಕರ ಹಿತ ಕಾಯುವಲ್ಲಿ ಬಿಜೆಪಿ ವಿಫಲ: ದೇವೇಗೌಡ

ಮೋದಿ ಸರಕಾರ ರಾಜ್ಯದಲ್ಲಿ ರೈತರ-ಕಾರ್ಮಿಕರ ಹಾಗು ಅಮಾಯಕರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟೀಕಿಸಿದರು.

Vijaya Karnataka 31 Oct 2018, 5:00 am
ಭದ್ರಾವತಿ: ಮೋದಿ ಸರಕಾರ ರಾಜ್ಯದಲ್ಲಿ ರೈತರ-ಕಾರ್ಮಿಕರ ಹಾಗು ಅಮಾಯಕರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟೀಕಿಸಿದರು.
Vijaya Karnataka Web SMR-30BDVT3


ಅವರು ಮಂಗಳವಾರ ಸಂಜೆ ಕನಕಮಂಟಪ ಮೈದಾನದಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಭೆ ಉದ್ಘಾಟಿಸಿ ಮಾತನಾಡಿ, ದೇಶವು ಯಾವುದೊಂದು ಜಾತಿ-ಧರ್ಮಕ್ಕೆ ಸೀಮಿತವಾಗಿಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬರು ನೆಮ್ಮದಿ ಜೀವನ ನಡೆಸಬೇಕಾಗಿದೆ. ಬಿಜೆಪಿ ಸರಕಾರ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯೆ ಒಡಕುಂಟು ಮಾಡುತ್ತಾ ನೆಮ್ಮದಿ ಹಾಳು ಮಾಡುತ್ತಿದೆ. ನಮ್ಮ 86ನೇ ವಯಸ್ಸಿನಲ್ಲಿ ಈ ದುರಂತ ನೋಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನತೆಗೆ ಹುಸಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ನಾಲ್ಕುವರೆ ವರ್ಷದಲ್ಲಿ ಏನು ಕೆಲಸ ಮಾಡಿಲ್ಲ. ಕಾಶ್ಮೀರಕ್ಕೆ ಯಾರು ಕಾಲಿಡದ ಪರಿಸ್ಥಿತಿಯಲ್ಲಿ ನಾವು ಪ್ರಧಾನಿಯಾಗಿದ್ದಾಗ ತೆರಳಿ ಅಲ್ಲಿಯ ಜನತೆಗೆ ನ್ಯಾಯ ಒದಗಿಸಿದ್ದೇನೆ. ನಮ್ಮ 11 ತಿಂಗಳ ಪ್ರಧಾನಿ ಅವಧಿಯಲ್ಲಿ ಎಲ್ಲ ರಾಜ್ಯಗಳಿಗೂ ನ್ಯಾಯ ಒದಗಿಸಿದ್ದೇನೆ. ಇಲ್ಲಿನ ವಿಐಎಸ್‌ಎಲ್‌ ಕಾರ್ಖಾನೆಯನ್ನು ಸಂಪೂರ್ಣವಾಗಿ ಸೈಲ್‌ ಆಡಳಿತಕ್ಕೆ ಸೇರ್ಪಡೆಗೊಳಿಸಿ 560 ಕೋಟಿ ರೂ. ಅನುದಾನ ನೀಡಲು ಆದೇಶಿಸಿದ್ದೆ. ದೇಶದ 9 ಕಾರ್ಖಾನೆಗಳನ್ನು ಮಾರಾಟ ಮಾಡಲು ಬಿಡದೆ ಸಾರ್ವಜನಿಕ ವಲಯದಲ್ಲಿ ಉಳಿಸಿದ್ದೇನೆಂದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಆರೋಗ್ಯವನ್ನು ಲೆಕ್ಕಿಸದೆ ಮಂಡ್ಯ, ಶಿವಮೊಗ್ಗ, ಬಳ್ಳಾರಿಯಲ್ಲಿ ದೇವೇಗೌಡರು ಮತಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಪ್ಪಾಜಿ ಅವರನ್ನು ಗೆಲ್ಲಿಸಿದ್ದರೆ ಸಚಿವರಾಗುತ್ತಿದ್ದರು. ಅವರ ಸೋಲು ಪ್ರಶ್ನಾತೀತವಾಗಿದೆ. ದೇವೇಗೌಡರು ಪ್ರಧಾನಿಗಳಾಗಿದ್ದಾಗ ನಾವು ಸಂಸದರಾಗಿದ್ದಾಗ ಅಪ್ಪಾಜಿ ಅವರ ಮನವಿ ಮೇರೆಗೆ ವಿಐಎಸ್‌ಎಲ್‌ ಕಾರ್ಖಾನೆಯನ್ನು ಕೇಂದ್ರ ಸರಕಾರಕ್ಕೆ ವಹಿಸಿ ಉಳಿಸಿದ್ದೇನೆ ಎಂದರು.

ವಿಐಎಸ್‌ಎಲ್‌ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಯೋಜನೆ ರೂಪಿಸಲು ಪುನಾ ಬರುವುದಾಗಿ ತಿಳಿಸಿದರು. ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ, ಬಿಎಸ್‌ವೈ ಮತ್ತು ಬಿವೈಆರ್‌ ಅವರ ಅಧಿಕಾರವಧಿಯಲ್ಲಿ ವಿಐಎಸ್‌ಎಲ್‌-ಎಂಪಿಎಂನ್ನು ಅಧೋಗತಿಗೆ ತಂದಿದ್ದಾರೆ. ಅಂತಹವರು ಮತ್ತೆ ಚುನಾವಣೆಗೆ ಗಿಮಿಕ್‌ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮತ ನೀಡದೇ, ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಗೀತಾ ಶಿವರಾಜಕುಮಾರ್‌, ಮುಖಂಡರಾದ ಬಲ್ಕಿಷ್‌ ಬಾನು, ಜ್ಯೋತಿ ಎಸ್‌.ಕುಮಾರ್‌, ಮಣಿಶೇಖರ್‌, ಎಸ್‌.ಕುಮಾರ್‌ ಮಾತನಾಡಿದರು.ವಿಧಾನ ಪರಿಷತ್‌ ಸದಸ್ಯರಾದ ಭೋಜೇಗೌಡ, ಕೋನರೆಡ್ಡಿ, ಎಚ್‌.ಸಿ.ದಾಸೇಗೌಡ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ