ಆ್ಯಪ್ನಗರ

ಪತ್ನಿ ಹತ್ಯೆಗೆ ಪೊಲೀಸ್ ಸುಪಾರಿ: ಮಗುವಿನ ಮುಖ ನೋಡಿ ಸುಪಾರಿ ವಾಪಸ್ ನೀಡಿದ ಕಿಲ್ಲರ್

ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಭದ್ರಾವತಿ ನ್ಯೂಟೌನ್‌ ಪೊಲೀಸ್‌ ಠಾಣೆಯ ಮುಖ್ಯಪೇದೆಯೊಬ್ಬನ ಸಂಚು ಸುಪಾರಿ ಕಿಲ್ಲರ್‌ ಮೂಲಕವೇ ಬಯಲಿಗೆ ಬಂದಿದೆ.

Vijaya Karnataka 27 Sep 2018, 10:40 am
ಶಿವಮೊಗ್ಗ : ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಭದ್ರಾವತಿ ನ್ಯೂಟೌನ್‌ ಪೊಲೀಸ್‌ ಠಾಣೆಯ ಮುಖ್ಯಪೇದೆಯೊಬ್ಬನ ಸಂಚು ಸುಪಾರಿ ಕಿಲ್ಲರ್‌ ಮೂಲಕವೇ ಬಯಲಿಗೆ ಬಂದಿದೆ.
Vijaya Karnataka Web 26SMG PC


ಪತ್ನಿಯನ್ನು ಹತ್ಯೆಗೈದು ಮತ್ತೊಂದು ಮದುವೆಯಾಗಿ ವಿದೇಶಕ್ಕೆ ಹಾರಲು ಸಿದ್ಧನಾಗಿದ್ದ ಮುಖ್ಯಪೇದೆ ರವೀಂದ್ರಗಿರಿ ಈಗ ಕಂಬಿ ಎಣಿಸುತ್ತಿದ್ದಾನೆ. ಆತನೊಂದಿಗೆ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಆರೋಪಿಗಳಾದ ಫೈರೋಜ್‌ ಖಾನ್‌, ಸುಹೇಲ್‌ ಮತ್ತು ಸೈಯದ್‌ ಇರ್ಫಾನ್‌ರನ್ನೂ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಅನಿತಾ ಅವರನ್ನು 9 ವರ್ಷದ ಹಿಂದೆ ಮದುವೆಯಾಗಿದ್ದ ಮುಖ್ಯಪೇದೆ ರವೀಂದ್ರಗಿರಿ, ಆನಂತರದಲ್ಲಿ ಭದ್ರಾವತಿ ಮೂಲದ, ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗಿ ವಿದೇಶಕ್ಕೆ ಹೋಗಿ ನೆಲೆಸಲು ತೀರ್ಮಾನಿಸಿದ್ದನೆಂದು ಹೇಳಲಾಗಿದೆ.

ಪತ್ನಿಯಿಂದ ವಿಚ್ಛೇದನ ಪಡೆದು ಆನಂತರದಲ್ಲಿ ಮತ್ತೊಂದು ಮದುವೆಯಾಗಿ ವಿದೇಶಕ್ಕೆ ಹೋಗುವುದು ತುಂಬ ತಡವಾಗುತ್ತದೆ ಎಂಬ ಕಾರಣಕ್ಕೆ ಪತ್ನಿ ಅನಿತಾ ಅವರ ಕೊಲೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಮೂವರಿಗೆ ಸುಪಾರಿ ನೀಡಿ ಮನೆ ವಿಳಾಸ, ಫೋಟೊ ಕೊಟ್ಟಿದ್ದ.

ಆರೋಪಿಗಳಲ್ಲಿ ಒಬ್ಬಾತ ಅನಿತಾರನ್ನು ಹತ್ಯೆಗೈಯಲು ಮೂರು ಬಾರಿ ಯತ್ನಿಸಿದನಾದರೂ ಎಲ್ಲ ಸಂದರ್ಭದಲ್ಲೂ ಅವರೊಂದಿಗೆ ಮಗು ಸಹ ಇದ್ದ ಕಾರಣ ಹಿಂಜರಿದಿದ್ದ. ಆನಂತರದಲ್ಲಿ ಮನಸ್ಸು ಬದಲಿಸಿದ ಆತ ಕೊಲೆ ಮಾಡಲು ಸಾಧ್ಯವಿಲ್ಲವೆಂದು ಸುಪಾರಿ ವಾಪಸು ಕೊಟ್ಟಿದ್ದ. ಆದರೆ, ರವೀಂದ್ರಗಿರಿ ಬೇರೆಯವರ ಮೂಲಕ ಇದೇ ಕೃತ್ಯ ಮಾಡಿಸಲು ಮುಂದಾಗಿದ್ದರಿಂದ ಆತ ಪೊಲೀಸ್‌ ಅಧಿಕಾರಿಗಳಿಗೆ ಶರಣಾಗಿ ಮಾಹಿತಿ ಒಪ್ಪಿಸಿದ್ದ. ಆರೋಪಿಯ ಹೇಳಿಕೆ ಆಧಾರದ ಮೇಲೆ ರವೀಂದಗಿರಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ