ಆ್ಯಪ್ನಗರ

ಧರ್ಮ ಶಾಶ್ವತ ಸುಖ ಕೊಡುವ ಮಾರ್ಗ

ನಮ್ಮ ಆಚಾರ, ವಿಚಾರಗಳಲ್ಲಿ ನ್ಯೂನತೆಯುಂಟಾದಾಗ, ಮನಸ್ಸಿನ ವಿಕಾರ ಹೆಚ್ಚಾದಾಗ ಚಂಚಲತೆಯಿಂದ ಅದು ಅಶುಭವಾಗಿ ಪರಿಣಮಿಸುತ್ತದೆ. ಆದರೆ ಧರ್ಮವು ಶಾಶ್ವತ ಸುಖ ಕೊಡುವ ಮಾರ್ಗ ಎಂದು ಶ್ರೀಕ್ಷೇತ್ರ ಹೊಂಬುಜದ ಡಾ. ಶ್ರೀದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

Vijaya Karnataka 24 Aug 2019, 5:00 am
ರಿಪ್ಪನ್‌ಪೇಟೆ: ನಮ್ಮ ಆಚಾರ, ವಿಚಾರಗಳಲ್ಲಿ ನ್ಯೂನತೆಯುಂಟಾದಾಗ, ಮನಸ್ಸಿನ ವಿಕಾರ ಹೆಚ್ಚಾದಾಗ ಚಂಚಲತೆಯಿಂದ ಅದು ಅಶುಭವಾಗಿ ಪರಿಣಮಿಸುತ್ತದೆ. ಆದರೆ ಧರ್ಮವು ಶಾಶ್ವತ ಸುಖ ಕೊಡುವ ಮಾರ್ಗ ಎಂದು ಶ್ರೀಕ್ಷೇತ್ರ ಹೊಂಬುಜದ ಡಾ. ಶ್ರೀದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
Vijaya Karnataka Web SMR-23RPT2


ಶ್ರೀಕ್ಷೇತ್ರ ಹೊಂಬುಜದಲ್ಲಿ ಶುಕ್ರವಾರ ನಾಲ್ಕನೇ ಶ್ರಾವಣ ಸಂಪತ್‌ ಪೂಜಾ ಮಹೋತ್ಸವ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಮಹಾನ್‌ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು.

ದಕ್ಷಿಣ ಭಾರತದಲ್ಲಿ ಶತಮಾನ ಕಂಡರಿಯದ ರೀತಿ ಪ್ರವಾಹ ಉಂಟಾಗಿ ಜನ ತತ್ತರಿಸಿ ಹೋಗಿದ್ದಾರೆ. ತಮ್ಮ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೃಷ್ಣ ತೀರದ ಸ್ಥಿತಿ ಶೋಚನೀಯವಾಗಿದೆ. ಪ್ರಕೃತಿ ಮುಂದೆ ಮನುಷ್ಯ ಅಥವಾ ಯಾಂತ್ರಿಕ ಶಕ್ತಿಗಳು ಏನೂ ಮಾಡಲಾಗದು. ನೆರೆ ಸಂತ್ರಸ್ತರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸುತ್ತಿರುವ ವೀರ ಯೋಧರ ಕಾರ‍್ಯ ಶ್ಲಾಘನೀಯ ಎಂದರು.

ಈಗಾಗಲೇ ಸರಕಾರ, ಸಂಘ-ಸಂಸ್ಥೆ, ನಾಗರೀಕರು ಮುಕ್ತ ಹಸ್ತದಿಂದ ಸಹಕಾರ ನೀಡುತ್ತಿದ್ದಾರೆ. ಸಂತ್ರಸ್ತರಿಗೆ ನೆರವಾಗುವ ಕಾರ‍್ಯದಲ್ಲಿ ಎಲ್ಲ ಮಠ ಮಾನ್ಯವು ಭಾಗಿಯಾಗಿದೆ. ಪ್ರವಾಹ ಪೀಡಿತ ಎಲ್ಲ ಜನರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಎಲ್ಲ ಧರ್ಮ ಬಾಂಧವರು ಈ ಸಂತ್ರಸ್ತರ ನೆರವಿಗೆ ಸಹಕರಿಸಬೇಕೆಂದು ವಿನಂತಿಸಿದರು.

ಬೆಳಗ್ಗೆ ಭಗವಾನ್‌ ಶ್ರೀಪಾಶ್ರ್ವನಾಥ ಸ್ವಾಮಿ ಜಿನಾಲಯದಲ್ಲಿ ಅಭಿಷೇಕ, ಮಹಾಪೂಜೆ ಬಳಿಕ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಸರ್ವಾಲಂಕಾರದೊಂದಿಗೆ ವಿಶೇಷ ಪೂಜೆ ಜರುಗಿದವು. ಹುಬ್ಬಳ್ಳಿಯ ವರೂರು ಜೈನ ಮಠದ ಶ್ರೀಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸಿದರು.

ತಮಿಳುನಾಡು, ಮಹಾರಾಷ್ಟ್ರ , ಇತರ ರಾಜ್ಯಗಳಿಂದ ಭಕ್ತವೃಂದ ಆಗಮಿಸಿ ಉಡಿ ಅರ್ಪಿಸಿದರು. ಅಭೀಷ್ಠ ಪ್ರಸಾಧ ಭವನದಲ್ಲಿ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ