ಆ್ಯಪ್ನಗರ

ಹೊಸನಗರ ಪೊಲೀಸ್‌ಠಾಣೆಯಲ್ಲಿಪ್ರಕರಣ ದಾಖಲು

ಹೆರಿಗೆ ಆಗಿ ಕೆಲ ಹೊತ್ತಿನಲ್ಲೇ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

Vijaya Karnataka 8 Sep 2019, 5:00 am
ಹೊಸನಗರ: ಹೆರಿಗೆ ಆಗಿ ಕೆಲ ಹೊತ್ತಿನಲ್ಲೇ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
Vijaya Karnataka Web 7HOSP1_46

ತಾಲೂಕಿನ ಮೂಡುಗೊಪ್ಪ ನಗರದ ಉಮಾದೇವಿ(28) ಮೃತಪಟ್ಟವರು. ಹೆರಿಗೆ ದಿನ ಸಮೀಪಿಸಿದ ಹಿನ್ನೆಲೆಯಲ್ಲಿಕಳೆದ ಬುಧವಾರ ರಾತ್ರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆ ಸಾಮಾನ್ಯ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಾತ್ರಿ 9.30ರ ಸುಮಾರಿಗೆ ವೈದ್ಯರು ರಕ್ತಸ್ರಾವ ಹೆಚ್ಚಾಗಿದ್ದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಸರಕಾರಿ ಅಂಬುಲೆನ್ಸ್‌ ಮೂಲಕ ಶಿವಮೊಗ್ಗಕ್ಕೆ ತೆರಳಿ ದಾಖಲಾಗುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡ ಮಹಿಳೆ ರಾತ್ರಿ 11.30ಕ್ಕೆ ಮೃತಪಟ್ಟಿದ್ದಾರೆ. ಬರುವ ಮೊದಲೇ ದೇಹದಲ್ಲಿರಕ್ತದ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ರಕ್ತ ನೀಡಲು ಸಾಧ್ಯವಿಲ್ಲಎಂದು ಮೆಗ್ಗಾನ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸಂಬಂಧಿಗಳ ಆಕ್ರೋಶ:
ಹೆರಿಗೆಗಾಗಿ ವೈದ್ಯರು ಸೂಚಿಸಿದ ಸಮಯದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಜೇರಿಯನ್‌ ಅಗತ್ಯವಿಲ್ಲ, ಸಹಜ ಹೆರಿಗೆ ಆಗುತ್ತದೆ ಎಂದು ತಿಳಿಸಿದ್ದು ದಾಖಲಾಗಿ ಒಂದು ದಿನದ ನಂತರ ಹೆರಿಗೆ ಮಾಡಿಸಿದ್ದಾರೆ. ಅಲ್ಲದೇ ಹೆರಿಗೆ ವೇಳೆ ಸಮಸ್ಯೆಯಾಗಿದ್ದು, ರಕ್ತಸ್ರಾವ ಹೆಚ್ಚಾಗಿದೆ. ಆದರೆ ವೈದ್ಯರು ಇದನ್ನು ನಮಗೆ ತಿಳಿಸಿಲ್ಲ. ಅಂತಿಮ ಕ್ಷಣದಲ್ಲಿಮೆಗ್ಗಾನ್‌ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಅಲ್ಲಿನ ವೈದ್ಯರ ಜತೆ ಸಮಾಲೋಚನೆ ಮಾಡಿದ್ದೇನೆ. ರಕ್ತಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸುಳ್ಳು ಹೇಳಿ ಅಂಬುಲೆನ್ಸ್‌ ಮೂಲಕ ಕಳುಹಿಸಿದ್ದಾರೆ. ಆದರೆ ಅಲ್ಲಿತೆರಳಿದಾಗ ಯಾವ ವ್ಯವಸ್ಥೆಯೂ ಆಗಿರಲಿಲ್ಲ. ಅಷ್ಟರಲ್ಲಾಗಲೇ ಮಹಿಳೆ ದೇಹದಲ್ಲಿರಕ್ತದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿತ್ತು ಎಂದು ಮೃತಳ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರು ದಾಖಲು:
ತೀವ್ರ ರಕ್ತಸ್ರಾವ ಆಗುತ್ತಿದ್ದರೂ, ಮಹಿಳೆಗೆ ವೈದ್ಯರು ರಕ್ತ ನೀಡಲಿಲ್ಲ. ಕನಿಷ್ಟ ಸಮಸ್ಯೆಯ ಗಂಭೀರತೆಯನ್ನು ಸಂಬಂಧಿಗಳಿಗೆ ತಿಳಿಸಲಿಲ್ಲ. ಅಂಬುಲೆನ್ಸ್‌ನಲ್ಲಿಮಹಿಳಾ ಶುಶ್ರೂಶಕಿಯನ್ನು ಕಳುಹಿಸಲು ಮನವಿ ಮಾಡಿದರೂ ಉಪಯೋಗವಾಗಲಿಲ್ಲ. ಅಂಬುಲೆನ್ಸ್‌ನಲ್ಲಿಮಹಿಳಾ ಸಿಬ್ಬಂದಿಯೂ ಇರಲಿಲ್ಲ. ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ತಡವಾಗಿ ತಿಳಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿರುವ ಸಂಬಂಧಿಗಳು ಹೊಸನಗರದ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಅಮೃತಾಂಶ ವಿರುದ್ಧ ಶುಕ್ರವಾರ ದೂರು ದಾಖಲಿಸಿದ್ದು, ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದುಃಖದ ಮಡುವಿನಲ್ಲಿ ಕುಟುಂಬ:
ಮೃತಳು ಸ್ಥಳೀಯ ಖಾಸಗಿ ಶಿಶುವಿಹಾರದಲ್ಲಿಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, 8 ವರ್ಷದ ಮಗ ಇದ್ದಾನೆ. ಪತಿ ಗುರುರಾಜ್‌ ಟೈಲರಿಂಗ್‌ ವೃತ್ತಿ ಕೈಗೊಂಡಿದ್ದಾರೆ. 8 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಈಗ ಹೆರಿಗೆ ಸಮಯದ ವರೆಗೂ ಆರೋಗ್ಯವಾಗಿದ್ದು, ಹಠಾತ್‌ ಸಾವಿನಿಂದ ಉಮಾದೇವಿ ಕುಟುಂಬದ ಸದಸ್ಯರ ದುಃಖದ ಕಟ್ಟೆಯೊಡೆದಿದೆ. ತನ್ನ ಮಗಳು ಮೃತಪಟ್ಟ ವಿಷಯ ತಿಳಿದ ಮೃತಳ ತಂದೆ ಗುರುದತ್‌ ತೀವ್ರ ಆಘಾತಕ್ಕೆ ಒಳಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ನವಜಾತ ಶಿಶು 3 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ ಎಂದು ಮೃತಳ ಸಂಬಂಧಿಗಳು ತಿಳಿಸಿದ್ದಾರೆ. ಮೆಗ್ಗಾನ್‌ ಆಸ್ಪತ್ರೆಯ ಇಂಕ್ಯುಬೇಟರ್‌ ಘಟಕದಲ್ಲಿಇರಿಸಲಾಗಿದೆ.

ಒಟಿ ಇಲ್ಲ:
100 ಬೆಡ್‌ಗಳ ಹಾಸಿಗೆ ಇದ್ದರೂ, ಸೂಕ್ತ ಮೂಲಸೌಕರ‍್ಯದ ವ್ಯವಸ್ಥೆ ಇಲ್ಲಿನ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿಇಲ್ಲಎಂಬ ಆಕ್ರೋಶ ವ್ಯಕ್ತವಾಗಿದೆ. ವೈದ್ಯರ ಕೊರತೆ ಅಷ್ಟಿಷ್ಟು ಬಗೆಹರಿದಿದ್ದರೂ, ಆಸ್ಪತ್ರೆಯಲ್ಲಿಆಪರೇಷನ್‌ ಕೊಠಡಿ, ಐಸಿಯು ವ್ಯವಸ್ಥೆ ಇಲ್ಲ. ಇರುವ ವೈದ್ಯರಿಗೂ ಸೂಕ್ತ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಮೇಲಧಿಕಾರಿಗಳ ನಿರ್ಲಕ್ಷ್ಯದಿಂದ ಜನತೆ ಸಮಸ್ಯೆ ಅನುಭವಿಸುವಂತಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿಚರ್ಚೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ