ಆ್ಯಪ್ನಗರ

ಗ್ರಂಥಾಲಯಗಳ ನಿರಂತರ ಭೇಟಿಯಿಂದ ಜ್ಞಾನ ವೃದ್ಧಿ

ಗ್ರಂಥಾಲಯಗಳಿಗೆ ನಿರಂತರವಾಗಿ ಭೇಟಿ ನೀಡುವುದರಿಂದ ಜ್ಞಾನ ವೃದ್ಧಿಯಾಗಲಿದೆ ಎಂದು ವೈದ್ಯ ಡಾ.ಗುರುರಾಜ್‌ ಹೇಳಿದರು.

Vijaya Karnataka 6 Jul 2019, 5:00 am
ಹೊಸನಗರ : ಗ್ರಂಥಾಲಯಗಳಿಗೆ ನಿರಂತರವಾಗಿ ಭೇಟಿ ನೀಡುವುದರಿಂದ ಜ್ಞಾನ ವೃದ್ಧಿಯಾಗಲಿದೆ ಎಂದು ವೈದ್ಯ ಡಾ.ಗುರುರಾಜ್‌ ಹೇಳಿದರು.
Vijaya Karnataka Web SMR-5HOSP1


ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ರಾಷ್ಟ್ರೀಯ ನೀತಿ ಆಯೋಗದ ಆದೇಶದನ್ವಯ ಗ್ರಂಥಾಲಯ ಚಳವಳಿಯ ಪಿತಾಮಹ ಕೇರಳದ ಪಿ.ಎನ್‌. ಫಣ್ಣಿಕ್ಕರ್‌ ಅವರ ಸ್ಮರಣಾರ್ಥ ಜು.19ರ ವರೆಗೆ ನಡೆಯುವ 'ಓದುವ ತಿಂಗಳು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಮಸ್ತಕ ತುಂಬಿಸಿಕೊಳ್ಳಬೇಕು. ಭವಿಷ್ಯದ ಸತ್ಪ್ರಜೆಗಳಾಗಲು ಉತ್ತಮ ಪುಸ್ತಕಗಳ ಓದು ಸಹಕಾರಿ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಗೀಳಿಗೆ ಬಲಿಯಾಗಿರುವುದು ದುರಂತ ಎಂದರು.

17ನೇ ಶತಮಾನದಲ್ಲಿ ಕೆಳದಿ ರಾಣಿ ಚೆನ್ನಮ್ಮ ಈಗಿನ ಮಂಗಳೂರಿನ ಮಿಲಾಗ್ರೆಸ್‌ ಚರ್ಚ್‌ಗೆ ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದ್ದನ್ನು ಪತ್ರಿಕೆಯೊಂದು ದಾಖಲಿಸಿದೆ. ಅಲ್ಲದೆ, ನಂತರ ಆಳ್ವಿಕೆಗೆ ಬಂದ ಬಸಪ್ಪನಾಯಕ ಗ್ರಂಥಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ಎಂಬ ಸಂಗತಿ ಇತಿಹಾಸಗಳಲ್ಲಿ ಉಲ್ಲೇಖವಾಗಿದೆ ಎಂದರು.

ಶಿಕ್ಷ ಕಿ ಡಾ. ಅಂಜಲಿ ಮಾತನಾಡಿ, ಗ್ರಂಥಾಲಯಗಳ ಭೇಟಿಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಓದುವ ಹವ್ಯಾಸ ಕೇವಲ ಒಂದು ತಿಂಗಳಿಗೆ ಸೀಮಿತವಾಗದೆ ನಿರಂತರವಾಗಿರಲಿ ಎಂದರು.

ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಲೋಕೇಶ್‌ ಮಾತನಾಡಿ, ಓದಿರಿ-ಬೆಳೆಯಿರಿ ಎಂಬುದು ಗ್ರಂಥಾಲಯದ ಧ್ಯೇಯವಾಕ್ಯ ಆಗಿದೆ. ಮನಸ್ಸಿನ ಒಳಗಿನ ಬೆಳಕಿಗೆ ಓದು ಅವಶ್ಯಕ. ಗ್ರಂಥಾಲಯಗಳು ಪರಸ್ಪರ ಜ್ಞಾನ ವಿನಿಮಯದ ಕೇಂದ್ರಗಳಾಗಿದ್ದು, ನಿಸ್ವಾರ್ಥ ಸೇವೆಗೆ ಪುಸ್ತಕ ಸಹಕಾರಿ ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಮಾರ್ಷಲ್‌ ಶರಾಂ, ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಗ್ರಂಥಪಾಲಕ ಎಂ.ಆರ್‌.ಹರೀಶ್‌ ಮಾತನಾಡಿದರು. ಸಾಹಿತಿ, ಸಂಶೋಧಕ ಅಂಬ್ರಯ್ಯಮಠ, ಪದವಿಪೂರ್ವ ಕಾಲೇಜು ಗ್ರಂಥಪಾಲಕಿ ಪವಿತ್ರ, ಓದುಗ ಮಹಾಬಲಗೌಡ ಇದ್ದರು. ಪುಸ್ತಕ ಪ್ರದರ್ಶನ ಆಯೋಜಿಸಲಾಗಿತ್ತು. ಗ್ರಂಥಾಲಯಗಳ ಮಹತ್ವ, ಪುಸ್ತಕಗಳ ಓದು ಕುರಿತಂತೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಂಥಪಾಲಕ ಅಶೋಕ್‌ ಗುಳೇದ್‌ ಸ್ವಾಗತಿಸಿ, ನಿರೂಪಿಸಿದರು. ಡಾ. ಗುರುರಾಜ್‌ ಅವರು ಗ್ರಂಥಾಲಯಕ್ಕೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಕೊಡುಗೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ