ಆ್ಯಪ್ನಗರ

ಶಿವಮೊಗ್ಗ ಜಿಲ್ಲೆಯಲ್ಲಿ ತೃಪ್ತಿಕರವಾಗಿಲ್ಲ: ಹಸಬಿ

ಜಿಲ್ಲೆಯ ಗೋಡಾನ್‌ಗಳಲ್ಲಿ ದಾಸ್ತಾನು ಇರುವ ಆಹಾರ ಧಾನ್ಯಗಳ ಸೂಕ್ತ ಸಮಯಕ್ಕೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಆಹಾರ ಆಯೋಗದ ಸದಸ್ಯ ಡಿ.ಜಿ.ಹಸಬಿ ಸೂಚಿಸಿದರು.

Vijaya Karnataka 16 Dec 2018, 5:00 am
ಶಿವಮೊಗ್ಗ: ಜಿಲ್ಲೆಯ ಗೋಡಾನ್‌ಗಳಲ್ಲಿ ದಾಸ್ತಾನು ಇರುವ ಆಹಾರ ಧಾನ್ಯಗಳ ಸೂಕ್ತ ಸಮಯಕ್ಕೆ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಆಹಾರ ಆಯೋಗದ ಸದಸ್ಯ ಡಿ.ಜಿ.ಹಸಬಿ ಸೂಚಿಸಿದರು.
Vijaya Karnataka Web SMR-15ganesh2


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ತಾಲೂಕುಗಳ ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಬಿಸಿಊಟ ಯೋಜನೆ , ಆಹಾರ ಧಾನ್ಯ ಸಗಟು, ನ್ಯಾಯಬೆಲೆ ಅಂಗಡಿ, ತೀವ್ರ ಅಪೌಷ್ಠಿಕ ಮಕ್ಕಳ ಉಪಚಾರ ಘಟಕ, ವಿದ್ಯಾರ್ಥಿ ನಿಲಯ ಹಾಗೂ ಸರಕಾರಿ ಆಸ್ಪತ್ರೆ ಮತ್ತು ಆಸ್ಪತ್ರೆ ಆವರಣದಲ್ಲಿರುವ ಕ್ಯಾಂಟೀನ್‌ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿದ ನಂತರ ಕಂಡು ಬಂದ ಅಂಶಗಳು ತೃಪ್ತಿದಾಯಕವಾಗಿಲ್ಲ ಎಂದರು.

ಇಲ್ಲಿನ ಜಿಲ್ಲಾಧಿಕಾರಿಗಳು ದಕ್ಷ ಆಡಳಿತಗಾರರಾಗಿದ್ದು, ಅವರ ಮಾಗದರ್ಶನದಲ್ಲಿ ಇಲಾಖೆಗಳ ಅಧಿಕಾರಿಗಳು ಇನ್ನೂ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕು. ಆಹಾರ ಧಾನ್ಯಗಳ ಸೂಕ್ತ ಸಮಯಕ್ಕೆ ವಿಲೇವಾರಿ ಮಾಡಬೇಕು. ಗೋಡಾನ್‌ಗಳ ಗುಣಮಟ್ಟ ಹೆಚ್ಚಿಸಿ, ಯಾವುದೇ ಕಾರಣಕ್ಕೂ ಧಾನ್ಯಗಳಿಗೆ ಹುಳು ಹಿಡಿದು ನಷ್ಟವುಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾಯಬೆಲೆ ಅಂಗಡಿಗಳ ಕುರಿತು ಯಾವುದೇ ದೂರು ದಾಖಲಾಗಿಲ್ಲ, ಆದರೆ, ಮಾಧ್ಯಮಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಅವ್ಯವಹಾರಗಳ ಕುರಿತು ದೂರು ಸುದ್ದಿಯಾಗಿದೆ. ಇದರ ಬಗ್ಗೆ ಗಮನ ಹರಿಸಬೇಕು. ಜಾಗೃತಿ ಸಮಿತಿ ಸದಸ್ಯರ ಸಭೆ, ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತಿ ಸಮಿತಿ ಸದಸ್ಯರ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಬೇಕು. ಆಹಾರ ಅದಾಲತ್‌ ನಡೆಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಆಯೋಗದ ಸದಸ್ಯೆ ಮಂಜುಳಬಾಯಿ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಹಾಗು ಆಶಾ ಕಾರ್ಯಕರ್ತರು ಮಹಿಳೆಯರು ಹಾಗೂ ಮಕ್ಕಳ ಅಪೌಷ್ಠಿಕತೆಯನ್ನು ಗುರುತಿಸಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು. ಇಲ್ಲಿ 14 ದಿನ ಅಡ್ಮಿಟ್‌ ಆಗಬೇಕಿರುವುದರಿಂದ ನರೇಗಾ ಯೋಜನೆಯಡಿ ಒಂದು ದಿನಕ್ಕೆ 249 ರೂ.ಗಳ ವೇತನ ಹಾಗೂ ಬಾಲ ಸಂಜೀವಿನಿ ಯೋಜನೆಯಡಿ 2 ಸಾವಿರ ರೂ.ಗಳನ್ನು ನೀಡಲಾಗುವುದು. ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಆಯೋಗದ ಸದಸ್ಯ ಬಿ.ಎ.ಮೊಹಮದ್‌ ಆಲಿ ಮಾತಾನಾಡಿ, ಹಾಸ್ಟೆಲ್‌ಗಳಲ್ಲಿ ಊಟ ವಸತಿ ಸಮಪರ್ಕವಾಗಿದ್ದರೂ ಸಹ ಹಾಸ್ಟೆಲ್‌ನ ಸಾಮರ್ಥ್ಯ‌ಕ್ಕಿಂತಲೂ ಜಾಸ್ತಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದು, ವಿದ್ಯಾರ್ಥಿಗಳ ಆಹಾರದ ಕೊರತೆ ಕಂಡುಬಂದಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಮಾತನಾಡಿ, ಮಧ್ಯಾಂತರದಲ್ಲಿ ಕಾಲೇಜು ಸೀಟು ಪಡೆಯುತ್ತಿರುವ ಬಿ.ಎಡ್‌ ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ ಎದುರಾಗಿದ್ದು, ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಅವರನ್ನು ಕೆಲವು ಹಾಸ್ಟೆಲ್‌ಗಳಿಗೆ ಸೇರಿಸಬೇಕಾಗುತ್ತದೆ. ಅಂತಹ ಹಾಸ್ಟೆಲ್‌ಗಳಿಗೆ ಊಟಕ್ಕಾಗಿ ಹೆಚ್ಚಿನ ಅನುದಾನ ನೀಡಲು ಸಲಹೆ ನೀಡಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಅನುರಾಧ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ