ಆ್ಯಪ್ನಗರ

‘ಜಾತ್ಯತೀತತೆ ದೇಶದ ದೊಡ್ಡ ಆಸ್ತಿ’

ಧರ್ಮ, ಜಾತಿ, ಕುಲದ ಗುರುತನ್ನು ಮೀರಿ ಮೊದಲು ನಾನು ಭಾರತೀಯ ಎನ್ನುವವರೇ ಜಾತ್ಯತೀತರು. ಅವರಿಂದಲೇ ದೇಶ ಉಳಿದಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್‌.ಸಿಂದ್ಯಾ ಹೇಳಿದರು.

Vijaya Karnataka 12 Aug 2018, 5:00 am
ಶಿವಮೊಗ್ಗ: ಧರ್ಮ, ಜಾತಿ, ಕುಲದ ಗುರುತನ್ನು ಮೀರಿ ಮೊದಲು ನಾನು ಭಾರತೀಯ ಎನ್ನುವವರೇ ಜಾತ್ಯತೀತರು. ಅವರಿಂದಲೇ ದೇಶ ಉಳಿದಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್‌.ಸಿಂದ್ಯಾ ಹೇಳಿದರು.
Vijaya Karnataka Web SMR-11SMG1


ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್‌, ರಾಮಕೃಷ್ಣ ಚಾರಿಟಬಲ್‌ ಟ್ರಸ್ಟ್‌ ಮತ್ತು ಕುವೆಂಪು ಶತಮಾನೋತ್ಸವ ಶಿಕ್ಷ ಣ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ವಿದ್ಯಾರ್ಥಿ-ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣ ಹಾಗೂ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಸವಾಲು ಎದುರಾದರೂ ಭಾರತದ ಪ್ರಜಾಪ್ರಭುತ್ವ ನೆಲೆಗಟ್ಟು ಅಲುಗಾಡದೆ ಗಟ್ಟಿಯಾಗಿದೆ. ಪ್ರಜಾಪ್ರಭುತ್ವ ಎಂಬುದು ಸರಕಾರದ ಒಂದು ಭಾಗವಲ್ಲ. ಅದು ಜೀವನ ಒಂದು ವಿಧಾನ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌರವಗಳಲ್ಲಿ ಇಟ್ಟ ನಂಬಿಕೆಯೂ ಆಗಿದೆ ಎಂದರು.

ಜಾತ್ಯತೀತತೆ ಸಮಾಜ ಹಾಗೂ ದೇಶದ ದೊಡ್ಡ ಆಸ್ತಿ. ಎಲ್ಲರೂ ನಮ್ಮವರು ಎಂದುಕೊಂಡೇ ನಾವು ಬೆಳೆದುಬಂದಿದ್ದೇವೆ. ಹೀಗಾಗಿಯೇ ನಮ್ಮಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಭಾರತೀಯತೆ ಎನ್ನುವುದು ಯಾವುದೇ ಧರ್ಮ, ಜನಾಂಗದ ಸ್ವತ್ತಲ್ಲ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದರು.

ಭಾರತ ಸಾರ್ವಭೌಮ, ಸಮಾಜವಾದ, ಜಾತ್ಯತೀತ ಸರ್ವತಂತ್ರ ಸ್ವತಂತ್ರ ಪ್ರಜಾಪ್ರಭುತ್ವ ಗಣರಾಜ್ಯ. ದೇಶ ಸುತ್ತಿ ಕೋಶ ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಕಣ್ಣು ತೆರೆಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವೂ ಅಡಕಗೊಂಡಿದೆ. ಇದನ್ನು ಮನಗಂಡು ಮುಂದೆ ಸಾಗಬೇಕು. ದೇಶದ ಯುವಜನರಲ್ಲಿ ದೇಶಾಭಿಮಾನ ಕಡಿಮೆಯಾಗಿದೆ ಎಂದೆನಿಸುತ್ತಿಲ್ಲ. ನಮ್ಮ ಪೀಳಿಗೆಗಿಂತ ಇಂದಿನ ಯುವಜನರಲ್ಲಿ ದೇಶಾಭಿಮಾನ ಹೆಚ್ಚಿದೆ . ಇತರೆ ಆಡಳಿತ ಪದ್ಧತಿಗಿಂತ ಪ್ರಜಾಪ್ರಭುತ್ವ ಉತ್ತಮ ಎಂದರು.

ಉತ್ತರ ಕೋರಿಯಾದಲ್ಲಿ ಮಿಲಿಟರಿ ಆಡಳಿತ, ಚೈನಾದಲ್ಲಿ ಕಮ್ಯುನಿಸ್ಟ್‌ ಆಡಳಿತ ಇದೆ. ಅಮೇರಿಕಾ ಹಾಗೂ ಯೂರೋಪ್‌ ದೇಶಗಳಲ್ಲಿ ಪ್ರಜಾಪ್ರಭುತ್ವ ಪಾಲಿಸಿಕೊಂಡು ಬರುತ್ತಿದ್ದರೂ ಭಾರತದ ಪ್ರಜಾಪ್ರಭುತ್ವ ವಿಶಿಷ್ಟವಾಗಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ದೇಶವನ್ನು ಒಂದುಗೂಡಿಸಿದ ಕೀರ್ತಿ ಮಹಾತ್ಮಾಗಾಂಧೀಜಿ ಹಾಗೂ ಸರ್ದಾರ್‌ ವಲ್ಲಭಾಬಾಯ್‌ ಪಟೇಲ್‌ಗೆ ಸಲ್ಲುತ್ತದೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನ ಎಂಬ ತಳಪಾಯ ಹಾಕಿಕೊಟ್ಟಿದ್ದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು. ಇವರನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದರು. ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಮಾದೇಶ್‌ ಹೆಗ್ಡೆ, ಕಾಲೇಜು ಪ್ರಾಂಶುಪಾಲ ಮಧು, ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ನಿರ್ದೇಶಕ ಕೆ.ಸಿ.ಬಸವರಾಜ್‌ ಮತ್ತಿತರರು ಇದ್ದರು.


ಪ್ರಪಂಚದಲ್ಲೇ ಅತಿದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು ಪ್ರಜಾತಂತ್ರ, ಗಣತಂತ್ರದ ಪ್ರಯೋಗವನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದಕ್ಕಾಗಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌, ಮಹಾತ್ಮಾಗಾಂಧೀಜಿ , ಸರ್ದಾರ್‌ ವಲ್ಲಭಾಬಾಯ್‌ ಪಟೇಲ್‌ ಅವರನ್ನು ಸದಾ ಸ್ಮರಿಸಬೇಕು. ಸಂವಿಧಾನ ಪ್ರಸ್ತಾವನೆಯಲ್ಲಿ ದೇಶದ ಜನಜೀವನದ ಆಶೋತ್ತರಗಳು ಹುದುಗಿವೆ. ಧರ್ಮ ನಿರಪೇಕ್ಷತೆ ದೇಶದ ನೀತಿಯಾಗಿದ್ದರೆ ಸಮಾಜವಾದವು ಧ್ಯೇಯವಾಗಿದೆ.

-ಪಿ.ಜಿ.ಆರ್‌.ಸಿಂದ್ಯಾ, ಮಾಜಿ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ