ಸಾಗರ: ಶ್ರದ್ಧೆ ಮತ್ತು ಭಕ್ತಿಯ ಸಂಕೇತವಾಗಿರುವ ಮಠಮಂದಿರಗಳ ಜತೆ ನಿರಂತರ ಸಂಪರ್ಕ ಹೊಂದುವ ಮೂಲಕ ಬದುಕಿನ ಸಾರ್ಥಕತೆ ಸಾಧಿಸಿಕೊಳ್ಳಬೇಕು ಎಂದು ಹಾರ್ನಳ್ಳಿ ಚೌಕಿಮಠದ ಶ್ರೀನೀಲಕಂಠ ಹೇಳಿದರು.
ಇಲ್ಲಿನ ಅಶೋಕ ರಸ್ತೆಯ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಪ್ರತಿಷ್ಠಾನದಿಂದ ಶುಕ್ರವಾರ ಶ್ರೀಮನ್ ಮಾರುತಿ ಮಹಾರಥೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ, ವೀರಹನುಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಒಲವಿನಿಂದ ಒತ್ತಡವಿಲ್ಲದೆ ಬದುಕು ನಡೆಸಬಹುದು. ವೀರಾಂಜನೇಯ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಾಧಕರನ್ನು ಸನ್ಮಾನಿಸುತ್ತಿರುವುದು ಉತ್ತಮ ಚಿಂತನೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಮಾರಿಕಾಂಬಾ , ಗಣಪತಿಜಾತ್ರೆ ಇನ್ನಿತರೆ ಊರಿನ ಪ್ರಮುಖ ಜಾತ್ರೆಗಳಲ್ಲಿ ಉಪ್ಪಾರ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪಾರ ಸಮಾಜದ ಧಾರ್ಮಿಕ ಕಾರ್ಯವಿಧಾನ ಅನುಸರಣೀಯವಾದುದು ಎಂದರು.
ಇದೇ ಸಂದರ್ಭ ಚಲನಚಿತ್ರ ನಿರ್ದೇಶಕ ಗೋವಿಂದರಾಜು ಹಾಗೂ ಕರಾಟೆಪಟು ಬಿ.ಆರ್. ಛಾಯಾ ಅವರಿಗೆ 'ವೀರಹನುಮ ಪ್ರಶಸ್ತಿ' ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದ ಡಾ.ಪರಪ್ಪ, ಗಜಾನನ ಗುಡಿಗಾರ್ ಹಾಗೂ ಶಬರೀಶ್ ಅವರನ್ನು ಸನ್ಮಾನಿಸಲಾಯಿತು.
ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ವಿ.ಮಂಜಪ್ಪ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್, ಸದಸ್ಯೆ ಕಾವೇರಿ ಲಕ್ಕಪ್ಪ ಮತ್ತಿತರರು ಹಾಜರಿದ್ದರು.