ಆ್ಯಪ್ನಗರ

ಕಾಂಗ್ರೆಸ್‌, ಜೆಡಿಎಸ್‌ನವರದ್ದು ಆಚಾರವಿಲ್ಲದ ನಾಲಿಗೆ

ಆರು ತಿಂಗಳ ಹಿಂದೆ ದೊಡ್ಡ ಗೌಡರ ಡೈಲಾಗ್‌ ಬೇರೆಯೇ ಇತ್ತು. ಅದು ಈಗ ಬದಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನೋಡಿಯೇ ದಾಸರು ಆಚಾರವಿಲ್ಲದ ನಾಲಿಗೆ ಎಂದಿರಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿಮಾಡಿದರು.

Vijaya Karnataka 22 Oct 2018, 5:00 am
ಶಿವಮೊಗ್ಗ : ಆರು ತಿಂಗಳ ಹಿಂದೆ ದೊಡ್ಡ ಗೌಡರ ಡೈಲಾಗ್‌ ಬೇರೆಯೇ ಇತ್ತು. ಅದು ಈಗ ಬದಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನೋಡಿಯೇ ದಾಸರು ಆಚಾರವಿಲ್ಲದ ನಾಲಿಗೆ ಎಂದಿರಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿಮಾಡಿದರು.
Vijaya Karnataka Web loose talk congress jds
ಕಾಂಗ್ರೆಸ್‌, ಜೆಡಿಎಸ್‌ನವರದ್ದು ಆಚಾರವಿಲ್ಲದ ನಾಲಿಗೆ


ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಸೋಲಿಸುವುದೇ ತನ್ನ ಕೊನೆಯ ಆಸೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಜೆಡಿಎಸ್‌ ಬಿಜೆಪಿಯ ಬಿ ಟೀಂ, ಅದು ಧೃತರಾಷ್ಟ್ರನ ಜಾತಿ, ಅಲ್ಲಿದ್ದರೆ ಯಾರೂ ಬೆಳೆಯೋದಿಲ್ಲ ಎಂದಿದ್ದರು. ಈಗ ಅದೆಲ್ಲ ಮರೆತು ಇಬ್ಬರೂ ಒಂದಾಗಿದ್ದಾರೆ ಎಂದು ಆರೋಪಿಸಿದರು.

ನನ್ನ ರಾಜಕೀಯ ಜೀವನದಲ್ಲೇ ಕುಮಾರಸ್ವಾಮಿ ರೀತಿಯ ಸಿಎಂ ನೋಡಿರಲಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ಎಷ್ಟು ಕಾಲ ಒಟ್ಟಿಗೆ ಇರುತ್ತವೆ ಎಂಬುದನ್ನು ಕಾಲವೇ ಹೇಳುತ್ತದೆ. ಮೈತ್ರಿ ಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಟ್ಟರೆ ಏನೂ ಲಾಭವಾಗಿಲ್ಲ. ರಾಜಕೀಯ ಭವಿಷ್ಯದ ಭಯದಿಂದ ತೋರಿಕೆಗಾಗಿ ಇಬ್ಬರೂ ಒಂದಾಗಿದ್ದಾರೆ. ಈ ಆಲಿಂಗನ ಎಂತಹದ್ದು ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದರು.

ಬಿಜೆಪಿ ಸಿದ್ಧಾಂತ ಆಧಾರಿತ ರಾಜಕೀಯ ಪಕ್ಷ. ಅಭಿವೃದ್ಧಿ ನಮ್ಮ ಅಜೆಂಡ. ಅಭಿವೃದ್ಧಿ ಆಧರಿಸಿ ಸೈದ್ಧಾಂತಿಕ ಬದ್ಧತೆ ಆಧಾರದ ಮೇಲೆ ಮತ ಗಳಿಸುತ್ತೇವೆ ಹೊರೆತು ಯಾರ ಬೆನ್ನಿಗೂ ಚೂರಿ ಹಾಕುವ ಅಭ್ಯಾಸ ಬಿಜೆಪಿಗಿಲ್ಲ. 2014ರಲ್ಲಿ ಕೆಲವರು ಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಎಂದಿದ್ದ ಸಿದ್ದರಾಮಯ್ಯ ಇಂದು ಅವರ ಅಪ್ಪನ ಜತೆಯಲ್ಲೇ ಕುಳಿತು ಜಂಟಿ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ಇದು ಅವರ ಸೌಭಾಗ್ಯವೋ ಅಥವಾ ದೌರ್ಭಾಗ್ಯವೋ ಗೊತ್ತಿಲ್ಲ ಎಂದರು.

ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ. ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ತೂಕ ಮಾಡಿದರೆ, ಬಿಜೆಪಿ ಅವಧಿಯಲ್ಲಿ ಬಿಎಸ್‌ವೈ ಸಿಎಂ ಆಗಿದ್ದಾಗ ಆದ ಅಭಿವೃದ್ಧಿ ಕೆಲಸಗಳು ಎದ್ದು ಕಾಣುತ್ತವೆ ಎಂದರು.

ಮಾಜಿ ಸಂಸದೆ ತೇಜಸ್ವಿನಿ ಗೌಡ ಮಾತನಾಡಿ, ಹಾಸನದಲ್ಲಿ ಬಿಜೆಪಿಯ ಪ್ರೀತಮ್‌ ಗೌಡ ಗೆಲುವು ಸಾಧಿಸುವ ಮೂಲಕ ಹಾಗೂ ಮಂಡ್ಯದಲ್ಲಿ 36 ಸಾವಿರ ಮತಗಳನ್ನು ಗಳಿಸುವ ಮೂಲಕ ಜೆಡಿಎಸ್‌ನ ಭದ್ರ ಕೋಟೆಯ ಬೇರುಗಳನ್ನು ಅಲುಗಾಡಿಸಲು ಬಿಜೆಪಿಗೆ ಸಾಧ್ಯವಾಗಿದೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಪ್ರೀತಮ್‌ ಗೌಡ, ಮಾಜಿ ಶಾಸಕ ಡಿ.ಎನ್‌. ಜೀವರಾಜ್‌, ಡಿ.ಎಸ್‌.ಅರುಣ್‌, ಎಸ್‌.ದತ್ತಾತ್ರಿ, ರತ್ನಾಕರ್‌ ಶೆಣೈ, ಬಿ.ಆರ್‌. ಮಧುಸೂದನ್‌, ಅಣ್ಣಪ್ಪ, ಬಿಳಕಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.

ಕಾಂಗ್ರೆಸ್‌ ಎಚ್ಚರ ವಹಿಸಲಿ

ಮನೆಯ ಮುಂದೆ ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್‌ ಹಾಕಿರುತ್ತಾರೆ. ಅದೇ ರೀತಿ ಕಾಂಗ್ರೆಸ್‌ನವರು ಜೆಡಿಎಸ್‌ನಿಂದ ಎಚ್ಚರದಿಂದ ಇರಬೇಕು. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಎಂದೂ ನೆಲೆ ಕಳೆದುಕೊಂಡಿಲ್ಲ. ಆದರೆ ನೆಲೆ ಇಲ್ಲದ ಸ್ಥಿತಿಗೆ ತಳ್ಳಲು ಜೆಡಿಎಸ್‌ ತಯಾರಿ ನಡೆಸಿದ್ದು, ಕಾಂಗ್ರೆಸಿಗರು ಎಚ್ಚರ ವಹಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ