ಆ್ಯಪ್ನಗರ

ಆಡ್ಡೆರಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ಬಂದರೆ ಗೋಳು

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವೈಜ್ಞಾನಿಕ ಕಾಮಗಾರಿ ಕೈಗೊಂಡರೆ ಸರಕಾರದ ಯೋಜನೆಗಳು ಹೇಗೆ ವಿಫಲವಾಗುತ್ತವೆ ಎನ್ನುವುದಕ್ಕೆ ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾ.ಪಂ. ವ್ಯಾಪ್ತಿಯ ಅಡ್ಡೇರಿಯ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ತಾಜಾ ಉದಾಹರಣೆ.

Vijaya Karnataka 26 Jun 2019, 5:00 am
ತ್ಯಾಗರ್ತಿ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವೈಜ್ಞಾನಿಕ ಕಾಮಗಾರಿ ಕೈಗೊಂಡರೆ ಸರಕಾರದ ಯೋಜನೆಗಳು ಹೇಗೆ ವಿಫಲವಾಗುತ್ತವೆ ಎನ್ನುವುದಕ್ಕೆ ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾ.ಪಂ. ವ್ಯಾಪ್ತಿಯ ಅಡ್ಡೇರಿಯ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ತಾಜಾ ಉದಾಹರಣೆ.
Vijaya Karnataka Web rain falls on railway underpass
ಆಡ್ಡೆರಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ಬಂದರೆ ಗೋಳು


ಅಡ್ಡೇರಿ ಗ್ರಾಮದ ರೈಲ್ವೇ ಗೇಟ್‌ ನಂ.117 ರೈಲ್ವೆ ಅಂಡರ್‌ ಪಾಸ್‌ ವ್ಯವಸ್ಥೆಗೆ ಅನರ್ಹವಾಗಿದ್ದರೂ ಕಳೆದ ವರ್ಷ ಅಧಿಕಾರಿಗಳ ಅವೈಜ್ಞಾನಿಕ ಸರ್ವೆಯಿಂದ ಕಾಮಗಾರಿ ಪೂರೈಸಿದ್ದು, ಮಳೆ ಬಂದರೆ ಅಂಡರ್‌ ಪಾಸ್‌ನಲ್ಲಿ 3ರಿಂದ 4 ಅಡಿಗಳಷ್ಟು ನೀರು ಶೇಖರಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಕಳೆದ ವರ್ಷದ ಮಳೆಗಾಲದಲ್ಲಿ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಮುಖಂಡರು ನೀರು ಅಂಡರ್‌ ಪಾಸ್‌ನಿಂದ ಹೊರಹೋಗಲು ಸಮರ್ಪಕ ಪೈಪ್‌ ಲೈನ್‌ ವ್ಯವಸ್ಥೆ ಅಥವಾ ಕಾಲುವೆ ನಿರ್ಮಿಸಲು ರೈಲ್ವೆ ಎಂಜಿನಿಯರ್‌ ಸದಾಶಿವ ಅವರಿಗೆ ಮೌಖಿಕ ಆದೇಶ ನೀಡಿದ್ದರು. ಈ ಸಂದರ್ಭ ರೈಲ್ವೆ ಎಂಜಿನಿಯರ್‌ ಅಕ್ಟೋಬರ್‌ ನಂತರ ಪೈಪ್‌ಲೈನ್‌ ಮುಖಾಂತರ ಅಂಡರ್‌ ಪಾಸ್‌ನಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವರ್ಷವಾದರೂ ದುರಸ್ತಿ ಕಾಮಗಾರಿ ಕೈಗೊಳ್ಳದೇ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಳೆ ಬಂದರೆ ಅಡ್ಡೇರಿ, ಕೆಳಗಿನಮನೆ, ಬಿಲಗುಂಜಿ, ಚಿಕ್ಕಬಿಲಗುಂಜಿ, ಬ್ಯಾಡರಕೊಪ್ಪ, ಜಂಬೂರುಮನೆ ಗ್ರಾಮದ ಜನರು ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಸಂಚಕಾರ ಬರಲಿದೆ. 1.40 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಸ್ಥಳೀಯ ಜನರಿಗೆ ಸಂಕಟ ತಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ತೆರಿಗೆ ಹಣ ವ್ಯಯವಾಗಿದೆ ಎಂದು ಹಿರೇಬಿಲಗುಂಜಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಲ್ಲಿಕಾ ಮಂಜುನಾಥ್‌ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಕೆಲಸ ಪ್ರಾರಂಭಿಸುವುದಾಗಿ ಹೇಳಿ, ಇದುವರೆಗೂ ಮೌನ ವಹಿಸಿದ್ದಾರೆ ಎಂದು ಸ್ಥಳೀಯರಾದ ಅಶೋಕ್‌ ದೂರಿದ್ದಾರೆ. ಮಳೆ ಆರಂಭದೊಳಗಾದರೂ ಕಾಮಗಾರಿ ಕೈಗೊಂಡು ಸ್ಥಳೀಯರ ಓಡಾಟಕ್ಕೆ ಅನುಕೂಲ ಮಾಡಿಕೊಂಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

------------
ಆಡ್ಡೆರಿ ರೈಲ್ವೆ ಅಂಡರ್‌ಪಾಸ್‌ ದುರಸ್ತಿ ಕಾಮಗಾರಿ ಎಸ್ಟಿಮೇಟ್‌ನ್ನು ಮೇಲಧಿಕಾರಿಗಳಿಗೆ ನೀಡಿದ್ದು, ಮಂಜೂರಾತಿ ದೊರೆತ ನಂತರ ಕೆಲಸ ಪ್ರಾರಂಭಿಸಲಾಗುವುದು.
-ಈಶ್ವರ್‌, ರೈಲ್ವೆ ಜೂನಿಯರ್‌ ಎಂಜಿನಿಯರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ