ಆ್ಯಪ್ನಗರ

ಮಾನಸಿಕ ಅಸ್ವಸ್ಥನಿಗೆ ಪೊಲೀಸ್‌ ಆರೈಕೆ

ಪೊಲೀಸರೆಂದರೆ ದರ್ಪ, ಶೋಷಣೆ ಮುಂತಾದ ಚಿತ್ರಣಗಳು ಜನಸಾಮಾನ್ಯರಿಗೆ ಕಣ್ಣಮುಂದೆ ಬರುವುದಾದರೂ ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಗೆ ಆರೈಕೆ ಮಾಡಿ, ತಿಳಿವಳಿಕೆ ಹೇಳುವ ಮೂಲಕ ಮಾನವೀಯತೆ ತೋರಿದ ಪೊಲೀಸ್‌ ದಫೇದಾರ್‌ವೊಬ್ಬರ ನಿಲುವು ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Vijaya Karnataka 27 Apr 2019, 5:00 am
ಸಾಗರ: ಪೊಲೀಸರೆಂದರೆ ದರ್ಪ, ಶೋಷಣೆ ಮುಂತಾದ ಚಿತ್ರಣಗಳು ಜನಸಾಮಾನ್ಯರಿಗೆ ಕಣ್ಣಮುಂದೆ ಬರುವುದಾದರೂ ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಗೆ ಆರೈಕೆ ಮಾಡಿ, ತಿಳಿವಳಿಕೆ ಹೇಳುವ ಮೂಲಕ ಮಾನವೀಯತೆ ತೋರಿದ ಪೊಲೀಸ್‌ ದಫೇದಾರ್‌ವೊಬ್ಬರ ನಿಲುವು ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
Vijaya Karnataka Web smr-25sgr8


ನಗರದ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಮೈ ಮೇಲೆ ಬಟ್ಟೆ ಇಲ್ಲದೆ ಕಳೆದೊಂದು ತಿಂಗಳಿಂದ ಓಡಾಡಿಕೊಂಡಿದ್ದ. ಇದನ್ನು ಗಮನಿಸಿದ ನಗರ ಠಾಣೆ ಪಿಸಿಆರ್‌ ವಾಹನದ ದಫೇದಾರ್‌ ನರಸಿಂಹ ಅವರು ಆತನಿಗೆ ಹೊಸ ಬಟ್ಟೆಗಳನ್ನು ಕೊಡಿಸಿದ್ದಾರೆ. ಆತ ಅದನ್ನು ಉಡಲು ನಿರಾಕರಿಸಿದಾಗ ಸ್ವತಃ ತಾವೇ ಆತನಿಗೆ ಬುದ್ಧಿ ಹೇಳಿ ತೊಡಿಸಿದ್ದಾರೆ. ಊಟ ಮಾಡಬೇಕು ಹಣ ಕೊಡಿ ಎಂದಾಗ ಹೋಟೆಲ್‌ನಿಂದ ಊಟ ತರಿಸಿ ಕೊಡಿಸಿದ್ದಾರೆ. ದಿನಾಲು ನಾನು ನಿನ್ನನ್ನು ಗಮನಿಸುತ್ತೇನೆ, ಬಟ್ಟೆ ಹಾಗೂ ಶರೀರ ಶುದ್ಧವಾಗಿಟ್ಟುಕೊಳ್ಳಬೇಕೆಂದು ತಿಳಿ ಹೇಳಿದ್ದಾರೆ. ಈ ಕುರಿತ ಪೋಸ್ಟ್‌ ಫೊಟೋ ಸಮೇತ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಕೆಲವು ಪೊಲೀಸರು ಮಾಡುವ ತಪ್ಪಿಗೆ ಎಲ್ಲ ಪೊಲೀಸರನ್ನೂ ಹೊಣೆ ಮಾಡುವುದಲ್ಲ ಜನ, ನರಸಿಂಹ ಅವರಂಥವರೂ ಇಲಾಖೆಯಲ್ಲಿ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಭಿನಂದನೆಗಳು ವ್ಯಕ್ತವಾಗಿವೆ. ಮಾನಸಿಕ ಅಸ್ವಸ್ಥಗೆ ಬಟ್ಟೆ, ಊಟ ಕೊಡಿಸಿ ಮತ್ತೆ ಬೀದಿಯಲ್ಲೇ ಬಿಡುವುದು ಸರಿಯಲ್ಲ. ಅವರನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೂಲಕ ನಿರಾಶ್ರಿತರ ವಸತಿ ಸೌಲಭ್ಯಕ್ಕೆ ದಾಖಲಿಸಬೇಕು ಎಂಬ ಅನಿಸಿಕೆಗಳೂ ವ್ಯಕ್ತವಾಗಿವೆ.

ಒಟ್ಟಿನಲ್ಲಿ ಹೆಲ್ಮೆಟ್‌ ಹಾಕದೆ ವಾಹನ ಚಲಾಯಿಸುವವರಿಂದ ಮುಲಾಜಿಲ್ಲದೆ ದಂಡ ವಸೂಲಿ ಮಾಡುವ ಪಿಸಿಆರ್‌ ವಾಹನ ಹಾಗೂ ನರಸಿಂಹ ಅವರ ಕುರಿತಾಗಿ ಅಸಮಾಧಾನಗೊಂಡವರಿಗೆ ಈ ಜಾಲತಾಣದ ಸುದ್ದಿ ವಿಭಿನ್ನ ಅನುಭವ ನೀಡುವಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ