ಆ್ಯಪ್ನಗರ

ಜನ ಬಿಜೆಪಿ ನಂಬಲ್ಲ, ಮಧು ಬಂಗಾರಪ್ಪ ಗೆಲ್ತಾರೆ

ಕಳೆದ ಐದು ವರ್ಷದಿಂದ ಬಿಜೆಪಿ ದೇಶವನ್ನು ಸುಳ್ಳೇಳುವುದರಲ್ಲೇ ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯ ಹುನ್ನಾರ ಏನು ಎಂಬುದು ಜನರಿಗೆ ಅರ್ಥವಾಗಿದೆ. ಈ ಬಾರಿ ಮಧು ಗೆಲ್ತಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 22 Mar 2019, 5:00 am
ಶಿವಮೊಗ್ಗ : ಕಳೆದ ಐದು ವರ್ಷದಿಂದ ಬಿಜೆಪಿ ದೇಶವನ್ನು ಸುಳ್ಳೇಳುವುದರಲ್ಲೇ ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯ ಹುನ್ನಾರ ಏನು ಎಂಬುದು ಜನರಿಗೆ ಅರ್ಥವಾಗಿದೆ. ಈ ಬಾರಿ ಮಧು ಗೆಲ್ತಾರೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Vijaya Karnataka Web SMR-21GANESH1


ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಚುನಾವಣೆಯನ್ನು ಮಧುಬಂಗಾರಪ್ಪ ಗೆಲ್ಲಲೇಬೇಕಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಸಣ್ಣಪುಟ್ಟ ಒಡಕು ಬಿಟ್ಟು ಒಗ್ಗಟ್ಟಾಗಿ ಈ ಚುನಾವಣೆ ಎದುರಿಸಬೇಕು. ಮೋದಿ ಸರಕಾರದ ವಿಫಲತೆ, ರಾಜ್ಯ ಸಮ್ಮಿಶ್ರ ಸರಕಾರದ ಸಾಧನೆಗಳೇನು ಎಂಬುದು ಮತದಾರರಿಗೆ ಗೊತ್ತಾಗಬೇಕು. ಕಾರ್ಯಕರ್ತರು ಈ ನಿಟ್ಟಿನಲ್ಲಿ ಪ್ರಚಾರ ಮಾಡಬೇಕು ಎಂದರು.

ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಕಳೆದ ಬಾರಿ ಕಾಲಾವಕಾಶ ಕಡಿಮೆ ಇತ್ತು. ಈ ಬಾರಿ ಸಮಯವಿದೆ. ಈಗಾಗಲೇ ಚುನಾವಣೆ ಪ್ರಚಾರದಲ್ಲಿ ನಾವಿದ್ದೇವೆ. ಕಳೆದ ಉಪ ಚುನಾವಣೆಯಲ್ಲಿ ಪಡೆದ ಮೂರುವರೆ ಲಕ್ಷಕ್ಕೂ ಹೆಚ್ಚಿನ ಮತ ಪಡೆಯುವ ನಿಟ್ಟಿನಲ್ಲಿ ಗಮನ ಹರಿಸಿದ್ದೇನೆ. ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡರು, ಮುಖ್ಯಮಂತ್ರಿಗಳು, ಕಾಂಗ್ರೆಸ್‌ ಮುಖಂಡರು ಎಲ್ಲರೂ ತಮ್ಮ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಎರಡೂ ಪಕ್ಷದ ಜವಾಬ್ದಾರಿ ನಮ್ಮ ಮೇಲಿದೆ. ಈ ಬಾರಿ ಅತ್ಯಂತ ಹೆಚ್ಚಿನ ಅಂತರದ ಮತಗಳಿಂದ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್‌ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ವಹಿಸುತ್ತಿದ್ದು, ಅವರ ಇರುವಿಕೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತರುತ್ತದೆ. ಸಣ್ಣಪುಟ್ಟ ತೊಂದರೆಗಳಿದ್ದರೆ ನಿವಾರಣೆಯಾಗುತ್ತದೆ. ಹಾಗಾಗಿಯೇ ಅವರ ಬರುವಿಕೆ ಮತ್ತು ಇರುವಿಕೆ ನನ್ನ ಗೆಲುವಿಗೆ ಅತ್ಯಂತ ಸಹಕಾರಿಯಾಗಲಿದೆ. ಅವರ ಜತೆಗೆ ರಾಜ್ಯದ ಎರಡೂ ಪಕ್ಷದ ನಾಯಕರು ಬರುತ್ತಾರೆ. ಈ ಬಾರಿ ಗೆಲುವು ಖಚಿತ ಎಂದರು.

ಚುನಾವಣೆ ಸೋತಿದೇನೆ ಎಂದು ನಾನು ಸುಮ್ಮನೆ ಕೂತಿಲ್ಲ. ರಾಜ್ಯದಲ್ಲಿ ಮೈತ್ರಿ ಸರಕಾರ ಇರುವುದರಿಂದ ಸೊರಬ ಕ್ಷೇತ್ರಕ್ಕೆ ಅನೇಕ ಅನುದಾನಗಳನ್ನು ತಂದಿದ್ದೇನೆ. ಸುಮಾರು 1145 ಕೋಟಿ ವಿಶೇಷ ಅನುದಾನ ತಂದು ನೀರಾವರಿ ಯೋಜನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗೆ ಶ್ರಮ ಹಾಕಿದ್ದೇನೆ. ಇದೆಲ್ಲವೂ ಮತದಾರರಿಗೆ ಗೊತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಮಾತನಾಡಿ, ಚುನಾವಣೆಯಲ್ಲಿ ಮಧು ಅವರ ಗೆಲುವಿಗೆ ಪಣ ತೊಟ್ಟಿದ್ದು, ಈಗಾಗಲೇ ಬೂತ್‌ ಮಟ್ಟದಲ್ಲಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ತರಬೇತಿ ಶಿಬಿರ ಆಯೋಜಿಸಲಾಗಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಹೊಸ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌, ಎಸ್‌.ಪಿ.ಶೇಷಾದ್ರಿ, ಅನಿತಾ ಕುಮಾರಿ ಮತ್ತಿತರರು ಇದ್ದರು.

ಎಲ್ಲೂ ಗೊಂದಲ ಇಲ್ಲ
ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರುಗಳ ಮಧ್ಯೆ ಒಂದಿಷ್ಟು ಚಿಕ್ಕಪುಟ್ಟ ಸಮಸ್ಯೆಗಳಿವೆ ಎಂಬುದು ನಿಜ. ಆದರೆ, ಅಲ್ಲಿ ಈಗಾಗಲೇ ನಮ್ಮ ನಾಯಕರು ಸೇರಿದಂತೆ ನಾನೂ ಕೂಡ ಮಾತನಾಡಿದ್ದೇನೆ. ಎರಡು ಪಕ್ಷಗಳ ಮುಖಂಡರು ಒಟ್ಟಾಗಿ ಹೋಗುವ ಭರವಸೆ ನೀಡಿದ್ದಾರೆ. ಎಲ್ಲ ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಬೂತ್‌ ಮಟ್ಟದಿಂದ ಹಗಲು ರಾತ್ರಿ ಕೆಲಸ ಮಾಡುತ್ತೇವೆ. ಬಿಜೆಪಿಯನ್ನು ಈ ಬಾರಿ ಸೋಲಿಸಿಯೇ ತೀರುತ್ತೇವೆ.

-ಮಧು ಬಂಗಾರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ