ಆ್ಯಪ್ನಗರ

ವಿದ್ಯಾರ್ಥಿಗಳ ಪಾಲಿಗೆ ಗ್ರಂಥಾಲಯಗಳೇ ಗೆಳೆಯರಾಗಲಿ

ವಿದ್ಯಾರ್ಥಿಗಳು ಗ್ರಂಥಾಲಯವನ್ನು ಗೆಳೆಯನನ್ನಾಗಿ ಸ್ವೀಕರಿಸಿದರೆ ವಿದ್ಯಾದೇವಿ ತಮ್ಮನ್ನು ಹರಿಸಿ ಬರುತ್ತಾಳೆ ಎಂದು ನಿವೃತ್ತ ಪ್ರಾಂಶುಪಾಲ ಬಿ.ಆರ್‌.ವಿಜಯವಾಮನ ಹೇಳಿದರು.

Vijaya Karnataka 25 Jul 2019, 5:00 am
ಶಿವಮೊಗ್ಗ : ವಿದ್ಯಾರ್ಥಿಗಳು ಗ್ರಂಥಾಲಯವನ್ನು ಗೆಳೆಯನನ್ನಾಗಿ ಸ್ವೀಕರಿಸಿದರೆ ವಿದ್ಯಾದೇವಿ ತಮ್ಮನ್ನು ಹರಿಸಿ ಬರುತ್ತಾಳೆ ಎಂದು ನಿವೃತ್ತ ಪ್ರಾಂಶುಪಾಲ ಬಿ.ಆರ್‌.ವಿಜಯವಾಮನ ಹೇಳಿದರು.
Vijaya Karnataka Web SMR-24ganesh6


ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಡಿವಿಎಸ್‌ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯನ್ನು ಭೂಷಣವಾಗಿ, ಪ್ರತಿಭೆಯನ್ನು ಜೋಪಾನವಾಗಿಟ್ಟುಕೊಳ್ಳಬೇಕು ಎಂದರು.

ಪ್ರತಿಭೆ ಎನ್ನುವುದು ಶಾಲಾ, ಕಾಲೇಜುಗಳ ತರಗತಿಯ ಕೊಠಡಿಗಳಲ್ಲಿ ಹುಟ್ಟುವಂತದಲ್ಲ. ಅದು ಕೆಲವರಿಗೆ ದೈವದತ್ತವಾಗಿದ್ದರೆ, ಮತ್ತೆ ಕೆಲವರಿಗೆ ಶ್ರಮದ ಪ್ರತೀಕವಾಗಿರುತ್ತದೆ. ವಿದ್ಯೆ ಮತ್ತು ಪ್ರತಿಭೆ ಎರಡೂ ಬೇರೆ. ಗುರುಗಳಿಂದ ವಿದ್ಯೆ ಕಲಿಯಬಹುದೇ ವಿನಾ ಪ್ರತಿಭೆ ಬರಲು ಸಾಧ್ಯವಿಲ್ಲ. ಪ್ರತಿಭೆ ಎನ್ನುವುದು ಸ್ವಂತಿಕೆಯಿಂದ ಹುಟ್ಟುವಂತದ್ದು. ಪ್ರತಿಭೆಗೆ ತಕ್ಕ ಶ್ರಮ ಇದ್ದರೆ ಅದು ಎಂದೂ ಸಾಯದೇ ನಮ್ಮಲ್ಲೇ ಜೋಪಾನವಾಗಿರುತ್ತದೆ ಎಂದರು.

ಪಠ್ಯದಿಂದ ಜ್ಞಾನ ವೃದ್ಧಿಸುತ್ತದೆ ವಿನಾ ಪ್ರತಿಭೆ ಹುಟ್ಟುವುದಿಲ್ಲ. ಆದರೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ನಮ್ಮಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ. ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಅಂಕಗಳ ಹಿಂದೆ ಹೋದವರು, ಹಣದ ಜತೆ ಸ್ನೇಹ ಮಾಡುವವರು ಪ್ರತಿಭೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಇಂದು ಪೋಷಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳಾಗಿ ಬೆಳೆಸುತ್ತಿದ್ದಾರೆ. ಇದರಿಂದ ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆದರೆ, ಸ್ವಶಕ್ತರಾಗಿ ಜೀವನ ನಡೆಸುವ ಬಲ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಇದನ್ನೇ ಓದಬೇಕು ಎಂದು ಒತ್ತಡ ಹೇರುವುದು ಬಿಟ್ಟು ಅವರಿಗೆ ಆಸಕ್ತಿ ಇರುವ ವಿಷಯದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಕಲಿಕೆಯಲ್ಲಿ ಕೀಳು, ಮೇಲಿಲ್ಲ:
ನಾನು ಸೈನ್ಸ್‌ ವಿಭಾಗದಲ್ಲಿ ಓದುತ್ತಿದ್ದೇನೆ ಎಂದ ಮಾತ್ರಕ್ಕೆ ಯಾರು ಮೇಲಲ್ಲ. ಆರ್ಟ್ಸ್ ವಿಭಾಗದಲ್ಲಿ ಓದಿದ ಮಾತ್ರಕ್ಕೆ ಯಾರು ಕೀಳಲ್ಲ. ವಿದ್ಯೆಗೆ ಯಾವ ಕೀಳು, ಮೇಲು ಇಲ್ಲ. ಹಾಗೆ ನೋಡಿದರೆ ಕಲಾ ವಿಭಾಗದಲ್ಲಿ ಕಲಿತವರು ಹೆಚ್ಚು ನಿಜ ಜೀವನಕ್ಕೆ ಹತ್ತಿರವಾಗುತ್ತಾರೆ. ಆರ್ಟ್ಸ್ ಓದುವುದು ನಿಜಕ್ಕೂ ನಾಚಿಕೆಯಲ್ಲ. ಆ ಕೀಳರಿಮೆಯನ್ನು ಶೈಕ್ಷ ಣಿಕ ಕ್ಷೇತ್ರದಿಂದಲೇ ಹೊರದಬ್ಬಬೇಕು ಎಂದರು.

ಜೀ ಟಿವಿ ಕನ್ನಡ ಕಣ್ಮಣಿ ವಿಜೇತೆ ಸಂಹಿತಾ ಮಾತನಾಡಿ, ಜೀವನದಲ್ಲಿ ಹಣಗಳಿಕೆ ಎಲ್ಲರೂ ಹೆಣಗಾಡುತ್ತಿದ್ದಾರೆ. ಆದರೆ, ನಾವು ಗಳಿಸುವ ಹಣದಿಂದ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮರೆತ್ತಿದ್ದೇವೆ. ವಿದ್ಯಾರ್ಥಿ ಜೀವನವನ್ನು ನಾವು ವಿದ್ಯೆ ಕಲಿಯುವುದಕ್ಕಾಗಿ ಮೀಸಲಿಡಬೇಕು ಎಂದರು.

ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಸಂದರ್ಭ ಬಂದಾಗ ಅದು ಅನಾವರಣಗೊಳ್ಳುತ್ತದೆ. ಆಗ ಅದನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಶಿಕ್ಷ ಕರು, ಪೋಷಕರು ಇದನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಭಾರತ ಕಲೆಗಳ ತವರೂರು. ಕಲೆಗಳು ಬದುಕಿಗೆ ಸಂತೋಷ ನೀಡುತ್ತವೆ. ಸಹನೆ ಕಲಿಸುತ್ತವೆ ಎಂದರು.

ಡಿವಿಎಸ್‌ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ಪದವಿಪೂರ್ವ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಮಹಮ್ಮದ್‌ ಇಮ್ತಿಯಾಜ್‌, ಸಮಿತಿ ಉಪಾಧ್ಯಕ್ಷ ಕೆ.ಎನ್‌. ರುದ್ರಪ್ಪ ಗೌಡ, ಕಾರ್ಯದರ್ಶಿ ಎಸ್‌.ರಾಜಶೇಖರ್‌, ಸಹ ಕಾರ್ಯದರ್ಶಿ ಎಸ್‌.ಪಿ. ದಿನೇಶ್‌ ಮತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ