ಆ್ಯಪ್ನಗರ

ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲು ಬಂದಿದ್ದು 99, ಬರಬೇಕಾಗಿದ್ದು 100, ಮರು ಮೌಲ್ಯಮಾಪನದ ನಂತರ ಬಂದದ್ದು 88 ಅಂಕ!

ವಿದ್ಯಾರ್ಥಿನಿ ಧಾರಿಣಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಫಲಿತಾಂಶ ಹೊರಬಿದ್ದಾಗ ಅವರಿಗೆ ಒಟ್ಟು ಶೇ.96 ಅಂಕ ಲಭಿಸಿತ್ತು. ಲೆಕ್ಕಶಾಸ್ತ್ರ ವಿಷಯದಲ್ಲಿ 100ಕ್ಕೆ 99 ಅಂಕ ಬಂದಿತ್ತಾದರೂ, ವಿದ್ಯಾರ್ಥಿನಿ ಪ್ರಕಾರ ನೂರಕ್ಕೆ ನೂರು ಅಂಕ ಬರಬೇಕಿತ್ತು.

Vijaya Karnataka Web 30 Sep 2020, 9:14 pm
ಹೊಸನಗರ (ಶಿವಮೊಗ್ಗ): ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ತಾಲೂಕಿನ ವಿದ್ಯಾರ್ಥಿನಿಯೊಬ್ಬರಿಗೆ ವಿಷಯವೊಂದರಲ್ಲಿ ಒಂದು ಅಂಕ ಕಡಿಮೆ ಬಂದಿರುವುದು ಗೊತ್ತಾಗಿದ್ದು, ಅದರ ಮರು ಎಣಿಕೆ ಹಾಕಿದರೆ ಮತ್ತೆ 11 ಅಂಕ ಕಡಿಮೆ ಬಂದಿದೆ.
Vijaya Karnataka Web ಪರೀಕ್ಷೆ
ಪರೀಕ್ಷೆ


ಈ ಬೆಳವಣಿಗೆ ವಿದ್ಯಾರ್ಥಿನಿ ಮತ್ತು ಪೋಷಕರಲ್ಲಿ ಗೊಂದಲ ಮೂಡಿಸಿದ್ದು, ಒಟ್ಟಾರೆ ಮೌಲ್ಯಮಾಪನ ಪ್ರಕ್ರಿಯೆಯ ಹೂರಣ ಬಯಲಿಗೆ ಬಿದ್ದಂತಾಗಿದೆ.

ತಾಲೂಕಿನ ಕಾರಣಗಿರಿಯ ವಿದ್ಯಾರ್ಥಿನಿ ಧಾರಿಣಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಫಲಿತಾಂಶ ಹೊರಬಿದ್ದಾಗ ಅವರಿಗೆ ಒಟ್ಟು ಶೇ.96 ಅಂಕ ಲಭಿಸಿತ್ತು. ಲೆಕ್ಕಶಾಸ್ತ್ರ ವಿಷಯದಲ್ಲಿ 100ಕ್ಕೆ 99 ಅಂಕ ಬಂದಿತ್ತಾದರೂ, ವಿದ್ಯಾರ್ಥಿನಿ ಪ್ರಕಾರ ನೂರಕ್ಕೆ ನೂರು ಅಂಕ ಬರಬೇಕಿತ್ತು. ಉತ್ತರ ಪತ್ರಿಕೆಯ ಪ್ರತಿ ತರಿಸಿ ನೋಡಿದಾಗ ಎಲ್ಲವೂ ಸರಿಯಾಗಿಯೇ ಇದ್ದರೂ 1 ಅಂಕ ಕಡಿತಗೊಂಡಿರುವುದು ಕಂಡುಬಂದಿತ್ತು.

ಪೋಷಕರು ಹಾಗೂ ಉಪನ್ಯಾಸಕರ ಸಲಹೆ ಪಡೆದು ಆಕ್ಷೇಪಣೆಗೆ ಅರ್ಹವಾಗಿದೆ ಎಂದು ಖಚಿತಪಡಿಸಿಕೊಂಡು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಧಾರಣಿಯ ದುರಾದೃಷ್ಟವೋ ಎನ್ನುವಂತೆ ಮರು ಎಣಿಕೆಯಲ್ಲಿ ಅವರಿಗೆ ಕೇವಲ 88 ಅಂಕ ನೀಡಲಾಗಿದೆ.

ಇದರಿಂದ ಮನನೊಂದ ವಿದ್ಯಾರ್ಥಿನಿ ಮತ್ತು ಪೋಷಕರು ಬೆಂಗಳೂರಿಗೆ ತೆರಳಿ ಪಿಯು ಮಂಡಳಿಯನ್ನು ಸಂಪರ್ಕ ಮಾಡಿದರೂ ಪ್ರಯೋಜನವಾಗಿಲ್ಲ.

ಕೊರೊನಾ ಸಂಕಷ್ಟದ ನಡುವೆಯೂ ಕಷ್ಟಪಟ್ಟು ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳಿಗೆ ಇಂತಹ ಸಮಸ್ಯೆ ಎದುರಾಗಿದೆ. ಮಂಡಳಿಯ ಉನ್ನತ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿದರೂ ಉಡಾಫೆಯ ಉತ್ತರ ಹೇಳಿದ್ದಾರೆ. ಇದರಿಂದ ನೋವಾಗಿದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯ ತಂದೆ ಹನಿಯ ರವಿ ಬೇಸರ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಗೆ ಕೌಶಲ ಹೊಂದಿದವರನ್ನೇ ನೇಮಕ ಮಾಡಬೇಕು. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ಸರಿಯುತ್ತದೆ. ನನ್ನಂತೆ ರಾಜ್ಯದ ಹಲವು ವಿದ್ಯಾರ್ಥಿಗಳಿಗೂ ಅನ್ಯಾಯವಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕು. ಸರಕಾರ ಇಂತಹ ಸಮಸ್ಯೆಗಳನ್ನು ಗಮನಿಸಬೇಕು.
- ಧಾರಿಣಿ, ನೊಂದ ವಿದ್ಯಾರ್ಥಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ