ಆ್ಯಪ್ನಗರ

ಮಳೆಗಾಲಕ್ಕೆ ಕೈ ಹಿಡಿಯದ ಕಾಲುಸಂಕ

ತಾಲೂಕಿನ ಗ್ರಾಮಾಂತರ ನಿವಾಸಿಗಳು ಮಳೆಗಾಲದಲ್ಲಿ ಅವಲಂಬಿಸಿದ್ದ ಕಾಲುಸಂಕದ ಬದಲು ಸರಕಾರದ ಕಾಲುಸಂಕ ನಿರ್ಮಾಣ ಯೋಜನೆ ಈ ವರ್ಷದ ಮಳೆಗಾದಲ್ಲಿ ಬಳಕೆಯಾಗಲು ಸಾಧ್ಯವಿಲ್ಲದ ಸ್ಥಿತಿ ಇದೆ.

Vijaya Karnataka 17 Jun 2019, 5:00 am
Vijaya Karnataka Web SMR-15sgr14

ಜಿ.ಯೋಗೀಶ
ಸಾಗರ : ತಾಲೂಕಿನ ಗ್ರಾಮಾಂತರ ನಿವಾಸಿಗಳು ಮಳೆಗಾಲದಲ್ಲಿ ಅವಲಂಬಿಸಿದ್ದ ಕಾಲುಸಂಕದ ಬದಲು ಸರಕಾರದ ಕಾಲುಸಂಕ ನಿರ್ಮಾಣ ಯೋಜನೆ ಈ ವರ್ಷದ ಮಳೆಗಾದಲ್ಲಿ ಬಳಕೆಯಾಗಲು ಸಾಧ್ಯವಿಲ್ಲದ ಸ್ಥಿತಿ ಇದೆ.

ತಾಲೂಕಿನ ವ್ಯಾಪ್ತಿ ಒಟ್ಟು 29 ಕಾಲುಸಂಕಗಳ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಸಿದ್ಧವಾಗಿದೆ. ಆದರೆ ಅವುಗಳಲ್ಲಿ ಕೇವಲ 7 ಕಾಲುಸಂಕಗಳನ್ನು ಮಾತ್ರ ಸ್ಪ್ಯಾಬ್‌ ಹಾಕಿಡಲಾಗಿದೆ. ಪೂರಕ ಕಾರ‍್ಯವನ್ನು ತ್ವರಿತವಾಗಿ ಮುಗಿಸಿದರೆ ಒಂದೆರಡು ಕಾಲುಸಂಕ ಮಾತ್ರ ಈ ಮಳೆಗಾಲದಲ್ಲಿ ಗ್ರಾಮೀಣರ ನೆರವಿಗೆ ಬರಲಿವೆ.

ಸಿದ್ಧವಾದ 7 ಕಾಲುಸಂಕಗಳು:

ಹೊಸೂರು ಗ್ರಾಮ ಪಂಚಾಯಿತಿ ಗದ್ದೆಮನೆ ಬಳಿ, ಎಸ್‌.ಎಸ್‌.ಭೋಗ್‌ ಗ್ರಾಮ ಪಂಚಾಯಿತಿ ಕಂಚಿಕೇರಿಯಿಂದ ಇಕ್ಕಿಬೀಳು ಸಮೀಪ ಇರುವ ಹಳ್ಳಕ್ಕೆ, ಹೊಸೂರು ಗ್ರಾಮ ಪಂಚಾಯಿತಿಯ ಜಂಬೇಕೊಪ್ಪ ಶಿವಗಂಗೆ ಕೇರಿ, ಮಾಲ್ವೆ ಗ್ರಾಮ ಪಂಚಾಯಿತಿಯ ಮಿಟ್ಲಿಕೊಪ ಹಾನಂಬಿ ಹೊಳೆಯಲ್ಲಿ, ಭೀಮನಕೋಣೆ ಗ್ರಾ.ಪಂ ಎಣ್ಣೆಹೊಳೆಗೆ, ಯಡಜಿಗಳೇಮನೆ ಗ್ರಾ.ಪಂನ ಜಾಜಿಮನೆ ಬಳಿ, ಭೀಮನಕೋಣೆಯ ಹೆನಗೆರೆ ಬಳಿ ಕಾಲುಸಂಕಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಇನ್ನೂ ಟೆಂಡರ್‌ ಆಗಿಲ್ಲ:

ತುಮರಿ ಗ್ರಾಮ ಪಂಚಾಯಿತಿ ಹಿರೇಕಳೂರು ಗೌರನಾಯ್ಕ ಮನೆ ಹತ್ತಿರ ಹಾಗೂ ಕೆಂಜಿಗೆಜಡ್ಡು ಹತ್ತಿರ, ಚÜನ್ನಗೊಂಡ ಗ್ರಾಮ ಪಂಚಾಯಿತಿ ಕಟ್ಟಿನಕಾರು-ಪಡಬೀಡು ಸಂಕಬಾಗಿಲು ಹಳ್ಳಕ್ಕೆ, ಕುದುರೂರು ಗ್ರಾಮ ಪಂಚಾಯಿತಿ ಮಾವಿನಕೇವಿ ಹತ್ತಿರ ಇರುವ ಹಳ್ಳಕ್ಕೆ, ಕುದುರೂರು ಗ್ರಾಮ ಪಂಚಾಯಿತಿ ಸುಳುಮನೆ ಬೊಬ್ಬಿಗೆ ಬಾಲನಗದ್ದೆ ಕಿರುಸೇತುವೆ ಮತ್ತು ಹಾಳಸಸಿಯಿಂದ ಹೊಸಗದ್ದೆ ದಿಗಟೆಕೊಪ್ಪ ಹತ್ತಿರ ಇರುವ ಹಳ್ಳಕ್ಕೆ ಹಾಗೂ ಹೊಸೂರು ಗ್ರಾ.ಪಂನ ನಂದಿಹಳ್ಳಕ್ಕೆ ಇನ್ನೂ ಮುಂತಾದ ಕಾಲುಸಂಕಗಳ ನಿರ್ಮಾಣ ಸಂಬಂಧ ಇದುವರೆಗೂ ಟೆಂಡರ್‌ ಪ್ರಕ್ರಿಯೆ ಆಗಿಲ್ಲ.

ಅಂದಾಜು ಪಟ್ಟಿ ಸಲ್ಲಿಸಿಲ್ಲ:

ಭಾನುಕುಳಿ ಗ್ರಾಮ ಪಂಚಾಯಿತಿ ನಾಗವಳ್ಳಿ ಗ್ರಾಮದ ಗಂಜಿಗದ್ದೆ ಹತ್ತಿರದ ಹಳ್ಳಕ್ಕೆ, ಕುದುರೂರು ಗ್ರಾಮ ಸುಳುಮನೆ ಬೊಬ್ಬಿಗೆ ಬಾಲನಗದ್ದೆ ಕಿರುಸೇತುವೆ ನಿರ್ಮಾಣ, ಭಾನುಕುಳಿ ವ್ಯಾಪ್ತಿ ನೆಲಹರಿ ಗ್ರಾಮದ ಬಚ್ಚೋಡಿ ಹತ್ತಿರ ಸರಳ ಹೊಳೆಗೆ ಕಿರುಸೇತುವೆ ನಿರ್ಮಾಣ, ಸೈದೂರು ಗ್ರಾಮ ಪಂಚಾಯಿತಿ ಸೈದೂರು-ಚೂಣಿಕೊಪ್ಪ ಗ್ರಾಮದ ಅತ್ತಿಸಾಲು ದ್ಯಾವಪ್ಪನವರ ಜಮೀನು ಹತ್ತಿರ ಕಾಲುಸಂಕ ಮುಂತಾದವುಗಳ ನಿರ್ಮಾಣ ಸಂಬಂಧ ಇನ್ನೂ ಇಲಾಖೆ ಅಂದಾಜು ಪಟ್ಟಿ ಸಲ್ಲಿಸಿಲ್ಲ. ಹೆಚ್ಚುವರಿಯಾಗಿ 9 ಕಾಮಗಾರಿಗಳಿಗೆ ಅವಕಾಶ ಸಿಕ್ಕಿದ್ದು, ಅವುಗಳ ಸಂಬಧ ಸಹ ಅಂದಾಜು ಪಟ್ಟಿ ಸಲ್ಲಿಸಬೇಕಾಗಿದೆ. ಖಂಡಿಕಾ ಗ್ರಾಮ ಪಂಚಾಯಿತಿ ಕುಗ್ವೆ ಗ್ರಾಮದ ಕಲ್ಲಿನ ಬೈರಪ್ಪರವರ ಜಮೀನು ಹತ್ತಿರ, ಕೈತೋಟ ಗ್ರಾಮದ ಶಂಕರರಾವ್‌ ಜಮೀನು ಹತ್ತಿರ, ಹಲಸಿನಘಟ್ಟ ಹಳ್ಳಕ್ಕೆ, ಮತ್ತು ಮಾರನಕುಳಿ ಸೊಸೈಟಿ ಹತ್ತಿರ ಇರುವ ಹಳ್ಳಕ್ಕೆ, ಸೈದೂರು ಗ್ರಾಮ ಪಂಚಾಯಿತಿ ಸೈದೂರು-ಚೂಣಿಕೊಪ್ಪ ಗ್ರಾಮದ ಅತ್ತಿಸಾಲು ದ್ಯಾವಪ್ಪನವರ ಜಮೀನು ಹತ್ತಿರ, ಕಣಸೆ ಗ್ರಾಮದ ಈರಮ್ಮ ಅವರ ಜಮೀನು ಹತ್ತಿರ, ಸುಳ್ಳೂರು ಗ್ರಾಮದ ದತ್ತಾತ್ರೇಯ ಜಮೀನು ಬಳಿ, ಶಿರವಂತೆ ಗ್ರಾಮ ಪಂಚಾಯಿತಿ ನವಿಲೆಮನೆ ಹತ್ತಿರ, ಮರತ್ತೂರು ಗ್ರಾಮ ಪಂಚಾಯಿತಿ ಗಡ್ಡದ ಬಂಗಾರಪ್ಪ ಅವರ ಜಮೀನು ಹತ್ತಿರ ಹಾನಂಬಿ ಹಳ್ಳಕ್ಕೆ ಕಾಲುಸಂಕ ನಿರ್ಮಾಣ ಕಾಮಗಾರಿಗಳಿಗೆ ಇನ್ನೂ ಅಂದಾಜು ಪಟ್ಟಿ ಸಲ್ಲಿಕೆಯಾಗಬೇಕಿದೆ.

ಅತಿ ಉದ್ದದ ಕಾಲುಸಂಕ

ತಾಲೂಕಿನಲ್ಲಿ ಬಹುತೇಕ ಕಾಲುಸಂಕಗಳು 1.5 ಮೀಟರ್‌ ನಿಂದ 3 ಮೀಟರ್‌ ಅಗಲ ಹಾಗೂ ಮೂರು ಮೀಟರ್‌ನಿಂದ 12 ಮೀಟರ್‌ ವರೆಗೆ ಉದ್ದವಾಗಿರಲಿವೆ. ಬಚ್ಚೋಡಿಯಲ್ಲಿ ಸರಳ ಹೊಳೆಗೆ ನಿರ್ಮಾಣವಾಗಲಿರುವ ಕಾಲುಸಂಕವು 3 ಮೀಟರ್‌ ಅಗಲ, 53 ಮೀಟರ್‌ ಉದ್ದವಿರಲಿದೆ. ಇದು ತಾಲೂಕಿನ ಅತಿ ದೊಡ್ಡ ಕಾಲುಸಂಕ ವಾಗಲಿದೆ. ಎಸ್‌.ಎಸ್‌.ಭೋಗ್‌ ಗ್ರಾಮ ಪಂಚಾಯಿತಿ ಕಂಚಿಕೇರಿಯಿಂದ ಇಕ್ಕಿಬೀಳು ಸಮೀಪ ಇರುವ ಹಳ್ಳಕ್ಕೆ ನಿರ್ಮಾಣವಾದ ಕಾಲುಸಂಕ ವಿದ್ಯಾರ್ಥಿಗಳಿಗೆ ಪ್ರತಿದಿನ 9 ಕಿ.ಮೀ. ಹೆಚ್ಚುವರಿ ಓಡಾಟ ಕಡಿತಗೊಳಿಸಿದೆ. ಈ ಕಾಲುಸಂಕದ ನಿರ್ಮಾಣ ಸಂಪೂರ್ಣ ಮುಗಿದಿದೆ. ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸುಮಾರು 12 ಕಾಲುಸಂಕಗಳ ಬೇಡಿಕೆ ಇತ್ತು. ಆದರೆ, ಹಿರೆಕಳೂರು, ಕೆಂಜಿಗೆಜಡ್ಡು ಕಡೆಗಳಲ್ಲಿ 2ಕಾಲುಸಂಕಕ್ಕೆ ಮಾತ್ರ ಟೆಂಡರ್‌ ಕರೆಯಲಾಗಿದೆ. ಭಾರಂಗಿ ಹೋಬಳಿ ವ್ಯಾಪ್ತಿ ಸಹ ಮತ್ತಷ್ಟು ಕಾಲುಸಂಕ ಅಗತ್ಯವಿದೆ. ಈ ಬಗ್ಗೆ ಜನಪ್ರತಿನಿಧಿಗಳು ಕೆಲಸಮಾಡಬೇಕಾಗಿದೆ. ಗ್ರಾಮಾಂತರದ ಜೀವನ ಪದ್ಧತಿಯಂತೆ ಈ ಹಿಂದೆ ಸಹ ಮರದ ಕಾಲುಸಂಕಗಳು ಬಹುತೇಕ ಖಾಸಗೀ ಸ್ವತ್ತಿನ ಜಾಗದಲ್ಲಿರುತ್ತಿದ್ದವು. ಸ್ವತ್ತಿನ ಮಾಲಿಕರು ಸಹ ಜನಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಆದರೆ, ಕೆಲವು ಕಡೆಗಳಲ್ಲಿ ಈಗ ತೋಟದ ಒಂದು ಬಣ್ಣು ಬಿಟ್ಟುಕೊಡಬೇಕಾಗಿದೆ.

----------
ತಾಲೂಕಿನಲ್ಲಿ 11.70 ಕೋಟಿ ರೂ. ವೆಚ್ಚದಲ್ಲಿ 29 ಕಾಲುಸಂಕಗಳ ನಿರ್ಮಾಣಕ್ಕೆ ಮಂಜೂರು ದೊರೆತಿದೆ. ಈಗಾಗಲೆ 7 ಕಾಲುಸಂಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಇನ್ನಷ್ಟು ಕಾಲುಸಂಕ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕ್ಷೇತ್ರಕ್ಕೆ ಒಟ್ಟು ಸುಮಾರು 62ಕ್ಕೂ ಹೆಚ್ಚು ಕಾಲುಸಂಕ ಅಗತ್ಯವಾಗಿವೆ.

- ಎಚ್‌.ಹಾಲಪ್ಪ, ಶಾಸಕರು

-----------

ಭಾನ್ಕುಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಲುಸಂಕಗಳ ಅಗತ್ಯವಿದೆ. ಭಾರಂಗಿ ಹೋಬಳಿಯಲ್ಲಿ ಕಣಪಗಾರು, ನೆಲಹರಿ ಬಚ್ಚೋಡಿ, ನಾಗೊಳ್ಳಿ ಗುಳ್ಳೋಡಿ, ಗಂಜಿಗದ್ದೆಯಲ್ಲಿ ಒಟ್ಟು 4 ಕಾಲುಸಂಕ ನಿರ್ಮಾಣವಾಗುತ್ತಿದ್ದು, ಸರಳ ಹೊಳೆಗೆ 3 ಕಡೆ ನಿರ್ಮಾಣವಾಗುತ್ತಿವೆ. ಸರಳ ಹೊಳೆಗೆ ನೆಲಹರಿ ಗ್ರಾಮದವರು ವರ್ಷಂಪ್ರತಿ ಕಾಲುಸಂಕ ನಿರ್ಮಿಸಿಕೊಳ್ಳುತ್ತಿದ್ದು, ಬರುವ ವರ್ಷದ ಮಳೆಗಾಲಕ್ಕಾದರೂ ಇಲ್ಲಿನ ಜನರ ಸಮಸ್ಯೆ ಪರಿಹಾರವಾಗುವ ಭರವಸೆ ಇದೆ.

- ರಾಜಶೇಖರ ಗಾಳಿಪುರ, ಜಿಪಂ ಸದಸ್ಯ, ತಾಳಗುಪ್ಪ ಕ್ಷೇತ್ರ.

----------

ಈ ಭಾಗದ ಪ್ರಾಕೃತಿಕ ವಾತಾವರಣಕ್ಕೆ ಸೂಕ್ತ ವಿನ್ಯಾಸ, ವಿಧಾನದ ಕಾಲುಸಂಕ ನಿರ್ಮಾಣ ವಿಚಾರದಲ್ಲಿ ಎದುರಾದ ಗೊಂದಲ ಬಗೆಹರಿಸಿಕೊಂಡಿದ್ದೇವೆ. ಈ ಕಾರಣಕ್ಕೂ ಒಂದಷ್ಟು ವಿಳಂಬವಾಗಿದೆ. ಇಲಾಖೆ ಪ್ರಧಾನ ಕಾರ‍್ಯದರ್ಶಿ ಕೃಷ್ಣ ರೆಡ್ಡಿ, ಸಚಿವರಾದ ಎಚ್‌.ಡಿ.ರೇವಣ್ಣ ಅವರು ಸ್ಥಳೀಯವಾಗಿ ಸೂಕ್ತ ವಿನ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ಮಣ್ಣು ಗಮನಿಸಿ ಕಾಲುಸಂಕ ನಿರ್ಮಿಸುತ್ತಿದ್ದು, ಭವಿಷ್ಯದಲ್ಲಿ ಪ್ರಯೋಜಕಾರಿಯಾಗಲಿದೆ.

- ಕೃಷ್ಣಮೂರ್ತಿ ಆಚಾರ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಸಾಗರ

----------

ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿಯ ಹೊಸೂರು ಗ್ರಾಮದ ಬಸ್‌ ನಿಲ್ದಾಣ ಎದುರಿನ ಗದ್ದೆಮನೆಗೆ ಹೋಗುವ ರಸ್ತೆಗೆ ಹಾಗೂ ಹಳ್ಳಕ್ಕೆ ಕಾಲುಸಂಕ ನಿರ್ಮಾಣವಾಗಿದ್ದು ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಸುಮಾರು 20 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ.

- ಗುರುನಂದನ, ಹೊಸೂರು

------------

ಯಡಜಿಗಳಮನೆ ಗ್ರಾ.ಪಂ ವ್ಯಾಪ್ತಿಯ ಜಾಜಿಮನೆಯಲ್ಲಿ ನಮ್ಮ ಸ್ವಂತ ಜಾಗದಲ್ಲಿ ಸಂಕ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ. ತೋಟದ ನಡುವೆಯೇ ಸಂಚಾರ ಅನಿವಾರ‍್ಯವಾಗಿದ್ದು, ಅಕ್ಕಪಕ್ಕದ ಅಡಕೆ ಮರಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕಾಗಿ ದ್ವಿಚಕ್ರವಾಹನ ಸಂಚಾರಕ್ಕೆ ಅವಕಾಶವಿಲ್ಲ.

- ಜಾಜಿ ಪ್ರಶಾಂತ,




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ