ಆ್ಯಪ್ನಗರ

ಸಾಲ ಮನ್ನಾ ಹೆಸರಿನಲ್ಲಿ ಪ್ರಚಾರ

ರಾಜ್ಯದ ಸಮ್ಮಿಶ್ರ ಸರಕಾರ ಬಹುತೇಕ ರೈತರ ಸಾಲಮನ್ನಾ ಮಾಡಿಲ್ಲ. ಹೆಚ್ಚುವರಿ ಸಾಲ ಹೆಸರಲ್ಲಿ ಪುಕ್ಕಟೆ ಪ್ರಚಾರ ಪಡೆಯಲಾಗುತ್ತಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 26 Mar 2019, 5:00 am
ತೀರ್ಥಹಳ್ಳಿ : ರಾಜ್ಯದ ಸಮ್ಮಿಶ್ರ ಸರಕಾರ ಬಹುತೇಕ ರೈತರ ಸಾಲಮನ್ನಾ ಮಾಡಿಲ್ಲ. ಹೆಚ್ಚುವರಿ ಸಾಲ ಹೆಸರಲ್ಲಿ ಪುಕ್ಕಟೆ ಪ್ರಚಾರ ಪಡೆಯಲಾಗುತ್ತಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web SMR-25TTH3


ಸೋಮವಾರ ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ನಡೆದ ತಾಲೂಕು ವ್ಯಾಪ್ತಿಯ ಮತಗಟ್ಟೆಗಳ ಬಿಜೆಪಿ ಪ್ರಮುಖರ ಸಭೆ ಉದ್ದೇಶಿಸಿ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್‌ ಸಾಲಕ್ಕೆ ಅಧಿಕ ಷೇರು ಹಣ ವಸೂಲಿ ಮಾಡುತ್ತಿರುವುದು ನಿಯಮಬಾಹಿರವಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ರೈತರ ಶೋಷಣೆ ನಡೆಯುತ್ತಿರುವುದು ರಾಜ್ಯ ಸರಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರಬಂಗಾರಪ್ಪ, ಮಾಜಿ ಶಾಸಕ ಬಿ. ಸ್ವಾಮಿರಾವ್‌ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಅಶೋಕಮೂರ್ತಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್‌, ರೈತ ಮೋರ್ಚಾ ಪ್ರಧಾನ ಕಾರ‍್ಯದರ್ಶಿ ಎಸ್‌.ದತ್ತಾತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ಕೋಣಂದೂರು ಮೋಹನ್‌ಶೆಟ್ಟಿ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌, ಮುಖಂಡರಾದ ಸಿ.ಬಿ. ಈಶ್ವರ್‌, ನಾಗರಾಜಶೆಟ್ಟಿ ಮತ್ತಿತರರು ಇದ್ದರು.

-------------
3 ತಿಂಗಳ ಅವಧಿಯಲ್ಲಿ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಆಗಲಿದೆ. ಅರಣ್ಯ, ಕಂದಾಯ ಪ್ರದೇಶದ ಬಗರ್‌ಹುಕುಂ ಸಾಗುವಳಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗುತ್ತದೆ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ರೈತರನ್ನು ಜೈಲಿಗೆ ಕಳುಹಿಸುವ 192 (ಎ) ನಿಯಮವನ್ನು ಏಕೆ ರದ್ದು ಪಡಿಸಲಿಲ್ಲ.

- ಹರತಾಳು ಹಾಲಪ್ಪ

---------------

ಡಿ.ಕೆ. ಶಿವಕುಮಾರ್‌ ಐಟಿ ಹಗರಣದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಲಿ. ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿದ್ದು ಕಾಂಗ್ರೆಸ್‌ ಮುಖಂಡರು ಬಿಜೆಪಿ ಜೊತೆ ಸೇರಿ ಕೆಲಸ ಮಾಡುತ್ತಿಲ್ಲವೇ. ಜೆಡಿಎಸ್‌ನವರ ಕಿರುಕುಳ ಹೆಚ್ಚಾಗಿದ್ದು ಶಿವಮೊಗ್ಗದಲ್ಲೂ ಅದೇ ಆಗುತ್ತೆ. ಮಧು ಬಂಗಾರಪ್ಪ ಅವರಿಗೆ ಭಾಷೆಯೇ ಬರಲ್ಲ.

- ಕುಮಾರಬಂಗಾರಪ್ಪ

-------------

ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ನಾಲಿಗೆ ಏನೆಲ್ಲಾ ಮಾತನಾಡುತ್ತೆ. ಈಡಿಗರ ಸಂಘಕ್ಕಾಗಿ ಶಿವಮೊಗ್ಗದಲ್ಲಿ ಸರಕಾರ ನೀಡಿದ 82 ಎಕರೆ ಪ್ರದೇಶವನ್ನು ಸ್ವಂತ ಆಸ್ತಿಯನ್ನಾಗಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಕಬಳಿಸಿದರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು ಧರ್ಮಸ್ಥಳಕ್ಕೆ ಹೋಗಿ ಹುಯ್ಯಲು ಹರಕೆ ಸಲ್ಲಿಸಲಾಗಿದೆ.

- ಬಿ. ಸ್ವಾಮಿರಾವ್‌

---------------------

ದೇಶದ ಸುಭದ್ರತೆಗಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಅಧಿಕವಾಗಿ ಬೆಂಬಲಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕಳೆದುಕೊಳ್ಳುವುದಕ್ಕೆ ಜನರು ಸಿದ್ದರಿಲ್ಲ. ಮೈತ್ರಿ ರಾಜಕಾರಣ ಜನವಿರೋಧಿ ಆಗಿದ್ದು ಬಿಜೆಪಿ ಕುರಿತು ಜನರಲ್ಲಿ ವಿಶ್ವಾಸ ಹೆಚ್ಚಿದೆ.

- ಬಿ.ವೈ.ರಾಘವೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ