ಆ್ಯಪ್ನಗರ

ಜೋಗಕ್ಕೆ ಸೆಡ್ಡು ಹೊಡೆದ ಧಾರ್ಮಿಕ ಸ್ಥಳಗಳು!

ಪ್ರವಾಸಿಗರ ಸ್ವರ್ಗ ಎಂದೇ ಹೇಳಲಾಗುವ ಶಿವಮೊಗ್ಗ ತನ್ನ ಒಡಲಿನಲ್ಲಿ ಪ್ರಕೃತಿ ಸೌಂದರ್ಯ ತುಂಬಿಕೊಡಿದೆ. ಇದನ್ನು ವೀಕ್ಷಿಸಲೆಂದೇ ಪ್ರತಿ ವರ್ಷ ಲಕ್ಷಾಂತರ ಜನ ಇಲ್ಲಿಗೆ ಆಗಮಿಸುತ್ತಾರೆ. ವಿಪರ್ಯಾಸವೆಂದರೆ, ವಿಶ್ವವಿಖ್ಯಾತ ಜೋಗ್‌ ಜಲಪಾತಕ್ಕಿಂತಲೂ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯೇ ಅಧಿಕವಿರುವುದು ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.

Vijaya Karnataka 11 Jul 2019, 5:00 am
ಆತೀಶ್‌ ಬಿ. ಕನ್ನಾಳೆ
Vijaya Karnataka Web SMG-0907-2-15-9SMG1

ಶಿವಮೊಗ್ಗ:
ಪ್ರವಾಸಿಗರ ಸ್ವರ್ಗ ಎಂದೇ ಹೇಳಲಾಗುವ ಶಿವಮೊಗ್ಗ ತನ್ನ ಒಡಲಿನಲ್ಲಿ ಪ್ರಕೃತಿ ಸೌಂದರ್ಯ ತುಂಬಿಕೊಡಿದೆ. ಇದನ್ನು ವೀಕ್ಷಿಸಲೆಂದೇ ಪ್ರತಿ ವರ್ಷ ಲಕ್ಷಾಂತರ ಜನ ಇಲ್ಲಿಗೆ ಆಗಮಿಸುತ್ತಾರೆ. ವಿಪರ್ಯಾಸವೆಂದರೆ, ವಿಶ್ವವಿಖ್ಯಾತ ಜೋಗ್‌ ಜಲಪಾತಕ್ಕಿಂತಲೂ ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯೇ ಅಧಿಕವಿರುವುದು ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.

ಪ್ರವಾಸೋದ್ಯಮ ಇಲಾಖೆಯ ಮೂರು ವರ್ಷಗಳ ಅಂಕಿ ಅಂಶ ಪ್ರಕಾರ, ಜೋಗ ಜಲಪಾತ ವೀಕ್ಷಿಸಲು ಬಂದವರ ಸಂಖ್ಯೆ 2017ರಲ್ಲಿ 10 ಲಕ್ಷ ಗಡಿದಾಟಿತ್ತು. ಇದರ ನಂತರ ಇದುವರೆಗೆ ಈ ಸಂಖ್ಯೆ ತಲುಪಿಲ್ಲ. 2018, 2019ರಲ್ಲಿ ಚಂದ್ರಗುತ್ತಿ, ಸಿಗಂದೂರು ದೇವಸ್ಥಾನಕ್ಕೆ ಭೇಟಿ ನೀಡಿದವರ ಸಂಖ್ಯೆ ಜೋಗ್‌ ಸೊಬಗು ಸವಿಯಲು ಬಂದವರಿಗಿಂತ ಅಧಿಕವಿದೆ. ಸೊರಬ ತಾಲೂಕಿನ ಗುಡವಿಗಂತೂ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ.

ದೇಶದ ನಾನಾ ಭಾಗಗಳಿಂದ ಶಿವಮೊಗ್ಗಕ್ಕೆ ಬರುವ ಪ್ರವಾಸಿಗರು ವೀಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಧಾರ್ಮಿಕ ಪುಣ್ಯಕ್ಷೇತ್ರಗಳಾದ ಚಂದ್ರಗುತ್ತಿ, ಸಿಂಗದೂರಿಗೆ. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ, ಸಕ್ರೆಬೈಲು ಆನೆ ಬಿಡಾರಕ್ಕೂ ಉತ್ತಮ ಬೇಡಿಕೆ ಇದೆ. ವಾರ್ಷಿಕ ಸರಾಸರಿ 4-5 ಸಾವಿರ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇವರು ಮಾತ್ರ ಜೋಗ ಸೇರಿದಂತೆ ಪ್ರಕೃತಿ ಸೌಂದರ್ಯ ಹೊಂದಿರುವ ಸ್ಥಳಗಳ ವೀಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

2017ರಲ್ಲಿ ಉತ್ತಮ ವರ್ಷಧಾರೆ ದಾಖಲಾಗಿರಲಿಲ್ಲ. ಲಿಂಗನಮಕ್ಕಿಯಿಂದ ಜೋಗ್‌ಗೆ ನೀರು ಬಿಟ್ಟಿರಲಿಲ್ಲ. ಆದರೂ ಆ ವರ್ಷ ಅತ್ಯಧಿಕ 10 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2018ರಲ್ಲಿ ಜೋಗ್‌ ಮೈದುಂಬಿ ಹರಿದರೂ 6.31 ಲಕ್ಷ ಜನ ಮಾತ್ರ ಇಲ್ಲಿಗೆ ಬಂದಿದ್ದರು. ಪ್ರಸಕ್ತ ವರ್ಷ ನೈಋುತ್ಯ ಮಾನ್ಸೂನ್‌ ತಿಂಗಳು ವಿಳಂಬವಾಗಿ ಬಂದರೂ ಜೋಗ್‌ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದಾಗಿ ಜುಲೈನಲ್ಲಿ ತುಂಬಿ ತನ್ನ ಸಹಜ ಸೌಂದರ್ಯಕ್ಕೆ ಜಲಪಾತ ಮರಳಿತ್ತು. ಆದರೂ ಜನವರಿಯಿಂದ ಜೂನ್‌ವರೆಗೆ ಇಲ್ಲಿಗೆ 1.36 ಲಕ್ಷ ಜನರು ಭೇಟಿ ನೀಡಿದ್ದಾರೆ.

ಗುಡವಿ ಪಕ್ಷಿಧಾಮ ನಿರ್ಲಕ್ಷ್ಯ:

ಸಮೀಕ್ಷೆಯೊಂದರ ಪ್ರಕಾರ, 487 ಕುಟುಂಬಗಳಿಗೆ ಸೇರಿದ 217 ವಿವಿಧ ಜಾತಿಯ ಪಕ್ಷಿಗಳು ಸೊರಬ ತಾಲೂಕಿನ ಗುಡವಿ ಪಕ್ಷಿಧಾಮಕ್ಕೆ ಬರುತ್ತಿದ್ದವು. ಆದರೀಗ, ಅವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಪ್ರವಾಸಿಗರಿಗೆ ಪೂರಕ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಇಲ್ಲಿಗೆ ಭೇಟಿ ನೀಡಲು ಜನ ಹಿಂದೇಟು ಹಾಕುತ್ತಿದ್ದಾರೆ.

ಬಂದ ಟೂರಿಸ್ಟ್‌ಗಳಿಗೆ ಕ್ಯಾಂಟೀನ್‌, ಸಮರ್ಪಕ ಶೌಚಾಲಯ, ಕುಡಿಯಲು ಶುದ್ಧ ನೀರು, ಉಳಿದುಕೊಳ್ಳಲು ವ್ಯವಸ್ಥೆ, ರಸ್ತೆ ಮತ್ತಿತರ ಸೌಲಭ್ಯಗಳಿಲ್ಲ. ಬೇಲಿ ಇಲ್ಲದಿರುವುದರಿಂದ ಮಂಗಗಳ ಹಾವಳಿ ಹೆಚ್ಚಿದ್ದು, ಪಕ್ಷಿ ಮೊಟ್ಟೆಗಳು ಹಾಳಾಗುತ್ತಿವೆ. ಕೆರೆ ಹೂಳೆತ್ತುವ ಕಾರ್ಯವಾಗಿಲ್ಲ. ಪಕ್ಷಿಧಾಮದ ಕೇಂದ್ರ ಆಕರ್ಷಣೆಯೇ ಬಾನಾಡಿಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಸೌಂದರ್ಯವೂ ಹಾಳಾಗಿದೆ. ಹೀಗಾಗಿ, ಈ ಸ್ಥಳ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.

--------
ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸಲಾಗಿದೆ. ವನ್ಯಜೀವಿ ಸ್ಥಳಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವಾದ್ದರಿಂದ ಅಂತಹ ಕಡೆ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ನಾನಾ ಯೋಜನೆ ರೂಪಿಸಿ ಸರಕಾರಕ್ಕೆ ಒಪ್ಪಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಲಾಗುವುದು.

- ಎಲ್‌.ಹನುಮನಾಯ್ಕ್‌,
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ