ಆ್ಯಪ್ನಗರ

ಲೋಕ ಸಮರಕ್ಕೆ ಮಧು ಜೆಡಿಎಸ್‌ ಅಭ್ಯರ್ಥಿ

ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಜಾತ್ಯತೀತ ಜನತಾದಳ ಶಿವಮೊಗ್ಗ ಕ್ಷೇತ್ರದ ಪಕ್ಷ ದ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಿದೆ.

Vijaya Karnataka 25 Feb 2019, 5:00 am
ಶಿವಮೊಗ್ಗ : ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಜಾತ್ಯತೀತ ಜನತಾದಳ ಶಿವಮೊಗ್ಗ ಕ್ಷೇತ್ರದ ಪಕ್ಷ ದ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಿದೆ.
Vijaya Karnataka Web madhu bangarappa [JDS]


ಮಿತ್ರ ಪಕ್ಷ ದೊಂದಿಗೆ ಮೈತ್ರಿ ಚರ್ಚೆ ನಡೆಯುತ್ತಿರುವಾಗಲೆ, ರಾಜ್ಯದ ಉಳಿದೆಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂಬ ಚರ್ಚೆ ನಡೆಯುತ್ತಿರುವಾಗಲೆ ಮುಖಂಡರ ಸಲಹೆ ಮೇರೆಗೆ ಅವಿರೋಧವಾಗಿ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಲ್ಲಿ ಜೆಡಿಎಸ್‌ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಕ್ಷ ದ ಮಾಜಿ ಶಾಸಕರು, ಸ್ಥಳೀಯ ಮುಖಂಡರನ್ನೊಳಗೊಂಡ ಸಭೆಯಲ್ಲಿ ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಚರ್ಚಿಸಲು ಕರೆಯಲಾದ ಸಭೆಯಲ್ಲೇ ಅಭ್ಯರ್ಥಿಯನ್ನೂ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ದ ಮೂಲಗಳು ತಿಳಿಸಿವೆ.

ರಾಜ್ಯ ಸರಕಾರದ ಮಿತ್ರ ಪಕ್ಷ ಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಬಗ್ಗೆ ಚರ್ಚೆ ನಡೆಯುತ್ತಿದ್ದು ಉಪ ಚುನಾವಣೆಯಂತೆ ಈ ಬಾರಿಯೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ನಿರ್ಧಾರ ಮಾಡಿದಲ್ಲಿ ಮಧು ಬಂಗಾರಪ್ಪ ಅವರೇ ಮೈತ್ರಿಕೂಟದ ಅಭ್ಯರ್ಥಿಯೂ ಆಗಲಿದ್ದಾರೆ. ಮೈತ್ರಿ ಖಚಿತವಾದಲ್ಲಿ ಶಿವಮೊಗ್ಗ ಕ್ಷೇತ್ರವು ಮತ್ತೊಮ್ಮೆ ದೇಶದ ಹೈ ವೋಲ್ಟೇಜ್‌ ಕ್ಷೇತ್ರವೆನಿಸಿಕೊಳ್ಳಲಿದೆ. ಮೂರು ತಿಂಗಳ ಹಿಂದೆ ದಿಢೀರ್‌ ಎದುರಾದ ಲೋಕಸಭೆ ಉಪ ಚುನಾವಣೆಯಲ್ಲಿ ಕ್ಷೇತ್ರವು ದೇಶದ ಗಮನ ಸೆಳೆದಿತ್ತು.

ಉಪ ಚುನಾವಣೆಯಲ್ಲಿ ಬಹಳ ತಡವಾಗಿ ರಂಗ ಪ್ರವೇಶ ಮಾಡಿ ಕೇವಲ 50 ಸಾವಿರ ಮತಗಳ ಅಂತರದಿಂದ ಸೋಲುಕಂಡ ಮಧು ಬಂಗಾರಪ್ಪ ಅವರಿಂದ ಮಾತ್ರ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ಪಕ್ಷ ದ ಸಭೆಯಲ್ಲಿ ಶಿವಮೊಗ್ಗದ ಮುಖಂಡರು ಸಲಹೆ ನೀಡಿದರು. ಮತ್ತೊಮ್ಮೆ ಮೋದಿ ಮಂತ್ರ ಜಪಿಸುತ್ತಿರುವ ಬಿಜೆಪಿಯವರು ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕೆಂದರೆ ಶಿವಮೊಗ್ಗದಲ್ಲೇ ಅದಕ್ಕೆ ಹೆಚ್ಚು ಪೆಟ್ಟು ಕೊಡಬೇಕು. ಅದಕ್ಕಾಗಿ ಈ ಬಾರಿ ಶಿವಮೊಗ್ಗ ಚುನಾವಣೆ ಉಸ್ತುವಾರಿಯನ್ನು ಸ್ವತಃ ತಾವೇ ನೋಡಿಕೊಳ್ಳುವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸಾಧ್ಯವಾದಲ್ಲಿ ರಾಜ್ಯದ ಚುನಾವಣೆ ಪ್ರಚಾರವನ್ನು ಶಿವಮೊಗ್ಗದಿಂದಲೇ ಆರಂಭಿಸುವುದಾಗಿ ಸಹ ಮುಖಂಡರಿಗೆ ತಿಳಿಸಿದ್ದಾರೆ. ಮಾರ್ಚ್‌ 2ರಂದು ತೀರ್ಥಹಳ್ಳಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿದ್ದು ಆ ಸಮಯದಲ್ಲಿ ಮುಖಂಡರ ಸಭೆ ನಡೆಸುವ ಬಗ್ಗೆಯೂ ಹೇಳಿದ್ದಾರೆ. ಅಲ್ಲದೆ ಮಾರ್ಚ್‌ 5ರೊಳಗೆ ಶಿವಮೊಗ್ಗದಲ್ಲಿ ರೈತರ ಬೃಹತ್‌ ಸಮಾವೇಶ ಸಂಘಟಿಸಲು ಪಕ್ಷ ದ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರಿಗೆ ಸೂಚನೆ ನೀಡಿದ್ದಾರೆ.

ಸಭೆಗೆ ಮಧು ಗೈರು:

ಲೋಕಸಭೆ ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಕರೆಯಲಾದ ಮುಖಂಡರ ಸಭೆಗೆ ಮಧುಬಂಗಾರಪ್ಪ ಅವರೇ ಗೈರು ಹಾಜರಾಗಿದ್ದರು. ಆದರೆ, ಪೂರ್ವ ನಿರ್ಧಾರಿತ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕಾದ ಕಾರಣ ಪಕ್ಷ ದ ರಾಜ್ಯಾಧ್ಯಕ್ಷ ರು ಮತ್ತು ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಂಡೇ ಕಾರ್ಯಕ್ರಮಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಮುಖಂಡರಿಗೆ ಮಧು ಬಂಗಾರಪ್ಪ ಅವರ ಮನೆಯಲ್ಲೇ ಬೆಳಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರು ಸಭೆಗೆ ಬರಲಾಗುತ್ತಿಲ್ಲ, ಸೋಮವಾರ ಸಂಜೆಯ ಸಭೆಯಲ್ಲಿ ಭಾಗವಹಿಸುವುದಾಗಿ ಮುಖಂಡರಿಗೆ ತಿಳಿಸಿದ್ದರೆಂದು ಗೊತ್ತಾಗಿದೆ.

ಸಭೆಯಲ್ಲಿ ಪಕ್ಷ ದ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥಗೌಡ, ಮಾಜಿ ಶಾಸಕರಾದ ಎಂ.ಜೆ.ಅಪ್ಪಾಜಿ, ಶಾರದಾ ಪೂರ್ಯಾನಾಯ್ಕ್‌, ಮುಖಂಡರಾದ ಎಂ.ಶ್ರೀಕಾಂತ್‌, ಜಿ.ಡಿ.ಮಂಜುನಾಥ್‌, ಕಾಂತರಾಜ್‌, ಆನಂದ್‌, ತಾಲೂಕು ಅಧ್ಯಕ್ಷ ರು, ವಿವಿಧ ಘಟಕಗಳ ಅಧ್ಯಕ್ಷ ರು ಪಾಲ್ಗೊಂಡಿದ್ದರು.

ಸೋಮವಾರ ಪ್ರಮುಖರ ಸಭೆ:

ಭಾನುವಾರದ ಸಭೆಯಲ್ಲಿ ಪಕ್ಷ ದ ಮಾಜಿ ಶಾಸಕರಲ್ಲದೆ ಜಿಲ್ಲೆ ಮತ್ತು ತಾಲೂಕು ಮುಖಂಡರು ಭಾಗವಹಿಸಿದ್ದರು. ಶಿವಮೊಗ್ಗ ಕ್ಷೇತ್ರದ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಉದ್ದೇಶದಿಂದ ಸೋಮವಾರ ಸಂಜೆ 6ಗಂಟೆಗೆ ಪಕ್ಷ ದ ಕಚೇರಿಯಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಶಾಸಕರಾದ ಎಂ.ಜೆ.ಅಪ್ಪಾಜಿ, ಮಧುಬಂಗಾರಪ್ಪ, ಶಾರದಾ ಪೂರ್ಯಾನಾಯ್ಕ್‌, ಪಕ್ಷ ದ ಜಿಲ್ಲಾಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರಿಗೆ ಸಭೆಗೆ ಹಾಜರಾಗುವಂತೆ ಸಿಎಂ ಸೂಚಿಸಿದ್ದಾರೆಂದು ಗೊತ್ತಾಗಿದೆ.

==========================


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ