ಆ್ಯಪ್ನಗರ

ಸಾಮಾಜಿಕ ಪರಿವರ್ತನೆಯಲ್ಲಿ ಮಠಗಳ ಕೊಡುಗೆ ಅನನ್ಯ

ಮೌಲ್ಯ ಸಮಾಜ ನಿರ್ಮಾಣ, ಬಡವರಿಗೆ ಅನ್ನ ಮತ್ತು ವಿದ್ಯಾದಾನ ಮಾಡುವುದರಲ್ಲಿ ವೀರಶೈವ ಮಠಗಳ ಪಾತ್ರ ಅನನ್ಯವಾಗಿದೆ ಎಂದು ಸಾಹಿತಿ ಡಾ. ಬಸವರಾಜ್‌ ಕಲ್ಗುಡಿ ಹೇಳಿದರು.

Vijaya Karnataka 20 Feb 2019, 5:00 am
ಶಿವಮೊಗ್ಗ : ಮೌಲ್ಯ ಸಮಾಜ ನಿರ್ಮಾಣ, ಬಡವರಿಗೆ ಅನ್ನ ಮತ್ತು ವಿದ್ಯಾದಾನ ಮಾಡುವುದರಲ್ಲಿ ವೀರಶೈವ ಮಠಗಳ ಪಾತ್ರ ಅನನ್ಯವಾಗಿದೆ ಎಂದು ಸಾಹಿತಿ ಡಾ. ಬಸವರಾಜ್‌ ಕಲ್ಗುಡಿ ಹೇಳಿದರು.
Vijaya Karnataka Web SMG-1902-2-15-19SMG9


ಗುರುಬಸವ ಅಧ್ಯಯನ ಪೀಠ, ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 107ನೇ ಪುಣ್ಯ ಸ್ಮರಣೋತ್ಸವ ಸಮಿತಿ ವತಿಯಿಂದ ನಗರದ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ '471ನೇ ಮಾಸಿಕ ಶಿವಾನುಭವ ಗೋಷ್ಠಿ, ಅಲ್ಲಮಪ್ರಭು, ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮಠಗಳು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಇನ್ನಿತರ ಯಾವುದೇ ಸಮುದಾಯಗಳು ಮಾಡುತ್ತಿಲ್ಲ. 12ನೇ ಶತಮಾನದಲ್ಲಿ ವಚನಕಾರರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮಠಗಳು ನಡೆಯುತ್ತಿವೆ. ಕರ್ನಾಟಕದ ಸಂಸ್ಕೃತಿಯ ದ್ಯೋತಕವಾಗಿ ಮಠಗಳು ಹೊರಹೊಮ್ಮುತ್ತಿವೆ ಎಂದರು.

* ಸಾಧನೆ ಗುರುತಿಸಿದ್ದಕ್ಕೆ ಸಾರ್ಥಕತೆ: ಇಂದು ಯಾವುದೇ ಪ್ರಶಸ್ತಿ ಪಡೆಯಬೇಕಾದರೂ ಲಾಬಿ ಇದ್ದೇ ಇದೆ. ಸಾಧನೆಯನ್ನು ನೋಡಿ ಸಿಗುವ ಪ್ರಶಸ್ತಿಗಳೇ ಕಡಿಮೆ. ಆದರೆ, ಬೆಕ್ಕಿನಕಲ್ಮಠದಿಂದ ನಾನು ಮಾಡಿರುವ ಕೆಲಸಗಳನ್ನು ಗುರುತಿಸಿದ್ದು ಖುಷಿ ನೀಡಿದೆ ಎಂದು ತಿಳಿಸಿದರು.

ಅಲೌಕಿಕವಾದ ಆಧ್ಯಾತ್ಮಿಕ ಜಗತ್ತನ್ನು 12ನೇ ಶತಮಾನದಲ್ಲಿ ವಚನಗಳಲ್ಲಿ ಬಿಚ್ಚಿಡಲಾಯಿತು. ಆದರಿನ್ನೂ ವಚನಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ಜನರು ವಿಫಲರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಅತ್ಯಂತ ಸರಳ ಭಾಷೆಯಲ್ಲಿ ಅಧ್ಯಾತ್ಮವನ್ನು ಜನರಿಗೆ ತಲುಪಿಸುವ ಕೆಲಸ ವಚನಗಳು ಮಾಡಿವೆ. ಜನಸಾಮಾನ್ಯರಿಗೂ ಅರ್ಥವಾಗುವಂತಹ ಅಂಶಗಳ ಮೂಲಕ ವಿವರಣೆ ನೀಡಲಾಗಿದೆ. ಹೀಗಾಗಿ, ವಚನ ಸಾಹಿತ್ಯ ಶ್ರೇಷ್ಠವಾದದ್ದು ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌, ಆನಂದಪುರದಲ್ಲಿ ಮುರುಘಾಮಠ ಸಾವಿರಾರು ಪುಸ್ತಕಗಳ ಭಂಡಾರವೇ ಇದೆ. ಹಳೆಯ ವಸ್ತುಗಳು, ತಾಳೆಗರಿಗಳನ್ನು ಸಂಗ್ರಹಿಸಿಡಲಾಗಿದೆ. ನಮ್ಮ ಸಂಸ್ಕೃತಿಯ ಪರಿಚಯವಾಗಬೇಕಾದರೆ, ಪ್ರತಿಯೊಬ್ಬರೂ ಅಲ್ಲಿಗೆ ಭೇಟಿ ನೀಡಬೇಕು. ಬೆಕ್ಕಿನಕಲ್ಮಠವು ಮಲೆನಾಡ ಸಿರಿಯಾಗಿದ್ದು, ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಡಾ. ಬಸವರಾಜ್‌ ಕಲ್ಗುಡಿ ಅವರಿಗೆ 'ಅಲ್ಲಮಪ್ರಭು' ಹಾಗೂ ಲೀಲಾದೇವಿ ಅವರಿಗೆ 'ಗುರುಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಿಇಎಸ್‌ ಸಂಸ್ಥೆಯ ಅರುಣಾದೇವಿ, ಶಿವಣ್ಣ, ಗೋಪಾಲಕೃಷ್ಣ ಕೊಳತ್ತಾಯ, ಜಯಶ್ರೀ ಇತರರಿದ್ದರು.

==============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ