ಆ್ಯಪ್ನಗರ

ಹೊಳಲೂರು, ಕಾಚಿನಕಟ್ಟೆ ಏತ ನೀರಾವರಿ ಯೋಜನೆಗೆ ಪುನರ್ಜನ್ಮ

ನನೆಗುದಿಗೆ ಬಿದ್ದ ಹೊಳಲೂರು ಮತ್ತು ಕಾಚಿನಕಟ್ಟೆ ಏತ ನೀರಾವರಿ ಯೋಜನೆಗಳಿಗೆ ಪುರ್ನಜನ್ಮ ಕೊಡಲು ಸಣ್ಣ ನೀರಾವರಿ ಇಲಾಖೆ ಮತ್ತೊಮ್ಮೆ ಸಿದ್ಧತೆ ನಡೆಸಿದೆ.

Vijaya Karnataka 10 Jan 2019, 5:00 am
ಶಿವಮೊಗ್ಗ : ನನೆಗುದಿಗೆ ಬಿದ್ದ ಹೊಳಲೂರು ಮತ್ತು ಕಾಚಿನಕಟ್ಟೆ ಏತ ನೀರಾವರಿ ಯೋಜನೆಗಳಿಗೆ ಪುರ್ನಜನ್ಮ ಕೊಡಲು ಸಣ್ಣ ನೀರಾವರಿ ಇಲಾಖೆ ಮತ್ತೊಮ್ಮೆ ಸಿದ್ಧತೆ ನಡೆಸಿದೆ.
Vijaya Karnataka Web reincarnation for irrigation project
ಹೊಳಲೂರು, ಕಾಚಿನಕಟ್ಟೆ ಏತ ನೀರಾವರಿ ಯೋಜನೆಗೆ ಪುನರ್ಜನ್ಮ


ಶಿವಮೊಗ್ಗ ತಾಲೂಕು ಹೊಳಲೂರು ಏತ ನೀರಾವರಿ ಯೋಜನೆಗೆ 8 ಕೋಟಿ ರೂ. ಮತ್ತು ಕಾಚಿನಕಟ್ಟೆ ಏತ ನೀರಾವರಿ ಯೋಜನೆಗೆ 3.50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದ್ದು ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಅವರು ಈ ಎರಡೂ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಬಹಳಷ್ಟು ಹೋರಾಟ ಮಾಡಿದ್ದರು. ರೈತರ ನಿಯೋಗವನ್ನು ತಮ್ಮ ಬಳಿಗೆ ಕರೆತಂದು ಯೋಜನೆ ಪೂರ್ಣಗೊಳಿಸಲು ಅನುದಾನದ ಕೋರಿಕೆ ಸಲ್ಲಿಸಿದ್ದರು. ಹೀಗಾಗಿ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

ತುಂಗಾ ಮತ್ತು ತುಂಗಭದ್ರಾ ನದಿ ನೀರನ್ನು ಬಳಸಿಕೊಂಡು ಈ ಎರಡು ಯೋಜನೆಗಳ ಮೂಲಕ ಹಲವು ಕೆರೆಗಳನ್ನು ಭರ್ತಿ ಮಾಡಿ ರೈತರ ಹೊಲ ಗದ್ದೆಗಳಿಗೆ ನೀರು ಹರಿಸಲಾಗುತ್ತದೆ. ಇವಷ್ಟೇ ಅಲ್ಲದೆ ಎರಡು ಹೊಸ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಶಿವಮೊಗ್ಗ ತಾಲೂಕು ಕಾಕನಹಸೂಡಿ ಏತ ನೀರಾವರಿ ಯೋಜನೆಗೆ 4.50 ಕೋಟಿ ರೂ. ಮತ್ತು ಶಿಕಾರಿಪುರ ತಾಲೂಕು ಗುಡ್ಡದ ತಿಮ್ಮನಕೆರೆ ಏತ ನೀರಾವರಿ ಯೋಜನೆಗೆ 1.80 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 403 ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ 183 ಯೋಜನೆಗಳು ನನೆಗುದಿಗೆ ಬಿದ್ದಿವೆ. ಇದರಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಈ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಮಾರು 300 ಕೋಟಿ ರೂ. ಬೇಕಾಗಿದೆ. ಈ ಬಾರಿ ಬಜೆಟ್‌ನಲ್ಲಿ ಅವುಗಳಿಗೆ 100 ಕೋಟಿ ರೂ. ಮೀಸಲಿಡಲಾಗಿದೆ. ಉಳಿದ ಹಣವನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸಲಾಗುತ್ತದೆ ಎಂದರು.

ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇನ್ನು 2-3 ತಿಂಗಳಲ್ಲಿ ತನಿಖಾ ವರದಿ ತಮ್ಮ ಕೈ ಸೇರಲಿದೆ. ಆನಂತರದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ ಗುತ್ತಿಗೆದಾರರಿಗೆ ಹಣ ವಾಪಸ್ಸು ಪಡೆಯುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್‌, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಜೆಡಿಎಸ್‌ ಮುಖಂಡ ಕಾಂತರಾಜು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ