ಆ್ಯಪ್ನಗರ

ಗುಣವನ್ನು ಪೂಜಿಸುವ ಧರ್ಮ 'ಬ್ರಾಹ್ಮಣ್ಯ'

ಬ್ರಾಹ್ಮಣರು 'ಗುಣ' ಆರಾಧಕರು. ಅದಕ್ಕಾಗಿಯೇ, ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ 'ರಾವಣ'ನಿಗೆ ಪೂಜಿಸದೇ ರಾಮಾಯಣದ ನಾಯಕ ಶ್ರೀ ರಾಮ ಕ್ಷತ್ರೀಯನಾದರೂ ಆತನಿಗೆ ಪೂಜಿಸುತ್ತಾರೆ ಎಂದು ಸಂಸದ ಪ್ರಹ್ಲಾದ್‌ ಜೋಶಿ ಹೇಳಿದರು.

Vijaya Karnataka 3 May 2018, 5:00 am
ಶಿವಮೊಗ್ಗ: ಬ್ರಾಹ್ಮಣರು 'ಗುಣ' ಆರಾಧಕರು. ಅದಕ್ಕಾಗಿಯೇ, ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದ 'ರಾವಣ'ನಿಗೆ ಪೂಜಿಸದೇ ರಾಮಾಯಣದ ನಾಯಕ ಶ್ರೀ ರಾಮ ಕ್ಷತ್ರೀಯನಾದರೂ ಆತನಿಗೆ ಪೂಜಿಸುತ್ತಾರೆ ಎಂದು ಸಂಸದ ಪ್ರಹ್ಲಾದ್‌ ಜೋಶಿ ಹೇಳಿದರು.
Vijaya Karnataka Web religion that worships brahmanya
ಗುಣವನ್ನು ಪೂಜಿಸುವ ಧರ್ಮ 'ಬ್ರಾಹ್ಮಣ್ಯ'


ಬ್ರಾಹ್ಮಣ ಜಾಗೃತಿ ಸಭಾ ವತಿಯಿಂದ ನಗರದ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ 'ಜಾಗೃತಿ ಸಮಾವೇಶ' ಉದ್ಘಾಟಿಸಿ ಮಾತನಾಡಿದರು.

ರಾಮಾಯಣದ ಪಾತ್ರ, ಗುಣ ವೈಶಿಷ್ಟ್ಯಗಳನ್ನು ಹೊಗಳುತ್ತ ಅವರು, ರಾಜಕೀಯದಲ್ಲೂ ಅಭ್ಯರ್ಥಿ ವಿಪ್ರನೇ ಆದರೂ ಯಾವ ಪಕ್ಷದ ಸಂಗದಲ್ಲಿದ್ದಾರೆ ಎಂಬುದನ್ನು ಮನಗಾಣಬೇಕೆಂದು ಸೂಚಕವಾಗಿ ಹೇಳಿದರು.

ವೈಚಾರಿಕ ಸಂಘರ್ಷ: ಯಾವುದೇ ವಿಷಯಗಳಿಗೆ ಐಕ್ಯತೆ ತೋರದ ದೇಶದ ಎಲ್ಲ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದಕ್ಕಾಗಿ ಒಂದಾಗಿವೆ. ಇದೇ ಅಜೆಂಡಾದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.

'ಮೋದಿ ಅವರು ರಾಷ್ಟ್ರೀಯ ವಿಚಾರಗಳೊಂದಿಗೆ ಮುನ್ನುಗ್ಗುತ್ತಿರುವ ಕಾರಣದಿಂದಾಗಿಯೇ ಎಲ್ಲ ಪಕ್ಷಗಳು ಇವರ ವಿರುದ್ಧ ಟೊಂಕಕಟ್ಟಿ ನಿಂತಿವೆ. ಸ್ವಾತಂತ್ರ್ಯನಂತರ ಸುಮಾರು ವರ್ಷಗಳ ಆಡಳಿತ ನೀಡಿರುವ ರಾಷ್ಟ್ರೀಯ ಪಕ್ಷಗಳು ಬಗೆಹರಿಸಲಾಗದ ಹತ್ತಾರು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ನೀಡಿರುವುದೇ ಈ ಎಲ್ಲ ವಿರೋಧಕ್ಕೆ ಕಾರಣ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಂಗ್ಲಾ ಮತ್ತು ಭಾರತ ನಡುವಿನ ಗಡಿ ವಿವಾದಕ್ಕೆ ಇತಿಶ್ರೀ ಹಾಕಲು ಕಾಂಗ್ರೆಸ್‌ ಮನಸ್ಸು ಮಾಡಲಿಲ್ಲ. ಗಡಿ ವಿವಾದದ ಮಧ್ಯೆಯೇ ಸುಮಾರು ಮೂರೂವರೆ ಕೋಟಿ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ಭಾರತ ಪ್ರವೇಶಿಸಿದರೂ ಈ ಬಗ್ಗೆ ಸೊಲ್ಲೆತ್ತಲಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇ ಎಲ್ಲ ಪಕ್ಷಗಳು 'ಮೋದಿ'ಗೆ ವಿರೋಧಿಸಲು ಕಾರಣ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಬ್ರಾಹ್ಮಣರು ನಿರಂತರ ಶೋಷಣೆಗೀಡಾಗುತ್ತಿದ್ದರು. ದೇಶದ ಸಂಪತ್ತು ದುರ್ಬಳಕೆ ಆಗುತ್ತಿತ್ತು. ಮೂಲ ಭಾರತೀಯರೇ ವಾಸಿಸುವುದು ಕಷ್ಟವಾಗಿತ್ತು. ಈ ಎಲ್ಲದ್ದಕ್ಕೂ ತಾತ್ವಿಕ ಅಂತ್ಯ ಹಾಡಿದ್ದೇ ತಪ್ಪು ಎನ್ನುವಂತೆ ಬಿಂಬಿಸಲಾಗಿದೆ. ಈಗ ಈ ವಿರೋಧ 'ವೈಚಾರಿಕ ಸಂಘರ್ಷ'ವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರಾಜ್ಯಕ್ಕೆ ಚರಂಡಿ, ನೀರು, ದೀಪ ಮತ್ತಿತರ ಸವಲತ್ತು ನೀಡುವುದಷ್ಟೇ ಅಧಿಕಾರದಲ್ಲಿರುವ ಸರಕಾರದ ಕೆಲಸವಲ್ಲ. ಇದರೊಂದಿಗೆ ಭಾರತೀಯ ಸಂಸ್ಕೃತಿಯನ್ನೂ ಉಳಿಸಬೇಕು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ವಿಚಾರದಲ್ಲಿ ಸೋತಿದೆ ಎಂದು ಆರೋಪಿಸಿದರು.

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಮಾತನಾಡಿ, ಮೋದಿ ಅವರು ನೆಲಕಚ್ಚಿದ್ದ ಭಾರತದ ಪ್ರತಿಷ್ಠೆಯನ್ನು ಮೇಲಕ್ಕೆತ್ತಿದ್ದಾರೆ. ಈಶ್ವರಪ್ಪ ಅವರನ್ನು ನಮ್ಮೂರ 'ವಿದ್ಯಾರಣ್ಯ'ರಾಗಿ ಆಯ್ಕೆ ಮಾಡಿ, ಈ ಮಧ್ಯೆ ನನ್ನನ್ನು ಮರೆಯಬೇಡಿ ಎಂದು ನಗೆ ಚಟಾಕಿ ಹಾರಿಸಿದರು.

ಎಚ್‌.ಎಸ್‌.ಮಾಧವರಾವ್‌ ಅಧ್ಯಕ್ಷತೆ ವಹಿಸಿದ್ದರು. ಡಾ.ವೆಂಕಟರಾವ್‌, ಡಾ.ಕೆ.ಆರ್‌.ಶ್ರೀಧರ್‌, ಎಚ್‌.ವಿ.ಸುಬ್ರಮಣ್ಯ, ಎ.ಶಿವರಾಮ್‌ ಭಟ್‌, ಎಂ.ಆರ್‌.ಸತ್ಯನಾರಾಯಣ್‌, ಕಾರಕೋಡ್ಲು ಗುರುಮೂರ್ತಿ, ಅ.ಪ.ರಾಮಭಟ್ಟರು, ಬಾ.ರಾ.ಜಗದೀಶಾಚಾರ್ಯರು, ರಾಜಲಕ್ಷ್ಮಿ, ಎಸ್‌.ಎನ್‌.ಶ್ರೀನಿವಾಸ್‌ ಮೂರ್ತಿ, ರುಕ್ಮಿಣಿ ನಾಯಕ್‌, ದೀಪು ಕುಲಕರ್ಣಿ, ಗೋವಿಂದ್‌ ಸ್ವಾಮಿ, ಯು.ಎಂ. ಶಂಕರನಾರಾಯಣ ಹೊಳ್ಳ, ಕೆ.ಸಿ.ನಟರಾಜ್‌ ಭಾಗವತ್‌, ಎಂ.ಶಂಕರ್‌, ಎ.ಜೆ.ಶ್ರೀನಿವಾಸ್‌ ಇತರರಿದ್ದರು. ಗಾಜನೂರು ಗಣೇಶ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ