ಆ್ಯಪ್ನಗರ

ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿ-ಮಗನ ಬರ್ಬರ ಹತ್ಯೆ

ಶಿವಮೊಗ್ಗ ಜಿಲ್ಲೆಯಲ್ಲಿ ಜೋಡಿ ಕೊಲೆಯಾಗಿದೆ. ತಾಯಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಂಗಾರಮ್ಮ, ಮತ್ತು ಅವರ ಮಗ ಪ್ರವೀಣ್ ಕೊಲೆಯಾದ ದುರ್ವೈವಿಗಳು.

Vijaya Karnataka Web 12 Oct 2020, 1:01 pm
ಸಾಗರ: ತಾಲೂಕಿನ ಕಲ್ಮನೆ ಗ್ರಾಮ ಪಂ ವ್ಯಾಪ್ತಿಯ ಕಸಕಸೆಕೊಡ್ಲುವಿನ ಒಂಟಿ ಮನೆಯಲ್ಲಿ ತಾಯಿ ಹಾಗೂ ಮಗನ ಜೋಡಿ ಕೊಲೆ ಭಾನುವಾರ ಬೆಳಗಿನ ಜಾವ ನಡೆದಿದೆ.
Vijaya Karnataka Web murder


ಅಡಕೆ ಸುಲಿಯುವ ಕೆಲಸ ಮಾಡಿಕೊಂಡಿದ್ದ ಬಂಗಾರಮ್ಮ (65) ಮತ್ತು ಕೃಷಿ ಕೂಲಿ ಕಾರ್ಮಿಕನಾಗಿದ್ದ ಪ್ರವೀಣ್‌(36) ಕೊಲೆಯಾದವರು. ತಾಯಿ ಹಾಗೂ ಮಗನನ್ನು ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಲಾಗಿದೆ. ಕೊಲೆಯಾದ ಸಂದರ್ಭ ಪ್ರವೀಣ್‌ ಪತ್ನಿ ರೋಹಿಣಿ ಹಾಗೂ ಅವರ 10 ತಿಂಗಳ ಮಗಳು ಮನೆಯಲ್ಲಿದ್ದರು.

ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಮನೆಯೊಳಗೆ ಎರಡು ಚಾಕುಗಳೊಂದಿಗೆ ನುಗ್ಗಿದ ದುಷ್ಕರ್ಮಿ ತಮ್ಮ ಮಾನಭಂಗಕ್ಕೆ ಪ್ರಯತ್ನಿಸಿದ್ದಲ್ಲದೆ ನಂತರ ನನ್ನ ಬಾಯಿ, ಕೈಕಾಲುಗಳಿಗೆ ಪಟ್ಟಿ ಕಟ್ಟಿದ್ದಾನೆ. ಆನಂತರ ಪತಿ ಹಾಗೂ ಅತ್ತೆಯವರ ಕೊಲೆ ಮಾಡಿ, ನಾಲ್ಕು ಸಾವಿರ ರೂ. ನಗದು ಹಾಗೂ ಪತಿಯ ಮೊಬೈಲ್‌ ಕದ್ದೊಯ್ದಿದ್ದಾನೆ ಎಂದು ರೋಹಿಣಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಗಾರಮ್ಮ ಅವರ ಪತಿ ನಿಧನರಾಗಿ 15 ವರ್ಷಗಳಾಗಿವೆ. ಕಾಡಿನ ನಡುವೆ ಇರುವ ಒಂಟಿ ಮನೆಯಲ್ಲಿ ಕೃತ್ಯ ನಡೆದಿದೆ. ದುಷ್ಕರ್ಮಿ ಕಾರಿನಲ್ಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಎಸ್‌ಪಿ ಭೇಟಿ ದುಷ್ಕೃತ್ಯ ನಡೆದ ಸ್ಥಳಕ್ಕೆ ಎಸ್‌ಪಿ ಕೆ.ಎಂ.ಶಾಂತರಾಜು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕೊಲೆ ಪ್ರಕರಣದ ಸಂಬಂಧ ಇಲಾಖೆ ತಕ್ಷಣದಿಂದಲೇ ತೀವ್ರ ತನಿಖೆ ನಡೆಸಲಿದೆ. ಇದಕ್ಕಾಗಿ ವಿಶೇಷ ತಂಡದ ರಚನೆ ಮಾಡಲಿದೆ. ಕಳೆದ ತಿಂಗಳು ಕರೂರು ಬಳಿ ನಡೆದ ವೃದ್ಧ ದಂಪತಿ ಕೊಲೆ ಪ್ರಕರಣವನ್ನು ಕೂಡ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ತಂಡ ಒಂದು ತಿಂಗಳಿನಿಂದ ಬ್ಯಾಕೋಡಿನಲ್ಲಿ ಬೀಡು ಬಿಟ್ಟಿದೆ ಎಂದು ಮಾಹಿತಿ ನೀಡಿದರು. ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿದೆ. ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ, ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಕೊಲೆಯಾದ ಬಂಗಾರಮ್ಮ ಅವರ ಸಹೋದರಿ ಚರಕ ಸಂಸ್ಥೆಯ ಭಾಗೀರಥಮ್ಮ ಸೇರಿದಂತೆ ಹಲವರು ಭೇಟಿ ನೀಡಿ ಶೀಘ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ