ತೀರ್ಥಹಳ್ಳಿ: ವೈಜ್ಞಾನಿಕ ಮನೋಭಾವದ ವಿಚಾರಕ್ರಾಂತಿ ಬೆಳವಣಿಗೆಗೆ ಕುವೆಂಪು ಸಾಹಿತ್ಯಪ್ರೇರಣೆ ಯಾಗಿದೆ. ಕುವೆಂಪು ಸಾಹಿತ್ಯ ಪ್ರಶ್ನೆ ಮಾಡುವ ಸ್ವಭಾವ ಬೆಳೆಸಲು ಸಹಕಾರಿ ಆಗಿದೆ ಎಂದು ಸಾಹಿತಿ ಡಾ.ಕೆ.ವಿ. ನಾರಾಯಣ್ ಅಭಿಪ್ರಾಯಪಟ್ಟರು.
ತಾಲೂಕಿನ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ ಕವಿಶೈಲದಲ್ಲಿ ಶನಿವಾರ ಏರ್ಪಡಿಸಿದ್ದ ಕುವೆಂಪು ಅವರ 24ನೇ ಪುಣ್ಯ ಜಯಂತಿ ಕಾರ್ಯಕ್ರಮದಲ್ಲಿ ಸಮಾಧಿಗೆ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.
ಕುವೆಂಪು ಸಾಹಿತ್ಯ ಓದುವ ಹವ್ಯಾಸ ಯುವ ಜನತೆಯಲ್ಲಿ ಮೂಡಬೇಕು. ಶೋಷಣೆ ರಹಿತ ಸಮಾಜ ನಿರ್ಮಾಣದಲ್ಲಿ ಕುವೆಂಪು ಸಾಹಿತ್ಯದ ಪ್ರಭಾವವನ್ನು ಯುವ ಜನತೆ ಮನಗಾಣಬೇಕು. ಓದಿದರೂ ಒಂದು ವೇಳೆ ಕುವೆಂಪು ಸಾಹಿತ್ಯ ಅರ್ಥವಾಗದಿದ್ದಲ್ಲಿ ಮತ್ತೆ ಮತ್ತೆ ಚರ್ಚಿಸಿ ಅರ್ಥೈಸಿಕೊಳ್ಳಬೇಕು ಎಂದರು.
ವಿಚಾರಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು ಅವರ ವೈಚಾರಿಕತೆ ಸಾಹಿತ್ಯ ಸಾರ್ವಕಾಲಿಕವಾಗಿ ಉಳಿಯಲಿದೆ. ಇಪ್ಪತ್ತನೇ ಶತಮಾನದ ಸಾಹಿತಿಯಾಗಿ ಇಪ್ಪತ್ತೊಂದನೆ ಶತಮಾನದ ಸಾಹಿತಿಯಾಗಿ ಉಳಿದವರಲ್ಲಿ ಕುವೆಂಪು ಪ್ರಮುಖರು. ಕುವೆಂಪು ಸ್ಮಾರಕ ಮುಖ್ಯವಲ್ಲ. ಕುವೆಂಪು ಸಾಹಿತ್ಯ ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಮುಖ್ಯ ಎಂದು ನಾರಾಯಣ್ ಹೇಳಿದರು.
ಸಾಹಿತಿ ಡಾ.ಸವಿತಾಬನ್ನಾಡಿ, ಡಾ.ಬೆಸಗರಹಳ್ಳಿರಾಮಣ್ಣ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ, ಪತ್ರಕರ್ತ ಡಿ.ಉಮಾಪತಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ ಸಮಕಾರ್ಯದರ್ಶಿ ಕಡಿದಾಳ್ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್ ಮತ್ತಿತರರು ಇದ್ದರು.
ಕುವೆಂಪು ಅವರ ರೈತಗೀತೆಯನ್ನು ತೆಲುಗು ಭಾಷೆಗೆ ಭಾಷಾಂತರ ಮಾಡಿದ ಕೆ.ವೈ.ನಾರಾಯಣಸ್ವಾಮಿ ಅವರು ಭಾಷಾಂತರ ರೈತಗೀತೆ ಹಾಡಿದರು. ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಹಮ್ಮಿಕೊಂಡಿರುವ 3 ದಿನಗಳ ಕಮ್ಮಟದ ಶಿಬಿರಾರ್ಥಿಗಳು, ಶಿಕಾರಿಪುರ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.